ಹಿಂದೆ ತಳ್ಳಿ ಐಸಾ.. ಇನ್ನೂ ತಳ್ಳಿ ಐಸಾ: ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್ಆರ್ಟಿಸಿ ಬಸ್
ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಸವಣೂರು ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ಮಧ್ಯದಲ್ಲೇ ಕೆಟ್ಟು ನಿಂತಿದೆ. ಇಂಜಿನ್ ಸೀಜ್ ಆಗಿರುವುದರಿಂದ ಪ್ರಯಾಣಿಕರು ಪರದಾಡಬೇಕಾಯಿತು. ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಸಾರ್ವಜನಿಕರು ಬಸ್ಸನ್ನು ತಳ್ಳುವ ಪರಿಸ್ಥಿತಿ ಉಂಟಾಯಿತು. ಸವಣೂರು ಡಿಪೋದ ಈ ಬಸ್ನ ನಿರ್ವಹಣೆ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಹಾವೇರಿ, ಫೆ.12: ಜಿಲ್ಲೆಯ ಶಿಗ್ಗಾಂವಿ ಪಟ್ಟಣದ ಸವಣೂರು ರಸ್ತೆಯಲ್ಲಿ ಕೆಎಸ್ಆರ್ಟಿಸಿ ಬಸ್ ಒಂದು ನಡುರಸ್ತೆಯಲ್ಲೇ ಕೆಟ್ಟು ನಿಂತು ಸಾರ್ವಜನಿಕರಿಗೆ ತೀವ್ರ ತೊಂದರೆಯುಂಟು ಮಾಡಿದೆ. ಬಸ್ಸಿನ ಇಂಜಿನ್ ಸೀಜ್ ಆಗಿರುವ ಕಾರಣ ವಾಹನವು ಚಲಿಸದೆ ರಸ್ತೆ ಮಧ್ಯದಲ್ಲೇ ನಿಂತಿದೆ. ಇದರಿಂದಾಗಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಪ್ರಯಾಣಿಕರು ಬಸ್ ಕೆಟ್ಟು ನಿಂತಿದ್ದರಿಂದ ಗಮ್ಯಸ್ಥಾನ ತಲುಪಲು ಪರದಾಡಬೇಕಾಯಿತು. ಕೆಲವರು ನಡೆದುಕೊಂಡೇ ಹೊರಟರೆ, ಇನ್ನೂ ಕೆಲವರು ಬಸ್ಸನ್ನು ತಳ್ಳುವ ಪ್ರಯತ್ನ ಮಾಡಿದರು. ಈ ಘಟನೆಯ ಸಂದರ್ಭದಲ್ಲಿ, ಕೆಎಸ್ಆರ್ಟಿಸಿ ಸಿಬ್ಬಂದಿ ಜೊತೆ ಸಾರ್ವಜನಿಕರು ಮಾತುಕತೆ ನಡೆಸಿದರು. ಬಸ್ನ ರಿಪೇರಿಗೆ ಹಣವಿಲ್ಲ ಎಂದು ಕೇಳಿಬಂದಿದ್ದು, ಇಂಜಿನ್ ಸೀಜ್ ಆಗಿದೆ ಎಂದು ಸಿಬ್ಬಂದಿ ಒಪ್ಪಿಕೊಂಡರು. ಇದು ಸವಣೂರು ಡಿಪೋಗೆ ಸೇರಿದ ಬಸ್ ಆಗಿದ್ದು, ಡಿಪೋದಲ್ಲಿ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಕರ್ತವ್ಯದಲ್ಲಿದ್ದ ಚಾಲಕ ಬಾಲಪ್ಪ ಮತ್ತು ನಿರ್ವಾಹಕ ಜ್ಞಾನಪ್ಪ ಅವರು ತಾವು ಹೊಸಬರು, ಮೂರು ದಿನಗಳ ಹಿಂದೆ ನೇಮಕವಾಗಿದ್ದೇವೆ ಎಂದು ತಿಳಿಸಿದ್ದಾರೆ. ಇನ್ನು ಸರಕಾರಿ ಬಸ್ಗಳ ಕಳಪೆ ನಿರ್ವಹಣೆ ಮತ್ತು ಅದರಿಂದಾಗುವ ತೊಂದರೆಗಳ ಬಗ್ಗೆ ಜನರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
