ಎಲ್ಲರ ಚಿತ್ತ ಲಕ್ಕುಂಡಿಯತ್ತ: ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಉತ್ಖನನ ಕಾರ್ಯ ಆರಂಭ
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ಉತ್ಖನನ ಕಾರ್ಯ ಆರಂಭಗೊಂಡಿದೆ. ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು ಆಳಿದ ಈ ಪ್ರದೇಶ ಅಪಾರ ಇತಿಹಾಸವನ್ನು ಹೊಂದಿದೆ. ನಾಣ್ಯಾಗಾರರು, ಅಕ್ಕಸಾಲಿಗರ ಕುರುಹುಗಳು ದೊರೆತಿದ್ದು, ವಾಸ್ತುಶಿಲ್ಪಗಳು, ವಜ್ರ, ವೈಡೂರ್ಯ, ಮುತ್ತು-ರತ್ನಗಳಂತಹ ಸಂಪತ್ತು ಸಿಗುವ ನಿರೀಕ್ಷೆಯಿದೆ.
ಗದಗ, ಜ.16: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ (Lakkundi) ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಉತ್ಖನನ ಕಾರ್ಯ ಇಂದಿನಿಂದ ಪ್ರಾರಂಭಗೊಂಡಿದೆ. ಸಿದ್ಧರಕೊಳ್ಳ ಎಂಬ ಸ್ಥಳದಲ್ಲಿ ಕೇವಲ 10 ಮೀಟರ್ ವ್ಯಾಪ್ತಿಯಲ್ಲಿ ಉತ್ಖನನ ಮಾಡಲಾಗುತ್ತಿದೆ. ಲಕ್ಕುಂಡಿಯು ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಹೊಯ್ಸಳರು ಸೇರಿದಂತೆ ಅನೇಕ ರಾಜ ಮಹಾರಾಜರ ಆಳ್ವಿಕೆಗೆ ಒಳಪಟ್ಟಿದ್ದು, ಬಾದಾಮಿಗಿಂತಲೂ ಹೆಚ್ಚು ಐತಿಹಾಸಿಕ ಮಹತ್ವವನ್ನು ಹೊಂದಿದೆ ಎಂದು ಶಾಸನಗಳಲ್ಲಿ ಉಲ್ಲೇಖವಾಗಿದೆ. ಈ ಪ್ರದೇಶದಲ್ಲಿ ಉತ್ಖನನ ನಡೆಸಿದರೆ ಅಪಾರ ಪ್ರಮಾಣದ ಇತಿಹಾಸ ಬೆಳಕಿಗೆ ಬರಲಿದೆ ಎಂಬ ನಂಬಿಕೆ ಇದೆ. ದೇವಸ್ಥಾನದ 50 ಮೀಟರ್ ವ್ಯಾಪ್ತಿಯಲ್ಲಿ ನಾಣ್ಯಗಳನ್ನು ತಯಾರಿಸುತ್ತಿದ್ದ ಟಂಕಸಾಲೆ ಅಥವಾ ನಾಣ್ಯಗಾರರ ಕುಟುಂಬದ ಕುರುಹುಗಳು, ಅಕ್ಕಸಾಲಿಗರ ಮನೆತನಕ್ಕೆ ಸಂಬಂಧಿಸಿದ ಅವಶೇಷಗಳು ಕಂಡುಬಂದಿವೆ. ಇದೀಗ ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ಭಾರತೀಯ ಪುರಾತತ್ವ ಇಲಾಖೆ ಸೇರಿ ಈ ಉತ್ಖನನ ಶುರು ಮಾಡಿದ್ದಾರೆ.
ಈ ಸಂಪದ್ಭರಿತ ನಾಡಿನಲ್ಲಿ ಹಿಂದೆಯೂ ಅನೇಕ ಕಡೆ ಉತ್ಖನನ ನಡೆದಾಗ ವಜ್ರ, ವೈಡೂರ್ಯ, ಮುತ್ತು, ರತ್ನ ಮತ್ತು ಆಭರಣಗಳು ದೊರೆತಿವೆ. ಲಕ್ಕುಂಡಿಯು 101 ದೇವಸ್ಥಾನಗಳು ಮತ್ತು 101 ಬಾವಿಗಳನ್ನು ಹೊಂದಿರುವ ಪವಿತ್ರ ಸ್ಥಳವಾಗಿದೆ. ಉತ್ಖನನಕ್ಕಾಗಿ ಅಧಿಕಾರಿಗಳು ಸ್ಥಳವನ್ನು ಗುರುತಿಸಿ, ಅಳತೆ ಕಾರ್ಯ ನಡೆಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇತರ ಗುರುತಿಸಲಾದ ಪ್ರದೇಶಗಳಲ್ಲೂ ಉತ್ಖನನ ಕಾರ್ಯ ಆರಂಭವಾಗಿದೆ.
ಜನವರಿ 10ರಂದು ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆಯಾಗಿತ್ತು. ತಂಬಿಗೆಯಲ್ಲಿ ಒಂದು ಕೆಜಿ ನಿಧಿ ಪತ್ತೆಯಾಗಿತ್ತು. ಗಂಗವ್ವ ಬಸವರಾಜ ರಿತ್ತಿ ಮನೆ ಜಾಗದಲ್ಲಿ ಈ ನಿಧಿ ಕಂಡು ಬಂದಿತ್ತು. ಈ ಘಟನೆಯ ನಂತರ ಸ್ಥಳಕ್ಕೆ ಎಡಿಸಿ ದುರ್ಗೇಶ್, ಎಸ್ಪಿ ರೋಹನ್ ಜಗದೀಶ್, ಎಸಿ ರಂಗಪ್ಪ, ತಹಶೀಲ್ದಾರ್ ಶ್ರೀನಿವಾಸ ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ನಿಧಿ ಸಿಕ್ಕ ನಂತರ ಈ ಚಿನ್ನ ಯಾರಿಗೆ ಸೇರಬೇಕು ಎಂಬ ಚರ್ಚೆಗಳು ಕೂಡ ನಡೆದವು. ಸರ್ಕಾರ ಕೂಡ ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ಮಾಡಿದ ನಂತರ ಚಿನ್ನವನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿತ್ತು. ನಂತರದಲ್ಲಿ ಈ ಚಿನ್ನದ ಬಗ್ಗೆ ಹಾಗೂ ಲಕ್ಕುಂಡಿಯ ಪುಣ್ಯಕ್ಷೇತ್ರಗಳಲ್ಲಿ ಚಿನ್ನ ಇರಬಹುದು ಎಂಬ ಬಗ್ಗೆ ಚರ್ಚೆಗೆ ಬಂತು.
ಇದನ್ನೂ ಓದಿ: ಮನೆ ಕಟ್ಟಲು ಅಡಿಪಾಯ ತೆಗೆಯುವ ವೇಳೆ ನಿಧಿ ಪತ್ತೆ, ಎಷ್ಟು ಕೆಜಿ ಗೊತ್ತಾ?
ಈ ಚಿನ್ನದ ನಿಧಿ ಸಿಕ್ಕ ನಂತರ ಗಂಗವ್ವ ಬಸವರಾಜ ರಿತ್ತಿ ಕುಟುಂಬ ಕೂಡ ಸಂಕಷ್ಟಕ್ಕೆ ಸಿಲುಕಿತ್ತು. ಈ ಘಟನೆಯ ನಂತರ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನಷ್ಟು ಸ್ಥಳಗಳಲ್ಲಿ ಉತ್ಖನನ ಮಾಡಬೇಕು ಎಂಬ ನಿರ್ಧಾರಕ್ಕೆ ಬಂತು. ಈ ಬಗ್ಗೆ ಅನೇಕ ಇತಿಹಾಸಗಾರರು ಹಾಗೂ ತಜ್ಙರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಈ ಚಿನ್ನ ಯಾರಿಗೆ ಸೇರಬೇಕು ಎಂಬ ಗೊಂದಲಗಳು ಕೂಡ ಮೂಡಿತು. ಕೆಲವರು ಕೂಡ ಗಂಗವ್ವ ಬಸವರಾಜ ರಿತ್ತಿ ಕುಟುಂಬಕ್ಕೆ ಸೇರಬೇಕು ಎಂದು ಹೇಳಿದ್ರೆ. ಇನ್ನು ಇತಿಹಾಸಗಾರರು ಇದು ಸರ್ಕಾರಕ್ಕೆ ಸೇರಿದ್ದು ಎಂದು ವಾದಿಸಿದ್ರು. ಕೊನೆಯಲ್ಲಿ ಸರ್ಕಾರ ಚಿನ್ನದ 5/1 ಪಾಲು ಕುಟುಂಬಕ್ಕೆ ನೀಡಬೇಕು ಎಂದು ನಿರ್ಧಾರ ಮಾಡಿತ್ತು. ಇದೀಗ ಈ ಭಾಗದಲ್ಲಿ ಚಿನ್ನ, ರಾಜ-ಮಹಾರಾಜ ಕಾಲದ ಶಾಸನಗಳು, ಆಭರಣಗಳು ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
