ಚಂದ್ರ ಗ್ರಹಣ: ರಾಜ್ಯದ ಪ್ರಮುಖ ದೇವಾಲಯಗಳು ನಿತ್ಯ ಪೂಜೆಯ ಬಳಿಕ ಬಂದ್
ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ಕರ್ನಾಟಕದ ಹಲವು ಪ್ರಮುಖ ದೇವಾಲಯಗಳು ನಿತ್ಯ ಪೂಜೆಗಳ ಬಳಿಕ ಬಂದ್ ಆಗಿವೆ. ಬೆಂಗಳೂರಿನ ಕಾಡುಮಲ್ಲೇಶ್ವರ, ಬೆಳಗಾವಿಯ ಕಪಿಲೇಶ್ವರ, ಕೊಡಗಿನ ಓಂಕಾರೇಶ್ವರ ದೇಗುಲಗಳು ಗ್ರಹಣ ಮೋಕ್ಷದ ಬಳಿಕ ಶುದ್ಧಿ ಕಾರ್ಯಗಳನ್ನು ನೆರವೇರಿಸಿ ಪುನಃ ತೆರೆಯಲಿದ್ದು, ಧಾರವಾಡದ ನುಗ್ಗಿಕೇರಿ ಆಂಜನೇಯ ಮತ್ತು ಚಿತ್ರದುರ್ಗದ ನೀಲಕಂಠೇಶ್ವರ ದೇಗುಲಗಳು ಎಂದಿನಂತೆ ತೆರೆದಿವೆ.
ಬೆಂಗಳೂರು, ಮಾರ್ಚ್ 3: ಚಂದ್ರ ಗ್ರಹಣದ ಕಾರಣ ಕರ್ನಾಟಕದಾದ್ಯಂತ ಹಲವು ಪ್ರಮುಖ ದೇವಾಲಯಗಳು ಮಧ್ಯಾಹ್ನದ ಪೂಜೆಯ ಬಳಿಕ ಬಂದ್ ಆಗಿವೆ. ಬೆಂಗಳೂರಿನ ಕಾಡುಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳ ನಂತರ ಮಧ್ಯಾಹ್ನ 12:30ಕ್ಕೆ ಬಾಗಿಲು ಮುಚ್ಚಲಾಯಿತು. ಸಂಜೆ 6:48ಕ್ಕೆ ಗ್ರಹಣ ಮೋಕ್ಷವಾದ ನಂತರ ಶುದ್ಧೀಕರಣ ಪೂಜೆಗಳೊಂದಿಗೆ ಮತ್ತೆ ತೆರೆಯಲಾಗುತ್ತದೆ. ಬೆಳಗಾವಿಯ ಪ್ರಸಿದ್ಧ ಕಪಿಲೇಶ್ವರ ದೇಗುಲದಲ್ಲಿ ಶಿವಲಿಂಗವನ್ನು ಬಿಲ್ವಪತ್ರೆಯಿಂದ ಮುಚ್ಚಿ, ಗರ್ಭಗುಡಿಯನ್ನು ಬಂದ್ ಮಾಡಲಾಗಿದೆ. ಸಂಜೆ 7 ಗಂಟೆಯ ನಂತರ ವಿಶೇಷ ಪೂಜೆಗಳೊಂದಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಅದೇ ರೀತಿ ಕೊಡಗಿನ ಮಡಿಕೇರಿಯ ಓಂಕಾರೇಶ್ವರ, ಪಾಡಿ ಇಗ್ಗುತ್ತಪ್ಪ, ತಲಕಾವೇರಿ ಸನ್ನಿಧಿ, ಮತ್ತು ಭಾಗಮಂಡಲ ಭಗಂಡೇಶ್ವರ ದೇಗುಲಗಳು ಬೆಳಿಗ್ಗೆ 9 ಗಂಟೆಯಿಂದಲೇ ಬಂದ್ ಆಗಿ, ಸಂಜೆ 7:15ಕ್ಕೆ ಶುದ್ಧೀಕರಣದ ನಂತರ ತೆರೆಯಲಿವೆ. ಚಿಕ್ಕಬಳ್ಳಾಪುರದ ಗಿರಿಜಾಂಬಾ ದೇವಿ ಮತ್ತು ಹಾಸನದ ಚೆನ್ನಕೇಶವಸ್ವಾಮಿ ದೇಗುಲಗಳು ಗ್ರಹಣ ಮೋಕ್ಷವಾದ ನಂತರ ಮರುದಿನ ಬೆಳಿಗ್ಗೆ ಭಕ್ತರ ದರ್ಶನಕ್ಕೆ ಅವಕಾಶ ನೀಡಲಿವೆ. ಆದರೆ, ಧಾರವಾಡದ ನುಗ್ಗಿಕೇರಿ ಆಂಜನೇಯ ದೇಗುಲ ಮತ್ತು ಚಿತ್ರದುರ್ಗದ ನೀಲಕಂಠೇಶ್ವರ ದೇವಸ್ಥಾನ ಗ್ರಹಣದ ಅವಧಿಯಲ್ಲೂ ಎಂದಿನಂತೆ ತೆರೆದಿರಲಿದೆ. ವಿಶೇಷ ಪೂಜೆಗಳನ್ನು ಆಯೋಜಿಸಲಾಗಿದೆ.
