ಮಂತ್ರಾಲಯದಲ್ಲಿ ಬಿಸಿಲಿನ ತಾಪಕ್ಕೆ ಸಿಲಿಂಡರ್ ಸ್ಫೋಟ; ಕಾರ್ಮಿಕರ ಶೆಡ್ಗಳು ಭಸ್ಮ! ಸ್ಥಳಕ್ಕೆ ಸುಬುಧೇಂದ್ರ ತೀರ್ಥ ಶ್ರೀ ಭೇಟಿ
ಮಂತ್ರಾಲಯದ ಶ್ರೀಮಠದ ಕಾರ್ಮಿಕರ ಶೆಡ್ಗಳಲ್ಲಿ ಅತಿಯಾದ ಬಿಸಿಲಿನಿಂದ ಗ್ಯಾಸ್ ಸಿಲಿಂಡರ್ಗಳು ಸ್ಫೋಟಗೊಂಡಿವೆ. ಅದೃಷ್ಟವಶಾತ್ ಕಾರ್ಮಿಕರು ಕೆಲಸಕ್ಕೆ ತೆರಳಿದ್ದರಿಂದ ಪ್ರಾಣಾಪಾಯವಿಲ್ಲ. ಶೆಡ್ಗಳು ಮತ್ತು ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಶ್ರೀ ಸುಬುಧೇಂದ್ರ ತೀರ್ಥರು ಭೇಟಿ ನೀಡಿ ನೊಂದ ಕಾರ್ಮಿಕರಿಗೆ ಶ್ರೀಮಠದಿಂದ ಸಂಪೂರ್ಣ ನೆರವು ನೀಡುವ ಭರವಸೆ ನೀಡಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ದಳ ಬೆಂಕಿ ನಂದಿಸಿದೆ.
ರಾಯಚೂರು, ಮೇ.13: ಮಂತ್ರಾಲಯದ ಶ್ರೀಮಠದ ಆವರಣದಲ್ಲಿರುವ ಕಾರ್ಮಿಕರ ಶೆಡ್ಗಳಲ್ಲಿ ಏಕಾಏಕಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಆಘಾತಕಾರಿ ಘಟನೆ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಂತ್ರಾಲಯದ ನರಹರಿ ತೀರ್ಥ ವಸತಿ ಗೃಹಗಳ ಸಮೀಪ ನಿರ್ಮಾಣ ಕಾಮಗಾರಿಗಾಗಿ ಬಂದಿದ್ದ ಕಾರ್ಮಿಕರಿಗೆ ಶೆಡ್ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಬುಧವಾರ ಮಧ್ಯಾಹ್ನ ಅತಿಯಾದ ಬಿಸಿಲಿನ ತಾಪಕ್ಕೆ ಶೆಡ್ನಲ್ಲಿದ್ದ ಎರಡು-ಮೂರು ಸಿಲಿಂಡರ್ಗಳು ಸ್ಫೋಟಗೊಂಡಿವೆ. ಇದರಿಂದಾಗಿ ಶೆಡ್ಗಳು ಹೊತ್ತಿ ಉರಿದಿದ್ದು, ಕಾರ್ಮಿಕರ ದವಸ-ಧಾನ್ಯ ಮತ್ತು ಇತರ ವಸ್ತುಗಳು ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಮಂತ್ರಾಲಯ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥರು ಭೇಟಿ ನೀಡಿ ಪರಿಶೀಲನೆ ನಡೆಸಿದರು. “ಘಟನೆಯ ಸಮಯದಲ್ಲಿ ಕಾರ್ಮಿಕರು ಕೆಲಸಕ್ಕೆ ತೆರಳಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ನಷ್ಟಕ್ಕೊಳಗಾದ ಕಾರ್ಮಿಕರಿಗೆ ಶ್ರೀಮಠದ ವತಿಯಿಂದ ಎಲ್ಲ ರೀತಿಯ ನೆರವು ನೀಡಲಾಗುವುದು,” ಎಂದು ಶ್ರೀಗಳು ಸಾಂತ್ವನ ನೀಡಿದರು. ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಬೆಂಕಿ ನಂದಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ