ಮೈಸೂರು: ಜಿಲ್ಲೆಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ತಳಮಳ ಅರ್ಥಮಾಡಿಕೊಳ್ಳಲು ರಾಕೆಟ್ ಸೈನ್ಸ್ ಅಭ್ಯಾಸ ಮಾಡುವ ಅವಶ್ಯಕತೆ ಇಲ್ಲ. ಅವರ ಬಾಸ್ ಮತ್ತು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಂಚಿಕೆ ಮಾಡಿರುವ ಬದಲಿ ಸೈಟುಗಳ ವಿಷಯ ದೊಡ್ಡ ಕೋಲಾಹಲ ಸೃಷ್ಟಿಸಿದೆ. ವಿರೋಧ ಪಕ್ಷದ ನಾಯಕರು ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಅಂತ ಹೇಳಿ ಅಕ್ರಮವಾಗಿ ಸೈಟು ಪಡೆದಿರುವ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮೈಸೂರು ಭಾಗದ ಕಾಂಗ್ರೆಸ್ ನಾಯಕರು ಇಂದು ಮುಡಾ ಕಚೇರಿಗೆ ತೆರಳಿ ಹೊಸದಾಗಿ ಪ್ರಾಧಿಕಾರಕ್ಕೆ ಆಯುಕ್ತರಾಗಿ ಬಂದಿರುವ ರಘುನಂದನ್ ಅವರನ್ನು ಭೇಟಿಯಾದರು. ಆಯುಕ್ತರನ್ನು ಭೇಟಿಯಾದ ನಾಯಕರಲ್ಲಿ ಕೆಪಿಸಿಸಿ ವಕ್ತಾರ ಮತ್ತು ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋತ ಎಂ ಲಕ್ಷ್ಮಣ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಜೆ ವಿಜಯಕುಮಾರ್ ಮೊದಲಾದವರಿದ್ದರು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಸೈಟು ಹಂಚಿಕೆಯ ವಾಸ್ತವಾಂಶವನ್ನು ಆಯುಕ್ತರಿಗೆ ತಿಳಿಸುವ ಪ್ರಯತ್ನವನ್ನು ನಿಯೋಗ ಮಾಡಿದೆ
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜಮೀನು ಬೆಲೆ ₹ 62 ಕೋಟಿ ಆಗುತ್ತೆ, ಅಷ್ಟು ಹಣವನ್ನು ಮುಡಾ ನಮಗೆ ಕೊಡಲಿ, ಸೈಟು ಬೇಡ: ಸಿದ್ದರಾಮಯ್ಯ