Daily Devotional: ನವರಾತ್ರಿ ವಿಶೇಷ ಕಾಳರಾತ್ರಿಯ ಆಚರಣೆ ವಿಧಾನ ತಿಳಿಯಿರಿ
ನವರಾತ್ರಿಯ ಏಳನೇ ದಿನ ಕಾಳರಾತ್ರಿ ದೇವಿಯ ಆರಾಧನೆಯ ದಿನವಾಗಿದೆ. ದುರ್ಗೆಯ ಈ ಏಳನೇ ಸ್ವರೂಪ ಭೀಕರ ರೂಪದಲ್ಲಿದ್ದರೂ ಭಕ್ತರಿಗೆ ಶುಭ ಫಲಗಳನ್ನೇ ಕರುಣಿಸುತ್ತಾಳೆ. ಜ್ಞಾನ ವೃದ್ಧಿ, ಅಂಧಕಾರ ನಿವಾರಣೆ ಮತ್ತು ಮನಃಶಾಂತಿಗಾಗಿ ಈ ತಾಯಿಯನ್ನು ಪೂಜಿಸಲಾಗುತ್ತದೆ. ಈ ದಿನ ಸರಸ್ವತಿ ಪೂಜೆಯನ್ನೂ ಆಚರಿಸುವುದು ವಾಡಿಕೆ.
ಬೆಂಗಳೂರು, ಸೆಪ್ಟೆಂಬರ್ 29: ಇಂದು ನವರಾತ್ರಿಯ ಏಳನೇ ದಿನ. ಕಾಳರಾತ್ರಿ ದೇವಿಯ ಆರಾಧನೆಯ ದಿನ. ದುರ್ಗಾಮಾತೆಯ ಏಳನೇ ಸ್ವರೂಪವೇ ಕಾಳರಾತ್ರಿ. ಈ ತಾಯಿಯು ಅತ್ಯಂತ ಭಯಾನಕ ಸ್ವರೂಪವನ್ನು ಹೊಂದಿದ್ದರೂ, ಭಕ್ತರಿಗೆ ಸದಾ ಶುಭ ಫಲಗಳನ್ನೇ ಕರುಣಿಸುತ್ತಾಳೆ, ಆದ್ದರಿಂದಲೇ ಇವಳನ್ನು ಶುಭಂ ಕರಿ ಎಂದೂ ಕರೆಯಲಾಗುತ್ತದೆ. ಕಾಳರಾತ್ರಿ ಎಂದರೆ ಕಪ್ಪು ರಾತ್ರಿ. ದಟ್ಟವಾದ ಅಂಧಕಾರದಂತೆ ಕಪ್ಪು ಶರೀರ, ಬಿಚ್ಚಿದ ತಲೆಗೂದಲು, ಕತ್ತಿನಲ್ಲಿ ಮಿಂಚಿನಂತಹ ಹೊಳೆಯುವ ಮಾಲೆ ಮತ್ತು ಬ್ರಹ್ಮಾಂಡದಂತೆ ಗೋಲಾಕಾರದ ಮೂರು ಕಣ್ಣುಗಳನ್ನು ಈ ತಾಯಿ ಹೊಂದಿದ್ದಾಳೆ.
