ಮೈಸೂರು: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ (HC Mahadevappa), ಶಾಮನೂರು ಶಿವಶಂಕರಪ್ಪನವರು (Shamanur Shivashankarappa) ಹೇಳಿರುವಂತೆ ಸಚಿವ ಸಂಪುಟದಲ್ಲಾಗಲೀ ಅಧಿಕಾರಿಗಳ ವಿಷಯದಲ್ಲಾಗಲೀ ಲಿಂಗಾಯತ ಸಮುದಾಯಕ್ಕೆ ಅನ್ಯಾಯವೇನೂ ಆಗಿಲ್ಲ, ಅವರ ಮಗ ಎಸ್ ಎಸ್ ಮಲ್ಲಿಕಾರ್ಜುನ (SS Mallikarjun) ಸೇರಿದಂತೆ ಒಟ್ಟು 7 ಲಿಂಗಾಯತ ಸಚಿವರಿದ್ದಾರೆ, ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡುವ ಜಾಯಮಾನ ಮುಖ್ಯಮಂತ್ರಿ ಸಿದ್ದರಾಮಯ್ಯನವರದಲ್ಲ ಎಂದು ಹೇಳಿದರು. ಭಾರತ ಒಂದು ಜಾತ್ಯಾತೀತ ರಾಷ್ಟ್ರವಾಗಿದೆ, ಸಿದ್ದರಾಮಯ್ಯ ಸರ್ಕಾರ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಆಡಳಿತ ನಡೆಸುತ್ತಿದೆ ಎಂದು ಅವರು ಹೇಳಿದರು.
ಅಖಿಲ ಭಾರತ ವೀರಶೈವ ಸಂಘದ ಅಧ್ಯಕ್ಷರಾಗಿರುವ ಶಿವಶಂಕರಪ್ಪನರಿಗೆ ಯಾವುದೋ ಅಧಿಕಾರಿ ತನಗೆ ಬೇಕಾದ ಪೋಸ್ಟಿಂಗ್ ಸಿಗದ ಬಗ್ಗೆ ದೂರಿರುತ್ತಾನೆ. ಅದಕ್ಕೆ ಅವರು ಹಾಗೆ ಹೇಳಿರುತ್ತಾರೆ ವಿನಃ ಬೇರೆ ಯಾವುದೇ ಉದ್ದೇಶ ಅವರಿಗಿರೋದಿಲ್ಲ ಎಂದು ಮಹಾದೇವಪ್ಪ ಹೇಳಿದರು. ಇನ್ನಾರು ತಿಂಗಳಲ್ಲಿ ಸರ್ಕಾರ ಉರುಳುತ್ತದೆ ಎಂದು ಸಿಟಿ ರವಿ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ, ಅವರೆಲ್ಲೋ ಹಗಲುಗನಸು ಕಾನುತ್ತಿದ್ದಾರೆ, 135 ಸ್ಥಾನಗಳನ್ನು ಗೆದ್ದಿರುವ ಸರ್ಕಾರ ಉರುಳುತ್ತದೆ ಅಂತ ಹೇಳುತ್ತಾರೆಂದರೆ ಪ್ರಜಾಪ್ರಭುತ್ವ ವ್ವವಸ್ತೆಯಲ್ಲಿ ಇವರಿಗೆ ನಂಬಿಕೆ ಇಲ್ಲವೆಂದೇ ಅಂತರ್ಥ ಎಂದು ಮಹಾದೇವಪ್ಪ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:01 pm, Tue, 3 October 23