ಯಾದಗಿರಿ: ನಿರ್ವಹಣೆ ಕಾರ್ಯ ಕಾಣದ ಬಸವಸಾಗರ ಜಲಾಶಯ ಅಪಾಯಕ್ಕೀಡಾದರೆ ಹೊಣೆ ಯಾರು?

|

Updated on: Aug 21, 2024 | 10:37 AM

ಜಿಲ್ಲೆಯ ಶಾಸಕರಲ್ಲಿ ಒಬ್ಬರಾಗಿರುವ ಶರಣಬಸಪ್ಪ ದರ್ಶನಾಪುರ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರೂ ಆಗಿದ್ದಾರೆ. ಯಾದಗಿರಿಯ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಪಿಎಸ್ಐ ಪರಶುರಾಮ್ ಸಾವಿನ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದಾರೆ. ಸಚಿವ ದರ್ಶನಾಪುರ ಒಮ್ಮೆ ಜಲಾಶಯಕ್ಕೆ ಭೇಟಿ ನೀಡಿ ಗೇಟ್ ಗಳನ್ನು ಪರಿಶೀಲಿಸಲಾಗದಷ್ಟು ಬ್ಯೂಸಿಯೇ?

ಯಾದಗಿರಿ: ಜಿಲ್ಲೆಯಿಂದ ವಿಧಾನ ಸಭೆಗೆ ಅಯ್ಕೆಯಾಗಿರುವ ಶಾಸಕರ ಬೇಜವಾಬ್ದಾರಿತನ, ಒಣಪ್ರತಿಷ್ಠೆ ಮತ್ತು ಉಡಾಫೆ ಮನೋಭಾವದಿಂದಾಗಿ ಟಿಬಿ ಡ್ಯಾಂನಲ್ಲಿ ಆದಂಥ ಅನಾಹುತ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿರುವ ಬಸವಸಾಗರ ಜಲಾಶಯಕ್ಕೂ ಎದುರಾದರೆ ಅಚ್ಚರಿಪಡಬೇಕಿಲ್ಲ. ನಮ್ಮ ಯಾದಗಿರಿ ವರದಿಗಾರ ನೀಡುವ ಮಾಹಿತಿ ಪ್ರಕಾರ ಕಳೆದ ಎರಡು ವರ್ಷಗಳಿಂದ ಜಲಾಶಯ ನಿರ್ವಹಣೆ ಕೆಲಸ ನಡೆದಿಲ್ಲ. ಸ್ಥಳೀಯ ನೀರಾವರಿ ತಜ್ಞ ರಾಘವೇಂದ್ರ ಹೇಳುವ ಹಾಗೆ ವೈರ್ ರೂಫಿಂಗ್ ಮತ್ತು ಜಲಾಶಯದ ಗೇಟ್ ಗಳಿಗೆ ಗ್ರೀಸಿಂಗ್ ಮಾಡುವ ಕೆಲಸ ಕಾಲಕಾಲಕ್ಕೆ ಆಗುತ್ತಿರಬೇಕಾಗುತ್ತದೆ. ಅದರೆ ಶಾಸಕರ ಒಣ ಪ್ರತಿಷ್ಠೆಯ ಕಾರಣ ನಿರ್ವಹಣೆಗಾಗಿ ಕರೆಯಲಾಗಿದ್ದ ಟೆಂಡರ್ ರದ್ದಾಗಿದೆ. ಜಲಾಶಯದ ನಿರ್ವಹಣೆಗಾಗಿ ಸರ್ಕಾರ ₹ 63 ಲಕ್ಷ ಪ್ರತಿವರ್ಷ ಬಿಡುಗಡೆ ಮಾಡುತ್ತದೆ, ಆದರೆ ಈ ಭಾಗದ ಶಾಸಕರ ನಡುವಿನ ತಿಕ್ಕಾಟದಿಂದ ಹಣದ ಸದುಪಯೋಗ ಆಗುತ್ತಿಲ್ಲ. ಮಹಾರಾಷ್ಟ್ರದಲ್ಲಿ ಮಳೆ ಮುಂದುವರಿದು ಜಲಾಶಯಕ್ಕೆ ನೀರು ಹರಿದು ಬಂದರೆ ಹೆಚ್ಚುವರಿ ನೀರನ್ನು ಕೃಷ್ಣ ನದಿಗೆ ಹರಿಬಿಡಬೇಕಾಗುತ್ತದೆ. ಆ ಸಂದರ್ಭದಲ್ಲಿ ಕ್ರೆಸ್ಟ್ ಗಳನ್ನು ಓಪನ್ ಮಾಡಿದಾಗ ಏನಾದರೂ ಹೆಚ್ಚುಕಡಿಮೆಯಾದರೆ ಶಾಸಕರೆಲ್ಲ ಹೊಣೆ ಹೊತ್ತಾರೆಯೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಟಿಬಿ ಡ್ಯಾಂ ಗೇಟ್​ ದುರಸ್ತಿ ಕಾರ್ಯ ಯಶಸ್ವಿ: ಸಿಬ್ಬಂದಿಗಳಿಗೆ ಧನ್ಯವಾದ ತಿಳಿಸಿದ ಡಿಕೆ ಶಿವಕುಮಾರ್

Follow us on