ಬೆಳಗಿನ ಜಾವ ಹೊತ್ತಿ ಉರಿದ ಗುಜರಿ ಗೋದಾಮಿನಲ್ಲಿ ಒಂದೇ ಒಂದು ಬೆಂಕಿ ನಂದಿಸುವ ಉಪಕರಣವಿಲಿಲ್ಲ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 23, 2022 | 10:21 PM

ಕೂಡಲೇ ಹೊತ್ತಿಕೊಳ್ಳುವ ಸಾಮಾನಗಳೇ ಇದ್ದ ಅಷ್ಟು ದೊಡ್ಡ ಗೋದಾಮಿನಲ್ಲಿನ ಒಂದೇ ಒಂದು ಬೆಂಕಿ ನಂದಿಸುವ ಉಪಕರಣ ಇರಲಿಲ್ಲ. ಅಧಿಕಾರಿಗಳ ಪ್ರಕಾರ ಶಾರ್ಟ್ ಸರ್ಕೀಟ್ ನಿಂದಾಗಿ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡಿದೆ.

ತೆಲಂಗಾಣದ ಸಿಕಂದರಾಬಾದ್ ನಲ್ಲಿ (Secunderabad) ಬುಧವಾರ ಬೆಳಗಿನ ಜಾವ ಗುಜರಿ ಗೋದಾಮಿನಲ್ಲಿ ಅಗ್ನಿ ದುರಂತ (fire mishap) ಸಂಭವಿಸಿದಾಗ ಒಳಗೆ ಬಿಹಾರ ರಾಜ್ಯದ 12 ವಲಸೆ ಕಾರ್ಮಿಕರು ಗಾಢ ನಿದ್ರೆಯಲ್ಲಿದ್ದರು. ಅವರಲ್ಲಿ ಕೇವಲ ಒಬ್ಬ ಮಾತ್ರ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ಉಳಿದ 11 ಜನ ನತದೃಷ್ಟರು ಸಜೀವವಾಗಿ ಬೆಂಕಿಯಲ್ಲಿ ಸುಟ್ಟು ಹೋಗಿದ್ದಾರೆ. ನಗರದ ಭೋಯಿಗುಡಾನಲ್ಲಿರುವ ಗೋದಾಮಿಗೆ ಬೆಂಕಿ ಬಿದ್ದಿರುವ ವಿಷಯ ಹತ್ತಿರದ ಅಗ್ನಿಶಾಮಕ ದಳ ಸ್ಟೇಶನ್ (fire brigade) ಬೆಳಗಿನ ಜಾವ 3:45 ಕ್ಕೆ ಸಿಕ್ಕಿದೆ. ಗೋದಾಮಿನ ಪಕ್ಕದಲ್ಲಿ ವಾಸಮಾಡುವ ಜನ ಫೈರ್ ಬ್ರಿಗೇಡ್ ಸ್ಟೇಶನ್ ಗೆ ಫೋನ್ ಮಾಡಿದ್ದಾರೆ. ಫೈರ್ ಎಂಜಿನ್ ಅಲ್ಲಿಗೆ ತಲುಪಿದಾದ ಶ್ರಾವಣ್ ಟ್ರೇಡರ್ಸ್ (Shravan Traders) ಒಡೆತನದ ಗೋದಾಮಿನ ಶಟರ್ ಮುಚ್ಚಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಾಗ ಕಾರ್ಮಿಕರು ಮೊದಲ ಮಹಡಿಯಲ್ಲಿ ನಿದ್ರಿಸುತ್ತಿದ್ದರಂತೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಶಟರ್ ಒಡೆದು ಒಳಗೆ ನೋಡಿದಾಗ ನೆಲಮಾಳಿಗೆಯಲ್ಲಿ ಶೇಖರಿಸಿಟ್ಟಿದ್ದ ಗುಜರಿ ಸಾಮಾನುಗಳು- ಪ್ಲಾಸ್ಟಿಕ್ ಕೇಬಲ್ ಬಂಡಲ್ಗಳು ಮತ್ತು ಎಲೆಕ್ಟ್ರಿಕ್ ವೈರ್ಗಳು, ಲಿಕ್ಕರ್ ಬಾಟಲಿಗಳು, ಹಳೆ ವೃತ್ತಪತ್ರಿಕೆಗಳು, ಪ್ಲಾಸ್ಟಿಕ್ ಮತ್ತು ಇತರ ವಸ್ತುಗಳು ಹೊತ್ತಿಕೊಂಡು ಧಗಧಗ ಉರಿಯುತ್ತಿದ್ದವು. ಮೇಲೆ ಮಲಗಿದ್ದವರಿಗೆ ಕೆಳಗಿನ ಶಟರ್ ಬಿಟ್ಟರೆ ಹೊರಗೆ ಬರಲು ಯಾವ ದಾರಿಯೂ ಇರಲಿಲ್ಲ. ಇಡೀ ಕೆಳ ಮಾಳಿಗೆ ಅಗ್ನಿ ಕುಂಡದಂತೆ ಉರಿಯುತ್ತಿದ್ದರಿಂದ ಕೆಳಗೆ ಬರಲು ಸಹ ಸಾಧ್ಯವಿರಲಿಲ್ಲ. ಅವರು ಅಕ್ಷರಶಃ ಬೆಂಕಿ ಕುಂಡದಲ್ಲಿ ಸಿಕ್ಕಿಕೊಂಡು ಬಿಟ್ಟಿದ್ದರು.

ಕೂಡಲೇ ಹೊತ್ತಿಕೊಳ್ಳುವ ಸಾಮಾನಗಳೇ ಇದ್ದ ಅಷ್ಟು ದೊಡ್ಡ ಗೋದಾಮಿನಲ್ಲಿನ ಒಂದೇ ಒಂದು ಬೆಂಕಿ ನಂದಿಸುವ ಉಪಕರಣ ಇರಲಿಲ್ಲ. ಅಧಿಕಾರಿಗಳ ಪ್ರಕಾರ ಶಾರ್ಟ್ ಸರ್ಕೀಟ್ ನಿಂದಾಗಿ ಗೋದಾಮಿನಲ್ಲಿ ಬೆಂಕಿ ಹೊತ್ತಿಕೊಂಡಿದೆ.

ಭೀಕರ ದುರ್ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿರುವ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಮತ್ತು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೃತ ಕಾರ್ಮಿಕರ ಕುಟುಂಬಗಳಿಗೆ ತಲಾ ಎರಡೆರಡು ಲಕ್ಷ ರೂ. ಪರಿಹಾರ ಧನ ಘೋಷಿಸಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ಅವರು ತಲಾ 5 ಲಕ್ಷ ರೂ. ಗಳ ಪರಿಹಾರ ಪ್ರಕಟಿಸಿದ್ದಾರೆ ಮತ್ತು ದೇಹಗಳನ್ನು ಬಿಹಾರಗೆ ಕಳಿಸುವ ವ್ಯವಸ್ಥೆ ಮಾಡಿದ್ದಾರೆ.

ಇದನ್ನೂ ಓದಿ: Kolkata Railways Building Fire: ಕೋಲ್ಕತ್ತಾದಲ್ಲಿ ಅಗ್ನಿ ದುರಂತ 7 ಮಂದಿ ಸಾವು, 10 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ ಮಮತಾ ಬ್ಯಾನರ್ಜಿ

Follow us on