ಪ್ರತಾಪ್ ಕುಡಿತದ ದಾಸನಾಗಿಬಿಟ್ಟಿದ್ದ, ಮಕ್ಕಳಾಗಲಿಲ್ಲವೆಂಬ ಕೊರಗು ಕಾಡುತಿತ್ತು: ಬಿಸಿ ಪಾಟೀಲ್, ಮಾಜಿ ಸಚಿವ

ಅರುಣ್​ ಕುಮಾರ್​ ಬೆಳ್ಳಿ

Updated on: Jul 08, 2024 | 8:13 PM

ಪ್ರತಾಪ್ ಮತ್ತು ಸೌಮ್ಯ ಸರೋಗೇಸಿಯ ಮೂಲಕ ಮಗುವನ್ನು ಪಡೆಯುವ ಯೋಚನೆ ಮಾಡಿದ್ದರಂತೆ. ಅದಕ್ಕೆ ಸಂಬಂಧಿಸಿದ ಕಾನೂನು ಪ್ರಕ್ರಿಯೆಗಳು ಶುರುವಾಗಿದ್ದವು ಎಂದು ಬಿಸಿ ಪಾಟೀಲ್ ಹೇಳುತ್ತಾರೆ. 67-ವರ್ಷ ವಯಸ್ಸಿನ ಪಾಟೀಲ್ ಅವರಿಗೆ ಇಬ್ಬರು ಹೆಣ್ಣುಮಕ್ಕಳು-ಗಂಡು ಸಂತಾನವಿರಲಿಲ್ಲ. ಪ್ರತಾಪ್ ಕುಡಿತಕ್ಕೆ ದಾಸನಾಗಿಬಿಟ್ಟಿದ್ದರು ಮತ್ತು ಒಮ್ಮೆ ಡಿ-ಅಡಿಕ್ಷನ್ ಸೆಂಟರ್ ಗೆ ದಾಖಲಿಸಿ ಚಟ ಬಿಡಿಸಿದ್ದರೂ ಕೆಲ ದಿನಗಳ ಪುನಃ ಕುಡಿಯಲಾರಂಭಿಸಿದ್ದರು ಎಂದು ಪಾಟೀಲ್ ಹೇಳುತ್ತಾರೆ.

ಶಿವಮೊಗ್ಗ: ಮಾಜಿ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಬಿಸಿ ಪಾಟೀಲ್ ಆಘಾತದಲ್ಲಿದ್ದಾರೆ. ಅವರ ಮೊದಲ ಮಗಳು ಸೌಮ್ಯರ ಪತಿ ಪ್ರತಾಪ್ ಆತ್ಮಹತ್ಯೆಯ ಮೂಲಕ ಸಾವನ್ನಪ್ಪಿದ್ದಾರೆ. ನಗರದ ಮೆಗ್ಗಾನ್ ಅಸ್ಪತ್ರೆಯ ಶವಾಗಾರದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು ತಮಗೆ ಮನೆಮಗನಂತಿದ್ದ ಪ್ರತಾಪ್ ಜಮೀನು ಹಾಗೂ ರಾಜಕೀಯದ ವ್ಯವಹಾರಗಳನ್ನೆಲ್ಲ ನೋಡಿಕೊಳ್ಳುತ್ತಿದ್ದರು ಎಂದು ಹೇಳಿದರು. ಮದುವೆಯಾಗಿ 16 ವರ್ಷ ಕಳೆದರೂ ಮಕ್ಕಳಾಗಿರದ ಕೊರಗು ಪ್ರತಾಪರನ್ನು ಕಾಡುತ್ತಿತ್ತಂತೆ. ಹಾಗಾಗೇ ಅವರು ಮದ್ಯವ್ಯಸನಿ ಕೂಡ ಆಗಿದ್ದರಂತೆ. ಇವತ್ತು ಬೆಳಗ್ಗೆ ಅವರು ತಮ್ಮೂರಿಗೆ ಹೋಗಿದ್ದರು ಮತ್ತು ಅವರ ಸಹೋದರ ಪ್ರಭು, ಪಾಟೀಲ್ ಅವರಿಗೆ ಫೋನ್ ಮಾಡಿ ಪ್ರತಾಪ್ ಜೋಳದ ಬೆಳೆಗೆ ಬಳಸುವ ಕೀಟನಾಶಕ ಮಾತ್ರೆ ನುಂಗಿರುವ ಮತ್ತು ಅವರ ಫೋನ್ ಸ್ವಿಚ್ಚಾಫ್ ಆಗಿರುವ ಸಂಗತಿಯನ್ನು ತಿಳಿಸಿದರಂತೆ. ನಂತರ ಪಾಟೀಲ್ ದಾವಣಗೆರೆ, ಹೊನ್ನಾಳಿಯ ಪೊಲೀಸ್ ಆಧಿಕಾರಿಗಳಿಗೆ ಅಳಿಯನ ಫೋನ್ ನಂಬರ್ ನೀಡಿ ಟ್ರ್ಯಾಕ್ ಮಾಡಲು ವಿನಂತಿಸಿಕೊಂಡಿದ್ದಾರೆ.

ಸ್ವಲ್ಪ ಸಮಯದ ನಂತರ ಪಾಟೀಲ್ ಅವರು ಅಳಿಯನ ನಂಬರ್ ಗೆ ಕಾಲ್ ಮಾಡಿದಾಗ ಸಂಪರ್ಕ ಸಿಕ್ಕಿದೆ ಮತ್ತು ಅವರೊಂದಿಗೆ ಮಾತಾಡಿದ ಪ್ರತಾಪ್ ಹೊನ್ನಾಳಿ ಮಲೆಬೆನ್ನೂರ್ ರಸ್ತೆಯಲ್ಲಿರುವುದಾಗಿ ಹೇಳಿದರಂತೆ. ಪ್ರತಾಪ್ ಧ್ವನಿ ನಿದ್ರೆಯ ಮಂಪರಿನಲ್ಲಿ ಮಾತಾಡಿದಂತಿದ್ದಂತೆ. ಅವರನ್ನು ದಾವಣಗೆರೆಯ ಆಸ್ಪತ್ರೆ ಕರೆದೊಯ್ಯುವ ಬದಲು ಅದಕ್ಕಿಂತ ಹತ್ತಿರಾವಾಗುವ ಶಿವಮೊಗ್ಗಗೆ ತೆಗೆದುಕೊಂಡ ಹೋಗೋಣ ಅಂತ ಪ್ರಭು ಫೋನ್ ಮಾಡಿ ಹೇಳಿದ್ದಾರೆ. ಅದರೆ ಹತ್ತು ನಿಮಿಷಗಳ ನಂತರ ಪುನಃ ಫೋನ್ ಮಾಡಿದ ಪ್ರಭು, ಅಣ್ಣ ಹೋಗಿಬಿಟ್ಟ ಅಂತ ಹೇಳಿದರಂತೆ.

 

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಸಿಗದಿದ್ದರೆ ಬಿಸಿ ಪಾಟೀಲ್ ಬಂಡಾಯವೇಳುವ ಲಕ್ಷಣ ಸ್ಪಷ್ಟವಾಗಿದೆ

Loading...
Unable to load recommendations.
Follow Us