‘ಸಿದ್ದರಾಮಯ್ಯ ಸರ್ಕಾರದ ಲೂಟಿ ನೋಡಿಯೇ ಕೆಂಪಣ್ಣ ಸತ್ಹೋಗ್ಬಿಟ್ಟ’: ಮಾಜಿ ಸಂಸದ ಪ್ರತಾಪಸಿಂಹ

Updated on: Apr 03, 2026 | 11:02 AM

ಬಾಗಲಕೋಟೆ ಉಪಚುನಾವಣೆ ಪ್ರಚಾರದಲ್ಲಿ ಮಾಜಿ ಸಂಸದ ಪ್ರತಾಪಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಹೆಸರಷ್ಟೇ ಹಿಂದೂ, ಆದರೆ ಅವರ ಆಡಳಿತ ಮತ್ತು ನಡೆನುಡಿಗಳಲ್ಲಿ ಹಿಂದೂ ಧರ್ಮದ ಲಕ್ಷಣಗಳಿಲ್ಲ ಎಂದು ಪ್ರತಾಪಸಿಂಹ ಆರೋಪಿಸಿದರು. ರಾಜ್ಯದ ಸಾಲದ ಹೊರೆ, ಅಭಿವೃದ್ಧಿಯ ಕೊರತೆ ಮತ್ತು ಕಾಂಗ್ರೆಸ್‌ನಲ್ಲಿನ ಆಂತರಿಕ ಬಿಕ್ಕಟ್ಟಿನ ಬಗ್ಗೆಯೂ ಅವರು ಟೀಕಿಸಿದರು.

ಬಾಗಲಕೋಟೆ, ಏ.3: ಉಪಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರ ಪ್ರಚಾರ ನಡೆಸಿದ ಮಾಜಿ ಸಂಸದ ಪ್ರತಾಪಸಿಂಹ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರ ಹೆಸರಷ್ಟೇ ಹಿಂದೂ, ಆದರೆ ಅವರ ಗುಣನಡತೆಗಳಲ್ಲಿ ಹಿಂದೂ ಧರ್ಮದ ಯಾವ ಲಕ್ಷಣವೂ ಕಾಣಿಸುತ್ತಿಲ್ಲ ಎಂದು ಪ್ರತಾಪಸಿಂಹ ಆರೋಪಿಸಿದರು. ಯುಗಾದಿ ಮತ್ತು ದೀಪಾವಳಿ ದಿನದಂದು ಮಾಂಸಾಹಾರ ಸೇವಿಸುವ ಬಗ್ಗೆಯೂ ಟೀಕೆ ಮಾಡಿದ್ದಾರೆ. ಈಗ ಕಾಂಗ್ರೆಸ್ ಪಕ್ಷದವರು ಹಿಂದುತ್ವವನ್ನು ಮಂತ್ರ ಜಪಿಸುತ್ತಿದ್ದಾರೆ ಎಂದು ಟೀಕಿಸಿದ ಪ್ರತಾಪಸಿಂಹ, ನಾಗಮಂಗಲದಲ್ಲಿ ಗಣೇಶ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ ನಡೆದಾಗ ಸಣ್ಣಪುಟ್ಟ ಘಟನೆ ಎಂದು ಮುಖ್ಯಮಂತ್ರಿ ಅವರು ಹೇಳಿದ್ದರು. ಅಲ್ಲದೆ, ಸ್ಥಳಕ್ಕೆ ಭೇಟಿ ನೀಡಲಿಲ್ಲ. ಮದ್ದೂರಿನಲ್ಲಿ ಮಸೀದಿ ಮೇಲೆ ಕಲ್ಲು ತೂರಾಟ, ಅಣ್ಣಮ್ಮ ಜಾತ್ರೆ ಮೇಲೆ ಕಲ್ಲು ತೂರಾಟ, ಶಿವಾಜಿ ಜಯಂತಿಯಂದು ಚಪ್ಪಲಿ ಮತ್ತು ಕಲ್ಲು ತೂರಾಟ ನಡೆದಾಗ ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಸದಸ್ಯರು ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು. ಕಾಂಗ್ರೆಸ್‌ನವರು ನಿಜವಾದ ಹಿಂದುಗಳಾಗಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದರು ಎಂದು ಅವರು ಹೇಳಿದರು.ಇಡೀ ರಾಜ್ಯದಲ್ಲಿ ಸಮಸ್ಯೆಗಳ ಆಗರವಿದೆ. ರಾಜ್ಯದಲ್ಲಿ ಸಾಲದ ಪ್ರಮಾಣ ಹೆಚ್ಚಾಗಿದ್ದು, ಪ್ರತಿ ಹುಟ್ಟುವ ಮಗುವಿನ ತಲೆಮೇಲೆ ₹1.17 ಲಕ್ಷ ಸಾಲವಿದೆ. ರಾಜ್ಯದ ಒಟ್ಟು ಸಾಲ ₹8.25 ಲಕ್ಷ ಕೋಟಿ ತಲುಪಿದೆ. ಕೆಂಗಲ್ ಹನುಮಂತಯ್ಯನವರಿಂದ ಬಸವರಾಜ್ ಬೊಮ್ಮಾಯಿ ಅವರವರೆಗಿನ ಎಲ್ಲಾ ಮುಖ್ಯಮಂತ್ರಿಗಳು ಮಾಡಿದ ಸಾಲಕ್ಕಿಂತ ಸಿದ್ದರಾಮಯ್ಯ ಅವರು ಮಾಡಿದ ಸಾಲವೇ ಜಾಸ್ತಿಯಾಗಿದೆ. ಸಿದ್ದರಾಮಯ್ಯ ಅವರು “ಸಾಲಾರಾಮಯ್ಯ” ಆಗಿದ್ದಾರೆ ಎಂದು ಅವರು ಟೀಕಿಸಿದರು. ಕಳೆದ ಮೂರು ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ, ರಸ್ತೆ ಅಥವಾ ಕುಡಿಯುವ ನೀರಿನ ವ್ಯವಸ್ಥೆಯೂ ಸುಧಾರಿಸಿಲ್ಲ ಎಂದು ಪ್ರತಾಪಸಿಂಹ ಆರೋಪಿಸಿದರು.

ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಕಲಹದ ಬಗ್ಗೆಯೂ ಪ್ರತಾಪಸಿಂಹ ಗಮನ ಸೆಳೆದರು. ಮುಖ್ಯಮಂತ್ರಿ ಸ್ಥಾನಕ್ಕಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ಪ್ರಯತ್ನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವೆ ಒಬ್ಬರು ಮುಖ್ಯಮಂತ್ರಿ ಕುರ್ಚಿಗೆ ಅಂಟಿಕೊಳ್ಳಲು ಯತ್ನಿಸುತ್ತಿದ್ದರೆ, ಇನ್ನೊಬ್ಬರು ಆ ಕುರ್ಚಿಯನ್ನು ಎಳೆಯಲು ಯತ್ನಿಸುತ್ತಿದ್ದಾರೆ. ಅವರಿಬ್ಬರ ಹೊಡೆದಾಟ ಬಿಟ್ಟರೆ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ಪ್ರತಾಪಸಿಂಹ ಹೇಳಿದರು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 40% ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ ಈಗಿನ ಸರ್ಕಾರದ “ಲೂಟಿ” ನೋಡಿದ ಬಳಿಕ ಸತ್ತೋ ಹೋಗಿಬಿಟ್ಟ ಮನುಷ್ಯ ಎಂದು ಪ್ರತಾಪಸಿಂಹ ಪರೋಕ್ಷವಾಗಿ ಭ್ರಷ್ಟಾಚಾರವನ್ನು ಆರೋಪಿಸಿದರು. ಇದೀಗ ಈ ಹೇಳಿಕೆ ವಿವಾದಕ್ಕೀಡಾಗಬಹುದು ಎಂದು ಹೇಳಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us