ರಣಜಿ ಸೆಮಿಫೈನಲ್‌: ಸ್ಮರಣ್ ಸತತ 2ನೇ ಶತಕ; 800 ರನ್​ಗಳ ಗಡಿ ದಾಟಿದ ಕರ್ನಾಟಕ

Updated on: Feb 18, 2026 | 5:23 PM

Ranji Trophy Semi-final: ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆದ 2025-26 ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಕರ್ನಾಟಕ, ಉತ್ತರಾಖಂಡ ವಿರುದ್ಧ ಭಾರಿ ಹಿಡಿತ ಸಾಧಿಸಿದೆ. ಸ್ಮರಣ್ ರವಿಚಂದ್ರನ್ ಎರಡು ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ್ದು, ದೇವದತ್ ಪಡಿಕ್ಕಲ್ ದ್ವಿಶತಕ ಮತ್ತು ಕೆಎಲ್ ರಾಹುಲ್ ಶತಕ ಬಾರಿಸಿದ್ದಾರೆ. 802 ರನ್‌ಗಳ ಮುನ್ನಡೆಯೊಂದಿಗೆ ಕರ್ನಾಟಕ ತಂಡ ಗೆಲುವಿನತ್ತ ಸಾಗಿದೆ.

ಲಕ್ನೋದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025-26ರ ರಣಜಿ ಟ್ರೋಫಿಯ ಸೆಮಿಫೈನಲ್‌ ಪಂದ್ಯದಲ್ಲಿ ಉತ್ತರಾಖಂಡ ತಂಡವನ್ನು ಎದುರಿಸಿರುವ ಕರ್ನಾಟಕ ತಂಡ ಪಂದ್ಯದ ಮೇಲೆ ಭಿಗಿ ಹಿಡಿತ ಸಾಧಿಸಿದೆ. ಮೊದಲ ಇನ್ನಿಂಗ್ಸ್​ನಲ್ಲಿ 736 ರನ್ ಕಲೆಹಾಕಿದ ಕರ್ನಾಟಕ ತಂಡ, ಉತ್ತರಾಖಂಡ ತಂಡವನ್ನು ಮೊದಲ ಇನ್ನಿಂಗ್ಸ್​ನಲ್ಲಿ 233 ರನ್​ಗಳಿಗೆ ಆಲೌಟ್ ಮಾಡಿತು. ಆ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ 4ನೇ ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 299 ರನ್ ಕಲೆಹಾಕಿದೆ. ಈ ಮೂಲಕ ತನ್ನ ಮುನ್ನಡೆಯನ್ನು 802 ರನ್​ಗಳಿಗೆ ಕೊಂಡೊಯ್ದಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಕರ್ನಾಟಕ ಪರ ಅಮೋಘ ಶತಕ ಬಾರಿಸಿದ್ದ ಸ್ಮರಣ್ ರವಿಚಂದ್ರನ್, ಇದೀಗ ಎರಡನೇ ಇನ್ನಿಂಗ್ಸ್​ನಲ್ಲಿ ಶತಕ ಬಾರಿಸಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು.

ಮೊದಲ ಇನ್ನಿಂಗ್ಸ್​ನಲ್ಲಿ 216 ಎಸೆತಗಳನ್ನು ಎದುರಿಸಿ 12 ಬೌಂಡರಿಗಳ ಸಹಿತ 135 ರನ್ ಬಾರಿಸಿದ್ದ ಸ್ಮರಣ್, ಇದೀಗ ಎರಡನೇ ಇನ್ನಿಂಗ್ಸ್​ನಲ್ಲೂ 149 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 127 ರನ್ ಬಾರಿಸಿದರು. ಇನ್ನು ಕರ್ನಾಟಕ ಪರ ಮೊದಲ ಇನ್ನಿಂಗ್ಸ್​ನಲ್ಲಿ ಸ್ಮರಣ್ ಹೊರತುಪಡಿಸಿ ನಾಯಕ ದೇವದತ್ ಪಡಿಕ್ಕಲ್ ದ್ವಿಶತಕ ಬಾರಿಸಿದರೆ, ಕೆಎಲ್ ರಾಹುಲ್ ಕೂಡ ಶತಕದ ಇನ್ನಿಂಗ್ಸ್ ಅಡಿದ್ದರು