“ತಮಿಳುನಾಡು 1 ಕೋಟಿ ಬೇಕಾದ್ರೆ ಕೊಡಲಿ, ನಮ್ ವಿಷ್ಯದಲ್ಲಿ ತಲೆಹಾಕೋದು ಬೇಡ”: ಸಚಿವ ಶಿವಲಿಂಗೇಗೌಡ

Updated on: Aug 19, 2026 | 2:12 PM

ಸಚಿವ ಶಿವಲಿಂಗೇಗೌಡ ಅವರು ಚಾಮರಾಜನಗರ ಎನ್‌ಕೌಂಟರ್ ಪ್ರಕರಣದಲ್ಲಿ ತಮಿಳುನಾಡು ನಿಯೋಗದ ಹಸ್ತಕ್ಷೇಪದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮ ರಾಜ್ಯದ ಆಂತರಿಕ ವಿಷಯಗಳಲ್ಲಿ ಮತ್ತೊಂದು ರಾಜ್ಯದ ಮಧ್ಯಪ್ರವೇಶ ಅನಗತ್ಯ. ನ್ಯಾಯಾಂಗ ತನಿಖೆ ನಡೆಯುತ್ತಿದ್ದು, ಘಟನೆಯ ಸತ್ಯಾಸತ್ಯತೆ ಹೊರಬರಲಿದೆ. ಗಡಿಭಾಗದಲ್ಲಿ ನಡೆಯುವ ಇಂತಹ ಅಕ್ರಮ ಚಟುವಟಿಕೆಗಳನ್ನು ತಡೆಯಬೇಕು. ತನಿಖೆ ಬಳಿಕ ಹೆಚ್ಚಿನ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದ್ದಾರೆ.

ಬೆಂಗಳೂರು, ಆ.19: ಚಾಮರಾಜನಗರದಲ್ಲಿ ನಡೆದ ಎನ್‌ಕೌಂಟರ್ ಘಟನೆಗೆ ಸಂಬಂಧಿಸಿದಂತೆ ತಮಿಳುನಾಡು ನಿಯೋಗದ ಹಸ್ತಕ್ಷೇಪವನ್ನು ಸಚಿವ ಶಿವಲಿಂಗೇಗೌಡ ತೀವ್ರವಾಗಿ ಖಂಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಾಂತ್ವಾನ ಹೇಳಲು ಮತ್ತು ಒಂದು ಕೋಟಿ ಪರಿಹಾರ ಕೇಳಲು ಬಂದ ತಮಿಳುನಾಡು ನಿಯೋಗದ ಕ್ರಮ ಅನಗತ್ಯ ಎಂದು ಅವರು ಹೇಳಿದ್ದಾರೆ. “ನಮ್ಮ ರಾಜ್ಯದ ಆಂತರಿಕ ವಿಷಯಗಳಲ್ಲಿ ಮತ್ತೊಂದು ರಾಜ್ಯ ಯಾಕೆ ಹಸ್ತಕ್ಷೇಪ ಮಾಡಬೇಕೇ?” ಎಂದು ಶಿವಲಿಂಗೇಗೌಡ ಪ್ರಶ್ನಿಸಿದರು. ಸಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವರು, ಗಡಿ ಪ್ರದೇಶವಾದ ತಕ್ಷಣ ಬಂದು ನಮ್ಮ ರಾಜ್ಯದ ವ್ಯವಸ್ಥೆಗೆ ಬಾಯಿ ಹಾಕಬಾರದು ಎಂದರು. ಚಾಮರಾಜನಗರದಲ್ಲಿ ಜೆಲಾಟಿನ್ ಕಡ್ಡಿಗಳನ್ನು ಬಳಸಿ ಕ್ಯಾಂಪ್‌ಗಳನ್ನು ಸ್ಫೋಟಿಸಿರುವ ಮತ್ತು ತಮಿಳುನಾಡು ಮೂಲದ ಕಳ್ಳರ ಕೈವಾಡ ಇರುವ ಅನುಮಾನಗಳ ಬಗ್ಗೆ ಪ್ರಸ್ತಾಪಿಸಿದರು. ಗಡಿಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು, ಇವುಗಳನ್ನು ತನಿಖೆಯಿಂದ ಹೊರತರಬೇಕಿದೆ. ಪ್ರಕರಣದ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ಎಲ್ಲ ಸತ್ಯಾಂಶಗಳು ಹೊರಬಂದ ನಂತರವೇ ಪ್ರತಿಕ್ರಿಯೆ ನೀಡುವುದಾಗಿ ಅವರು ಸ್ಪಷ್ಟಪಡಿಸಿದರು. ಅರಣ್ಯಗಳಲ್ಲಿ ಪ್ರಾಣಿಗಳನ್ನು ಕೊಂದು ಸಂಪತ್ತು ಕಳ್ಳತನ ಮಾಡುವವರ ವಿರುದ್ಧದ ಕ್ಯಾಂಪ್‌ಗಳಿಗೆ ಬೆಂಕಿ ಹಚ್ಚಿರುವ ಕುರಿತು ಮಾಹಿತಿ ಬಂದಿಲ್ಲ ಎಂದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us