ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ: ತೀವ್ರ ವಿರೋಧಕ್ಕೆ ಕಾರಣವಾಗಿದ್ದ ಖಡ್ಗ ಹಿಡಿದ ಟಿಪ್ಪು ಸುಲ್ತಾನ್ ಕಟೌಟ್‌ ಔಟ್​

| Updated By: ಸಾಧು ಶ್ರೀನಾಥ್​

Updated on: Oct 02, 2023 | 8:06 PM

ಈದ್​ ಮಿಲಾದ್​ ಮೆರವಣಿಗೆಗಾಗಿ ಹಾಕಲಾಗಿದ್ದ ಟಿಪ್ಪು ಕಟೌಟ್​ ತೆರವುಗೊಳಿಸಲಾಗಿದೆ. ಶಿವಮೊಗ್ಗ ನಗರದ ಅಮೀರ್ ಅಹ್ಮದ್ ಸರ್ಕಲ್ ಬಳಿ ಈ ಕಟೌಟ್ ಹಾಕಲಾಗಿತ್ತು. ಜಿಲ್ಲಾಡಳಿತದಿಂದ ಬೃಹತ್​​ ಟಿಪ್ಪು ಸುಲ್ತಾನ್ ಕಟೌಟ್ ತೆರವು ಕಾರ್ಯ ನಡೆಯಿತು. ಖಡ್ಗ ಹಿಡಿದ ಬೃಹತ್​ ಗಾತ್ರದ ಟಿಪ್ಪು ಸುಲ್ತಾನ್ ಕಟೌಟ್‌ ಅನ್ನು ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಲಾಗಿದೆ.

ಶಿವಮೊಗ್ಗ,  ಅಕ್ಟೋಬರ್​​ 2: ಶಿವಮೊಗ್ಗದಲ್ಲಿ ಮತ್ತೆ ಅಶಾಂತಿ ವಾತಾವರಣ ನೆಲೆಸಿದ್ದು, ಈದ್ ಮಿಲಾದ್ (Eid Milad) ಮೆರವಣಿಗೆ ವೇಳೆ ನಡೆದಿರುವ ಗಲಾಟೆ ಪ್ರಕರಣ ಮಲೆನಾಡು ನಗರಿಯಲ್ಲಿ ಆತಂಕ ಮೂಡಿಸಿದೆ. ಪರಿಸ್ಥಿತಿ ಈಗಲೂ ಬಿಗುವಿನಿಂದ ಕೂಡಿದ್ದು, ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಪ್ರಕರಣಗಳು ನಡೆದಿವೆ. ರಾಗಿಗುಡ್ಡದ 8ನೇ ಕ್ರಾಸ್ ನಲ್ಲಿ 9 ಕ್ಕೂ ಹೆಚ್ಚು ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಮನೆಗಳ ಕಿಟಕಿ ಗಾಜುಗಳು ಪೀಸ್ ಪೀಸ್ ಆಗಿವೆ. ಮನೆಯ ಒಳಗೂ ಕಲ್ಲುಗಳು ಬಿದ್ದಿವೆ. ಇನ್ನು ಮನೆಯ ಮುಂದೆ ನಿಲ್ಲಿಸಿದ್ದ ಕಾರ್ ಸಂಪೂರ್ಣ ಜಖಂಗೊಂಡಿದೆ. ದೊಡ್ಡ ದೊಡ್ಡ ಕಲ್ಲುಗಳು ಮನೆಯ ಮೇಲೆ ಬಿದ್ದಿವೆ. ನಿರ್ದಿಷ್ಟವಾಗಿ ಕೆಲ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು, ಕಲ್ಲು ತೂರಾಟ ಮಾಡಲಾಗಿದೆ.

ರಾಗಿಗುಡ್ಡ ಪ್ರದೇಶದಲ್ಲಿ ಈದ್ ಮಿಲಾದ್ ಹಬ್ಬಕ್ಕೆ ಅಳವಡಿಸಿದ್ದ ಬ್ಯಾನರ್ ಮತ್ತು ಬಂಟಿಂಗ್ಸ್ ಅನ್ನು ಮಹಾನಗರ ಪಾಲಿಕೆ ವತಿಯಿಂದಲೇ 2 ಜೆಸಿಬಿ ಯಂತ್ರಗಳಿಂದ ತೆರವುಗೊಳಿಸಲಾಗಿದೆ. ಈ ಮಧ್ಯೆ, ನಿಷೇಧಾಜ್ಞೆ ಜಾರಿ ಹಿನ್ನೆಲೆ ರಾಗಿಗುಡ್ಡ ಪ್ರದೇಶದಲ್ಲಿ ಜನರ ಓಡಾಟ ವಿರಳವಾಗಿದೆ. ಹಾಗಾಗಿ ಪಾಲಿಕೆ ವತಿಯಿಂದ ಜೆಸಿಬಿ ಮೂಲಕ ಬ್ಯಾನರ್​ಗಳನ್ನು ತೆರವುಗೊಳಿಸಲಾಗಿದೆ.

ಈದ್​ ಮಿಲಾದ್​ ಮೆರವಣಿಗೆಗಾಗಿ ಹಾಕಲಾಗಿದ್ದ ಟಿಪ್ಪು ಕಟೌಟ್​ ತೆರವು:

ಇದೇ ವೇಳೆ, ಈದ್​ ಮಿಲಾದ್​ ಮೆರವಣಿಗೆಗಾಗಿ ಹಾಕಲಾಗಿದ್ದ ಟಿಪ್ಪು ಕಟೌಟ್​ ತೆರವುಗೊಳಿಸಲಾಗಿದೆ. ಶಿವಮೊಗ್ಗ ನಗರದ ಅಮೀರ್ ಅಹ್ಮದ್ ಸರ್ಕಲ್ ಬಳಿ ಈ ಕಟೌಟ್ ಹಾಕಲಾಗಿತ್ತು. ಜಿಲ್ಲಾಡಳಿತದಿಂದ ಬೃಹತ್​​ ಟಿಪ್ಪು ಸುಲ್ತಾನ್ ಕಟೌಟ್ ತೆರವು ಕಾರ್ಯ ನಡೆಯಿತು. ಖಡ್ಗ ಹಿಡಿದ ಬೃಹತ್​ ಗಾತ್ರದ ಟಿಪ್ಪು ಸುಲ್ತಾನ್ ಕಟೌಟ್‌ ಅನ್ನು ಪೊಲೀಸ್ ಭದ್ರತೆಯಲ್ಲಿ ತೆರವುಗೊಳಿಸಲಾಗಿದೆ.

Also read: ಹುಬ್ಬಳ್ಳಿಯ ಪಂಚಾಕ್ಷರಿ ನಗರದಲ್ಲಿ ಗಣೇಶ ಪ್ರತಿಷ್ಠಾಪನೆ: ಪೂಜೆ ಸಲ್ಲಿಸಿ, ಆರತಿ ಬೆಳಗಿದ ಮುಸ್ಲಿಂ ಕುಟುಂಬ

ಈದ್ ಮಿಲಾದ್ ಗೆ ರಾಗಿಗುಡ್ಡದಲ್ಲಿ ಬ್ಯಾನರ್ ಮತ್ತು ಬಂಟಿಂಗ್ಸ್ ಅನ್ನು ಅಲಂಕಾರ ಮಾಡಲಾಗಿತ್ತು. ಈ ಅಲಂಕಾರದ ವಸ್ತುಗಳನ್ನು ತೆಗೆಯಲು ಯಾರೂ ಇಲ್ಲದ ಹಿನ್ನೆಲೆಯಲ್ಲಿ ಪಾಲಿಕೆಯಿಂದಲೇ ಜೆಸಿಬಿ ಮೂಲಕ ತೆರವು ಗೊಳಿಸುವ ಕಾರ್ಯಾಚರಣೆ ನೆರವೇರಿತು.

ಎಸ್​ಪಿ ಕಚೇರಿಗೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಭೇಟಿ

ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣ ನಡೆದ ಹಿನ್ನೆಲೆಯಲ್ಲಿ ಶಿವಮೊಗ್ಗ ಎಸ್​ಪಿ ಕಚೇರಿಗೆ ಪೂರ್ವ ವಲಯ ಐಜಿಪಿ ತ್ಯಾಗರಾಜನ್ ಭೇಟಿ ನೀಡಿದ್ದಾರೆ. ಎಸ್​ಪಿ ಮಿಥುನ್ ಕುಮಾರ್​ರಿಂದ ಐಜಿಪಿ ಮಾಹಿತಿ ಪಡೆದಿದ್ದಾರೆ.

ಈದ್ ಮಿಲಾದ್ ಗಲಾಟೆ: 24 ಎಫ್ಐಆರ್, 60 ಆರೋಪಿಗಳ ಬಂಧನ – ಎಸ್‌ಪಿ ಮಿಥುನ್

ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣ ಸಂಬಂಧ ಈವರೆಗೂ 24 ಎಫ್ಐಆರ್ ದಾಖಲಿಸಲಾಗಿದೆ ಎಂದು ಶಿವಮೊಗ್ಗದಲ್ಲಿ ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್‌ ಹೇಳಿದ್ದಾರೆ. ಈವರೆಗೆ 60 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ. ಕೆಲ ಆರೋಪಿಗಳನ್ನು ಚಿತ್ರದುರ್ಗ ಕಾರಾಗೃಹಕ್ಕೆ ಶಿಫ್ಟ್‌ ಮಾಡಿದ್ದೇವೆ. ಬಂಧಿತರಿಂದ 1 ಕಾರು, 1 ತ್ರಿಚಕ್ರ ವಾಹನ, 2 ಬೈಕ್ ಜಪ್ತಿ ಮಾಡಿದ್ದೇವೆ. ಗಲಾಟೆ ವೇಳೆ ಕಲ್ಲೆಸೆತದಿಂದ 7 ಮನೆಗಳ ಗಾಜು ಪುಡಿಪುಡಿಯಾಗಿವೆ. ಬೆಳಗ್ಗೆಯಿಂದ ಈವರೆಗೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. 144 ಸೆಕ್ಷನ್ ಜಾರಿ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯುತ್ತಿಲ್ಲ ಎಂದು ಶಿವಮೊಗ್ಗದಲ್ಲಿ ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್‌ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:11 pm, Mon, 2 October 23

Follow us on