ಬಿಜೆಪಿ ಅಥವಾ ಕಾಂಗ್ರೆಸ್; ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸುಮಲತಾ ಸ್ಪರ್ಧೆ ಖಚಿತ!

|

Updated on: Jan 09, 2024 | 2:57 PM

ಬಿಜೆಪಿ ಟಿಕೆಟ್ ನಿರಾಕರಿಸಿದರೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಸಾಧ್ಯತೆಯನ್ನು ಶಶಿಕುಮಾರ್ ತಳ್ಳಿಹಾಕಲಿಲ್ಲ. ಅಂಬರೀಶ್ ಅವರು 24 ವರ್ಷಗಳ ಕಾಂಗ್ರೆಸ್ ಪಕ್ಷದಲ್ಲಿದ್ದರು ಮತ್ತು 3 ಬಾರಿ ಸಂಸದರಾಗಿ ಒಮ್ಮೆ ಕೇಂದ್ರದಲ್ಲಿ ಸಚಿವರೂ ಆಗಿದ್ದರು. ಹಾಗಾಗಿ, ಕಾಂಗ್ರೆಸ್ ನೊಂದಿಗೂ ಸುಮಲತಾ ಅವರಿಗೆ ನಂಟಿದೆ, ಬಿಜೆಪಿ ಟಿಕೆಟ್ ನೀಡದಿದ್ದರೆ ಕಾಂಗ್ರೆಸ್ ಟಿಕೆಟ್ ಗೆ ಪ್ರಯತ್ನಿಸಲಿದ್ದಾರೆ, ಒಟ್ಟಿನಲ್ಲಿ ಅವರ ಸ್ಪರ್ಧೆ ಶತಸಿದ್ಧ ಎಂದು ಶಶಿಕುಮಾರ್ ಹೇಳಿದರು.

ಮಂಡ್ಯ: ಕ್ಷೇತ್ರದ ಪಕ್ಷೇತರ ಸಂಸದೆಯಾಗಿರುವ ಸುಮಲತಾ ಅಂಬರೀಶ್ (Sumalatha Ambareesh) ತಾವು ಹೇಳಬೇಕಿರುವುದನ್ನು ತಮ್ಮ ಆಪ್ತರ ಮೂಲಕ ಹೇಳಿಸುತ್ತಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತಾವು ಮಂಡ್ಯದಿಂದ ಸ್ಪರ್ಧಿಸುವುದು ನಿಶ್ಚಿತ ಎಂಬ ಸಂದೇಶವನ್ನು ಅವರು ತಮ್ಮ ಆಪ್ತ ಹನಕೆರೆ ಶಶಿಕುಮಾರ್ (Hanakere Shashikumar) ಅವರ ಬಾಯಿಂದ ಹೇಳಿಸಿದ್ದಾರೆ. ಸಂದೇಶಕ್ಕಿಂತ ಅವರು ಬಿಜೆಪಿಗೆ ಎಚ್ಚರಿಕೆ (warning) ರವಾನಿಸಿದ್ದಾರೆ ಅಂತ ಹೇಳಿದರೆ ಹೆಚ್ಚು ಸೂಕ್ತವಾದೀತು. ಇಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಶಶಿಕುಮಾರ್, ಸುಮಲತಾ ಅವರು ಈಗಲೂ ಪಕ್ಷೇತರ ಸಂಸದೆಯಾಗಿದ್ದಾರೆ ಮತ್ತು ಬಿಜೆಪಿಗೆ ಬಾಹ್ಯ ಬೆಂಬಲ ಮಾತ್ರ ನೀಡಿದ್ದಾರೆ ಎಂದು ಹೇಳಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಸ್ಪರ್ಧಿಸಲು ನಿಶ್ಚಯಿಸಿಕೊಂಡಿದ್ದಾರೆ ಎಂದು ಹೇಳಿದ ಶಶಿಕುಮಾರ್, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ನಾಯಕರು ಜೆಡಿಎಸ್ ಅಭ್ಯರ್ಥಿಗೆ ಮಂಡ್ಯ ಕ್ಷೇತ್ರ ಬಿಟ್ಟುಕೊಡುವ ನಿರ್ಧಾರ ಮಾಡಿದರೆ ಸುಮಲತಾ ಅವರ ಮುಂದೆ ಬೇರೆ ಆಯ್ಕೆಗಳಿವೆ ಎಂದು ಶಶಿಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on