ನೆರೆರಾಜ್ಯ ಆಂಧ್ರಪ್ರದೇಶದಲ್ಲೂ ಭಾರಿ ಮಳೆ, ತಿರುಪತಿ ತಿಮ್ಮಪ್ಪನ ಗುಡಿಯನ್ನು ಮುಚ್ಚುವಂತೆ ಮಾಡಿದೆ ಎಡೆಬಿಡದೆ ಸುರಿಯುತ್ತಿರುವ ಮಳೆ!

Edited By:

Updated on: Nov 19, 2021 | 6:40 PM

ಕಳೆದ ರಾತ್ರಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ನೀರು ದೇವಸ್ಥಾನದ ಒಳಗಡೆ ಹೊಕ್ಕಿದೆ ಮತ್ತು ಬೆಳಗಿನ ಜಾವ ನೀರನ್ನು ಮೋಟಾರುಗಳ ನೆರವಿನಿಂದ ಪಂಪ್ ಮಾಡಿ ಹೊರಹಾಕಲಾಗಿದೆ.

ನೆರೆರಾಜ್ಯ ಆಂಧ್ರಪ್ರದೇಶದಲ್ಲಿ ಒಂದೇ ಸಮ ಮಳೆ ಸುರಿಯುತ್ತಿದೆ. ಇದುವರೆಗೆ ಕೇವಲ ನಮ್ಮನ್ನು ಮಾತ್ರ ಕಾಡುತ್ತಿದ್ದ ಮಳೆ ಈಗ ದೇವರುಗಳ ಬೆನ್ನಟ್ಟಿದೆ. ಹೌದು ಮಾರಾಯ್ರೇ, ಇದು ಸತ್ಯ. ನಾವ್ಯಾಕೆ ಹಾಗೆ ಹೇಳುತ್ತಿದ್ದೇವೆ ಅಂದರೆ ಜಗತ್ಪ್ರಸಿದ್ಧ ತಿರುಮಲ ಬೆಟ್ಟದ ಶಿಖರದಲ್ಲಿರುವ ವೆಂಕಟೇಶ್ವರ ದೇವಸ್ಥಾನ ಎರಡು ದಿನಗಳ ಮಟ್ಟಿಗೆ ಮುಚ್ಚಲ್ಪಟ್ಟಿದ್ದು, ಭಕ್ತರಿಗೆ ರವಿವಾರದವರಗೆ ದರ್ಶನ ಭಾಗ್ಯವಿಲ್ಲ. ತಿರುಪತಿಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ವೆಂಕಟೇಶ್ವರ ದೇವಸ್ಥಾನವು ಏಳು ಬೆಟ್ಟಗಳಿಂದ ಸುತ್ತುವರೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಏಳನೇ ಬೆಟ್ಟ ವೆಂಕಟಾದ್ರಿಯ ಶಿಖರದ ಮೇಲೆ ದೇಗುಲವಿರುವುದರಿಂದ ಮಳೆ ನೇರವಾಗಿ ದೇವಸ್ಥಾನದ ಮೇಲೆ ಸುರಿಯುತ್ತಿದೆ ಮತ್ತು ಗರ್ಭಗುಡಿಯೊಳಗೆ ನೀರು ಪ್ರವೇಶಿಸುತ್ತಿದೆ. ದೇವಸ್ಥಾನದ ಆವರಣವೆಲ್ಲ ಜಲಾವೃತಗೊಂಡಿರುವ ಕಾರಣ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧಿಕಾರಿಗಳು ಅದನ್ನು ಎರಡು ದಿದನಗಳ ಮಟ್ಟಿಗೆ ಮುಚ್ಚುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಕಳೆದ ರಾತ್ರಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದ್ದರಿಂದ ನೀರು ದೇವಸ್ಥಾನದ ಒಳಗಡೆ ಹೊಕ್ಕಿದೆ ಮತ್ತು ಬೆಳಗಿನ ಜಾವ ನೀರನ್ನು ಮೋಟಾರುಗಳ ನೆರವಿನಿಂದ ಪಂಪ್ ಮಾಡಿ ಹೊರಹಾಕಲಾಗಿದೆ. ನೀರನ್ನು ಹೊರಹಾಕಿದ ನಂತರ ಸ್ಥಿತಿಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆಯಾದರೂ ಪುನಃ ಮಳೆಯಾಗುವ ಸೂಚನೆಗಳಿರುವುದರಿಂದ ದೇವಸ್ಥಾನ ಎರಡು ದಿನಗಳ ಮಟ್ಟಿಗೆ ಮುಚ್ಚುವ ನಿರ್ಧಾರ ತೆಗೆದುಕೊಳ್ಳಲಾಯಿತೆಂದು ಟಿಟಿಡಿ ಅಧಿಕಾರಿಗಳು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಅಲ್ಲದೆ, ಇಲ್ಲಿರುವ ಎರಡು ವಿಡಿಯೋಗಳನ್ನು ನೀವು ಗಮನಿಸಿ. ಒಂದನ್ನು ಎಸ್​ ವಿ ಕೃಷ್ಣ ಚೈತನ್ಯ ಅನ್ನುವವರು ಟ್ವೀಟ್​​ ಮಾಡಿದ್ದಾರೆ, ಮಳೆಯ ರಭಸಕ್ಕೆ ನೀರು ಬೆಟ್ಟಗಳ ಮೇಲಿಂದ ಧೋ ಅಂತ ಕೆಳಗೆ ಸುರಿಯುತ್ತಿದೆ. ನೀರು ಬೀಳುತ್ತಿರುವ ರಭಸಕ್ಕೆ ಕಲ್ಲು ಬಂಡೆಗಳು ಸಹ ರಸ್ತೆಗೆ ಬಂದು ಬೀಳುತ್ತಿವೆ. ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಗುಡ್ಡಕುಸಿತ ಮತ್ತು ರಸ್ತೆ ಮೇಲೆ ನೀರು ಶೇಖರಣೆಗೊಂಡಿರುವುದರಿಂದ ಜನ ಮತ್ತು ವಾಹನ ಸಂಚಾರ ಸ್ಥಗಿತಗೊಂಡಿದೆ.

ಇದನ್ನೂ ಓದಿ:   Nayanthara- Vignesh Shivan: ಹುಟ್ಟುಹಬ್ಬಕ್ಕೆ ಗೆಳೆಯ ನೀಡಿದ ಅದ್ದೂರಿ ಸರ್ಪ್ರೈಸ್​ಗೆ ನಯನತಾರಾ ಫಿದಾ; ವಿಡಿಯೋ ನೋಡಿ

Follow Us