ತುಮಕೂರು, ಅಕ್ಟೋಬರ್ 21: ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parmeshwara) ತವರು ಜಿಲ್ಲೆಯಲ್ಲಿ ಪೊಲೀಸ್ ಠಾಣೆಯೊಂದು (Police Station) ಮಳೆಗೆ ಸೋರುತ್ತಿದೆ. ತುಮಕೂರು (Tumakur) ನಗರದ ಜಯನಗರ ಪೊಲೀಸ್ ಠಾಣೆಯ ಪರಿಸ್ಥಿತಿ ಕಂಡು ಸಾರ್ವಜನಿಕರು ಮರುಗಿದ್ದಾರೆ. ಸುಸಜ್ಜಿತವಾದ ಕಟ್ಟಡವಿಲ್ಲದೆ ನಗರದ ಜಯನಗರ ಪೊಲೀಸರು ಪರದಾಡುತ್ತಿದ್ದಾರೆ.
ಠಾಣೆಯಲ್ಲಿನ ಕಂಪ್ಯೂಟರ್ಗಳು, ಯುಪಿಎಸ್ ಬ್ಯಾಟರಿಗಳು ಸೇರಿದಂತೆ ಕಡತಗಳು ಮಳೆ ನೀರಿಗೆ ಹಾಳಾಗುತ್ತಿವೆ. ಗೃಹ ಸಚಿವರ ತವರು ಜಿಲ್ಲೆಯಲ್ಲಿನ ಪೊಲೀಸ್ ಠಾಣೆಯ ಪರಿಸ್ಥಿತಿ ಹೀಗಾದರೆ ಬೇರೆ ಕಡೆ ಠಾಣೆಗಳ ಸ್ಥಿತಿ ಹೇಗಿದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಜಯನಗರ ಪೊಲೀಸ್ ಠಾಣೆ ನಡೆಯುತ್ತಿರುವ ಕಟ್ಟಡ ಹಳೆಯದಾಗಿದೆ. ಕಟ್ಟಡದ ಸಿಮೆಂಟ್ ಛಾವಣಿಯಿಂದ ಮಳೆಯ ನೀರು ಜಿನುಗುತ್ತಿದೆ. ಜನರಿಗೆ ರಕ್ಷಣೆ ನೀಡಬೇಕಾದ ಪೊಲೀಸರು ಮಳೆ ನೀರಿನಿಂದ ನಮ್ಮನ್ನು ರಕ್ಷಿಸಿ ಎನ್ನುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ