ಅರೋಪಿ ಪ್ರವೀಣ್ ಚೌಗುಲೆ ಮತ್ತು ಕೊಲೆಯಾದ ಐನಾಜ್ ಏರ್ ಇಂಡಿಯಾವೊಂದರಲ್ಲಿ ಕರ್ತವ್ಯನಿರತರಾಗಿದ್ದ ವಿಡಿಯೋ ವೈರಲ್

ಅರುಣ್​ ಕುಮಾರ್​ ಬೆಳ್ಳಿ

Updated on: Nov 16, 2023 | 10:56 AM

ಐನಾಜ್ ತಿರಸ್ಕಾರದಿಂದ ರೊಚ್ಚಿಗೆದ್ದಿದ್ದ ಪ್ರವೀಣ್ ಆಕೆಗೆ ಗತಿಕಾಣಿಸುವ ಉದ್ದೇಶದಿಂದ ಮನೆಹೊಕ್ಕು, ಆಕೆಯನ್ನಲ್ಲದೆ ರಕ್ಷಣೆ ಧಾವಿಸಿದ್ದ ಐನಾಜ್ ತಾಯಿ, ಒಬ್ಬ ಸಹೋದರಿ ಮತ್ತು 12 ವರ್ಷದ ಸಹೋದರನನ್ನು ಚಾಕುವೊಂದರಿಂದ ತಿವಿದು ಹತ್ಯೆ ಮಾಡಿ ಮನೆಯಲ್ಲಿದ್ದ ಅಜ್ಜಿಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದ.

ಉಡುಪಿ: ರವಿವಾರ ಬೆಳಗ್ಗೆ ನಗರದ ಮಲ್ಪೆ ಪ್ರದೇಶದಲ್ಲಿ ವಾಸವಾಗಿದ್ದ ಒಂದೇ ಕುಟುಂಬದ ನಾಲ್ವರನ್ನು ಇರಿದು ಕೊಂದು ಮತ್ತೊಬ್ಬ ಹಿರಿಯ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಆರೋಪದಲ್ಲಿ ಏರ್ ಇಂಡಿಯ ಉದ್ಯೋಗಿ (Air India employee) ಪ್ರವೀಣ್ ಚೌಗುಲೆಯನ್ನು (Praveen Chougule) ಪೊಲೀಸರು ಈಗಾಗಲೇ ಬಂಧಿಸಿದ್ದು ಅವನು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆಯಾದ ನಾಲ್ವರ ಪೈಕಿ 21-ವರ್ಷ ವಯಸ್ಸಿನ ಯುವತಿ ಐನಾಜ್ (Ainaz) ಪ್ರವೀಣ್ ನ ಸಹೋದ್ಯೋಗಿಯಾಗಿದ್ದಳು. ಅವರಿಬ್ಬರು ಫ್ಲೈಟ್ ವೊಂದರಲ್ಲಿ ಇತರ ಸಿಬ್ಬಂದಿಯೊಂದಿಗೆ ಕರ್ತವ್ಯನಿರತರಾಗಿದ್ದ ವಿಡಿಯೋವೊಂದು ಮಾಧ್ಯಮಗಳಿಗೆ ಲಭ್ಯವಾಗಿದ್ದು ಇದು ವೈರಲ್ ಆಗಿದೆ. ಮೂಲಗಳ ಪ್ರಕಾರ ಮದುವೆಯಾಗಿ ಎರಡು ಮಕ್ಕಳ ತಂದೆಯೂ ಆಗಿರುವ 39-ವರ್ಷ ವಯಸ್ಸಿನ ಪ್ರವೀಣ್, ಐನಾಜ್ ಸೌದರ್ಯಕ್ಕೆ ಮನಸೋತು ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಆದರೆ ಯುವತಿ ಕ್ಯಾರೇ ಅಂದಿರಲಿಲ್ಲ.

ಐನಾಜ್ ತಿರಸ್ಕಾರದಿಂದ ರೊಚ್ಚಿಗೆದ್ದಿದ್ದ ಪ್ರವೀಣ್ ಆಕೆಗೆ ಗತಿಕಾಣಿಸುವ ಉದ್ದೇಶದಿಂದ ಮನೆಹೊಕ್ಕು, ಆಕೆಯನ್ನಲ್ಲದೆ ರಕ್ಷಣೆ ಧಾವಿಸಿದ್ದ ಐನಾಜ್ ತಾಯಿ, ಒಬ್ಬ ಸಹೋದರಿ ಮತ್ತು 12 ವರ್ಷದ ಸಹೋದರನನ್ನು ಚಾಕುವೊಂದರಿಂದ ತಿವಿದು ಹತ್ಯೆ ಮಾಡಿ ಮನೆಯಲ್ಲಿದ್ದ ಅಜ್ಜಿಯ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದ. ಭೀಕರ ಮತ್ತು ಬರ್ಬರ ಅಪರಾಧ ನಡೆಸಿದ ಬಳಿಕ ಪರಾರಿಯಾಗಿದ್ದ ಪ್ರವೀಣ್ ನನ್ನು ಉಡುಪಿ ಪೊಲೀಸರು ಸಾಂಗ್ಲಿಯಲ್ಲಿ ಬಂಧಿಸಿದ್ದರು. ಏರ್ ಇಂಡಿಯ ಕೆಲಸಕ್ಕೆ ಸೇರುವ ಮೊದಲು ಪ್ರವೀಣ್ ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದನಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.