ವಿಜಯಪುರ: ಸೋರುತ್ತಿರುವೆ ಸರ್ಕಾರಿ ಶಾಲೆಯ ಕ್ಲಾಸ್​​ಗಳು, ಕಾರಿಡಾರ್​ನಲ್ಲಿ ಮಕ್ಕಳಿಗೆ ಪಾಠ 

| Updated By: ವಿವೇಕ ಬಿರಾದಾರ

Updated on: Jun 12, 2024 | 1:26 PM

ರಾಜ್ಯದ ಅದೆಷ್ಟೋ ಸರ್ಕಾರಿ ಶಾಲೆಗಳಲ್ಲಿ ದುರಸ್ತಿ ಕಾರ್ಯ ಆರಂಭವಾಗಬೇಕಿದೆ. ಅನೇಕ ಶಾಲೆಗಳ ತರಗತಿಗಳು ಸೋರುತ್ತಿವೆ. ಅದೇ ರೀತಿಯಾಗಿ, ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ರಾಜನಾಳ ಎಲ್​ಟಿಯ ನಮ್ಮೂರು ಹಿರಿಯ ಪ್ರಾಥಮಿಕ ಶಾಲೆಯ ತರಗತಿಗಳು ಸೋರುತ್ತಿವೆ.

ವಿಜಯಪುರ, ಜೂನ್​ 12: ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು ಇಂದೂ (ಜೂ.12) ಸಹ ಅಲ್ಲಲ್ಲಿ ಮಳೆಯಾಗಿದೆ. ಇಂಡಿ (Indi) ತಾಲೂಕಿನ ರಾಜನಾಳ ಎಲ್​ಟಿಯ ನಮ್ಮೂರು ಹಿರಿಯ ಪ್ರಾಥಮಿಕ ಶಾಲೆಯ (Government Higher Primary School) ಮಕ್ಕಳು ಜೀವ ಭಯದಲ್ಲೇ ಪಾಠ ಕೇಳುವಂತಾಗಿದೆ. ಮಳೆಯಿಂದ (Rain) ನೀರು ಶಾಲೆಯ ಮೇಲ್ಛಾವಣಿ ಸೋರುತ್ತಿದ್ದು ತರಗತಿಗಳಲ್ಲಿ ಕೂತು ಪಾಠ ಕೇಳದಂತಾಗಿದೆ. ಶಾಲಾ ತರಗತಿಗಳ ಮೇಲ್ಛಾವಣಿಯ ಸಿಮೆಂಟ್ ಕಿತ್ತು ಹೋಗಿದ್ದು ಮಳೆಯ ನೀರು ನಿರಂತರವಾಗಿ ತೊಟ್ಟಿಕ್ಕುತ್ತಿದೆ. ಮೇಲ್ಛಾವಣಿಯಿಂದ ನೀರು ಸೋರುತ್ತಿದ್ದು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ತೊಟ್ಟಿಕ್ಕುವ ತರಗತಿಗಳಲ್ಲಿ ಪಾಠ ಕೇಳಲು ಸಾಧ್ಯವಾಗದೇ ಶಾಲೆಯ ಹೊರಗಡೆ ಕಾರಿಡಾರ್​ನಲ್ಲಿ ಕುಳಿತು ಪಾಠ ಕೇಳುತ್ತಿದ್ದಾರೆ. ಶಿಕ್ಷಕರು ಸಹ ಅನಿವಾರ್ಯವಾಗಿ ಹೊರಗಡೆಯೇ ಪಾಠ ಹೇಳುವಂತಾಗಿದೆ.

ರಾಜನಾಳ ಎಲ್​ಟಿ ನಮ್ಮೂರು ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆ ಶಿಥಿಲವಾಗಿದೆ, ಮಳೆಯಿಂದ ನೆನದು ಮೇಲ್ಛಾವಣಿ ಕುಸಿದು ಬಿಳುವ ಆತಂಕವಿದೆ. ಮಳೆ ಕಡಿಮೆಯಾಗಿ ತರಗತಿಗಳಲ್ಲಿ ಮಕ್ಕಳು ಇರುವ ವೇಳೆ ಮೇಲ್ಛಾವಣಿ ಕುಸಿದು ಬಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ. ಹೀಗಾಗಿ ವಿಜಯಪುರ ಶಾಲಾ ಶಿಕ್ಷಣ ಇಲಾಖೆ ಆಧಿಕಾರಿಗಳು ವ್ಯವಸ್ಥಾಪಕ ನಿರ್ದೇಶಕ ಬಿಇಓ ಹಾಗೂ ಡಿಡಿಪಿಐ ಈ ನಿಟ್ಟಿನಲ್ಲಿ ಗಮನ ಹರಿಸಿ ಶಾಲಾ ಕಟ್ಟಡ ದುರಸ್ಥಿ ಮಾಡಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಶತಮಾನದ ಸಂಭ್ರಮ ಕಂಡಿರೋ ಸರ್ಕಾರಿ ಶಾಲೆಗಿಲ್ಲ ಕಾಯಕಲ್ಪ; ಮಳೆ ಬಂದರೆ ಮಕ್ಕಳ ಪಾಡು ಅಧೋಗತಿ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:25 pm, Wed, 12 June 24

Follow us on