ಘಟಪ್ರಭಾ ನದಿಯಲ್ಲಿ ಹೆಚ್ಚಿದ ನೀರಿನ ಹರಿವು, ಹಿಡ್ಕಲ್ ಜಲಾಶಯದ ಹಿನ್ನೀರಲ್ಲಿರುವ ವಿಟ್ಠಲ ದೇವಸ್ಥಾನ ಭಾಗಶಃ ಮುಳುಗಡೆ

|

Updated on: Jul 09, 2024 | 11:33 AM

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯಾದರೆ ನೀರು ಹಲವಾರು ನದಿಗಳಿಗೆ ಹರಿದು ಹೋಗುತ್ತದೆ ಮತ್ತು ಅಲ್ಲೇ ಉದ್ಭವಿಸುವ ಘಟಪ್ರಭಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುವುದು ಸ್ವಾಭಾವಿಕ. ಬೆಳಗಾವಿ ಜಿಲ್ಲೆಗೆ ಹೊಂದಿಕೊಂಡಿರುವ ಮಹಾರಾಷ್ಟ್ರದಲ್ಲಿ ಮಳೆಯ ಪ್ರತಾಪಕ್ಕೆ ಎಣೆಯಿಲ್ಲ. ಬೆಳಗಾವಿಗೆ ಹತ್ತಿರದ ಮಹಾರಾಷ್ಟ್ರದ ಅನೇಕ ಭಾಗಗಳಲ್ಲಿ ಮಳೆ ಧೋ ಅಂತ ಸುರಿಯುತ್ತಿದೆ.

ಬೆಳಗಾವಿ: ರಾಜ್ಯದ ನಾನಾ ಭಾಗಗಳಲ್ಲಿ ಮಳೆ ಸುರಿಯುವುದು ಮುಂದುವರಿದಿದೆ. ಬೆಳಗಾವಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಸತತವಾಗಿ ಮಳೆಯಾಗುತ್ತಿದೆ ಮತ್ತು ಜಿಲ್ಲೆಯ ಮೂಲಕ ಹರಿಯುವ ಎಲ್ಲ ನದಿಗಳು ಹೆಚ್ಚು ಕಡಿಮೆ ತುಂಬಿ ಹರಿಯುತ್ತಿವೆ. ನಮ್ಮ ಬೆಳಗಾವಿ ವರದಿಗಾರ ಹುಕ್ಕೇರಿ ತಾಲ್ಲೂಕಿನ ಹುನ್ನೂರು ಗ್ರಾಮದಿಂದ ಈ ವರದಿ ಕಳಿಸಿದ್ದಾರೆ. ಅವರು ಹೇಳುವ ಪ್ರಕಾರ ಪಶ್ಚಿಮ ಘಟ್ಟದಲ್ಲಿ ಹುಟ್ಟುವ ಘಟಪ್ರಭಾ ನದಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ ಮತ್ತು ಹಿಡ್ಕಲ್ ಜಲಾಶಯ ಭರ್ತಿಯಾಗಿದೆ, ಜಲಾಶಯದ ಹಿನ್ನೀರಿನಲ್ಲಿರುವ ವಿಟ್ಠಲ ದೇವಸ್ಥಾನ ಆಲ್ಮೋಸ್ಟ್ ಮುಳುಗಡೆಯಾಗಿದೆ. ದೇವಸ್ಥಾನದ ಎತ್ತರ 148ಅಡಿ, ಆದರೆ ಅದರ ಗೋಪುರ ಮಾತ್ರ ಚುರಿಸುವಷ್ಟು ನೀರು ಆವರಿಸಿದೆ. ಹುನ್ನೂರು ಗ್ರಾಮದ ನಿವಾಸಿಯೊಬ್ಬರು ಹೇಳುವ ಹಾಗೆ ಸುಮಾರು 97 ವರ್ಷಗಳಷ್ಟು ಹಿಂದೆ ದೇವಸ್ಥಾನವನ್ನು ಕಟ್ಟಲಾಗಿದೆ ಮತ್ತು ಭಕ್ತಾದಿಗಳ ದರ್ಶನಕ್ಕಾಗಿ ಕಳೆದ ತಿಂಗಳಷ್ಟೇ ಅದನ್ನು ತೆರೆಯಲಾಗಿತ್ತಂತೆ. ಅದರೆ ಇನ್ನು ಮಳೆಗಾಲ ಮುಗಿಯುವವರೆಗೆ ಭಕ್ತರಿಗೆ ವಿಟ್ಠಲನ ದರ್ಶನ ಭಾಗ್ಯ ಸಿಗಲಾರದು. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಸುರಿಯುವುದು ಮುಂದುವರಿಯಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಮಳೆಯಿಂದ ಒಂದೇ ವಾರದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 24 ಮನೆಗಳಿಗೆ ಹಾನಿ

Follow us on