ಗೆದ್ರೆ ಪಕ್ಷದ್ದು, ಸೋತ್ರೆ ಇವಿಎಂನದ್ದು, ಈ ಥರ ಆರೋಪ ಸರಿಯಲ್ಲ: ಒಮರ್ ಅಬ್ದುಲ್ಲಾ

Updated on: Dec 16, 2024 | 12:11 AM

Omar Abdullah on EVM charge: ಇವಿಎಂ ಮೆಷೀನ್ ದುರ್ಬಳಕೆ ಮಾಡಿಕೊಂಡು ಬಿಜೆಪಿ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತದೆ ಎನ್ನುವ ಕಾಂಗ್ರೆಸ್ ಪಕ್ಷದ ಆರೋಪಕ್ಕೆ ಬಿಜೆಪಿ ತಿರುಗೇಟು ಕೊಡುವುದನ್ನು ಕೇಳಿದ್ದೇವೆ. ವಿಪಕ್ಷ ವರ್ಗಕ್ಕೆ ಸೇರಿದವರಾದ ಒಮರ್ ಅಬ್ದುಲ್ಲಾ ಕೂಡ ಕಾಂಗ್ರೆಸ್ ಆರೋಪಕ್ಕೆ ಟಾಂಟ್ ಕೊಟ್ಟಿದ್ದಾರೆ. ಚುನಾವಣೆಯಲ್ಲಿ ಗೆದ್ದಾಗ ಅದು ಪಕ್ಷದ ಗೆಲುವೆಂದು ಸಂಭ್ರಮಿಸುವವರು, ಚುನಾವಣೆಯಲ್ಲಿ ಸೋತಾಗ ಇವಿಎಂಗಳತ್ತ ಬೊಟ್ಟು ಮಾಡುವುದು ಸರಿಯಲ್ಲ ಎಂದಿದ್ದಾರೆ.

ನವದೆಹಲಿ, ಡಿಸೆಂಬರ್ 15: ಇವಿಎಂ ಮೆಷೀನ್ ಮೂಲಕ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತಿದೆ ಎಂದು ಕಾಂಗ್ರೆಸ್ ಪಕ್ಷ ಆಗಾಗ್ಗೆ ಮಾಡುತ್ತಿರುವ ಆರೋಪಗಳಿಗೆ ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟಾಂಟ್ ನೀಡಿದ್ದಾರೆ. ಚುನಾವಣೆಯಲ್ಲಿ ಗೆದ್ದಾಗ ಸಂಭ್ರಮಿಸುತ್ತೀರಿ. ಚುನಾವಣೆಯಲ್ಲಿ ಸೋತಾಗ ಇವಿಎಂಗಳನ್ನು ದೂಷಿಸುತ್ತೀರಿ. ಇದು ಹೇಗೆ ಸರಿ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ‘ಇದೇ ಇವಿಎಂಗಳ ಮೂಲಕ ನೂರಕ್ಕೂ ಹೆಚ್ಚು ಮಂದಿ ನಿಮ್ಮ ಪಕ್ಷದಿಂದ ಸಂಸತ್​ಗೆ ಹೋಗುತ್ತಾರೆ. ಅದನ್ನು ನಿಮ್ಮ ಪಕ್ಷದ ಗೆಲುವು ಎಂದು ಸೆಲಬ್ರೇಟ್ ಮಾಡುತ್ತೀರಿ. ಕೆಲ ತಿಂಗಳ ಬಳಿಕ ಚುನಾವಣಾ ಫಲಿತಾಂಶ ನಿರೀಕ್ಷಿಸಿದಂತೆ ಬರದಿದ್ದರೆ ಇವಿಎಂಗಳತ್ತ ಬೊಟ್ಟು ಮಾಡುತ್ತೀರಿ’ ಎಂದು ಕಾಂಗ್ರೆಸ್ ಪಕ್ಷದ ಹೆಸರೆತ್ತದೆಯೇ ಒಮರ್ ಅಬ್ದುಲ್ಲಾ ವ್ಯಂಗ್ಯ ಮಾಡಿದ್ದಾರೆ. ತಾವು ಹಿಂದೆ ಸೋತಾಗ ಇವಿಎಂ ಬಗ್ಗೆ ಅಪಸ್ವರ ಎತ್ತಲಿಲ್ಲ. ನಂತರ ಗೆದ್ದೆ. ಜನರು ಒಮ್ಮೆ ಸೋಲಿಸುತ್ತಾರೆ, ಮಗದೊಮ್ಮೆ ಗೆಲ್ಲಿಸುತ್ತಾರೆ. ಅದು ಪ್ರಜಾತಂತ್ರ ಎಂದು ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಮುಖ್ಯಸ್ಥರೂ ಆದ ಅವರು ಪಿಟಿಐ ಸುದ್ದಿಸಂಸ್ಥೆಯ ಸಂದರ್ಶನದ ವೇಳೆ ಹೇಳಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More