Sign In

By signing in or creating an account, you agree with Associated Broadcasting Company's Terms & Conditions and Privacy Policy.

Father’s Day 2022: ನೆನಪಿನ ಭಿತ್ತಿಯಲ್ಲಿ ಅಪ್ಪನ ಚಿತ್ರ

ತಾನು ಕಲಿತ ನಾಲ್ಕಕ್ಷರವನ್ನೇ ಬಳಸಿಕೊಂಡು ಅರಣ್ಯ ಗುತ್ತಿಗೆದಾರರಲ್ಲಿ ಕಾರಕೂನನಾಗಿದ್ದ ಅಪ್ಪ, ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಸುಮಾರು 20-25 ಕಿ.ಮೀ.ಸೈಕಲ್ ಹೊಡೆದುಕೊಂಡು ಕಾಮಗಾರಿ ನಡೆಯುವ ಸ್ಥಳ ತಲುಪುತ್ತಿದ್ದ. ಮತ್ತೆ ಆತ ಮರಳುತ್ತಿದ್ದುದು ರಾತ್ರಿ ಒಂಬತ್ತು ಗಂಟೆಗೆ.

Father’s Day 2022: ನೆನಪಿನ ಭಿತ್ತಿಯಲ್ಲಿ ಅಪ್ಪನ ಚಿತ್ರ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jun 19, 2022 | 7:56 AM

ಸಾಯುವಾಗ ಅಪ್ಪನಿಗೆ ಸರಿಸುಮಾರು 94 ವರ್ಷಗಳಾಗಿರಬಹುದು. ಅವನು ದೊಡ್ಡ ಸಾಧಕನೇನೂ ಅಲ್ಲ. ಪತ್ರಿಕೆಯ ಪುಟಗಳಲ್ಲಿ ಹೆಸರು ಬರುವಷ್ಟು ಪ್ರಖ್ಯಾತಿಯನ್ನಾಗಲೀ ಕುಖ್ಯಾತಿಯನ್ನಾಗಲೀ ಆತ ಪಡೆದಿರಲಿಲ್ಲ. ಸಾಮಾನ್ಯರಲ್ಲಿಯೇ ಅತಿಸಾಮಾನ್ಯನಾಗಿದ್ದ. ಗ್ರಾಮೀಣ ಬದುಕಿನ ಅಪ್ಪಟ ಹುಂಬನಾಗಿದ್ದ. ಎಷ್ಟು ಬೇಗ ಕೋಪಿಸಿಕೊಳ್ಳುತ್ತಿದ್ದನೋ ಅಷ್ಟೇ ಬೇಗ ಶಾಂತನಾಗುತ್ತಿದ್ದ. ಅವನು ಕಲಿತದ್ದು ಮೂರೋ ನಾಲ್ಕನೇ ತರಗತಿ.ಆದರೆ ಅವನ ಅಕ್ಷರ ಮುತ್ತಿನಂತಿತ್ತು. ಬಡತನದ ಕಾರಣಕ್ಕೆ ಓದು ಮುಂದುವರಿಸಲಾಗದೇ ತುತ್ತಿನ ಚೀಲ ತುಂಬಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಣ್ಣ ವಯಸ್ಸಿನಲ್ಲಿಯೇ ಮನೆ ಬಿಟ್ಟು ತೆರಳಿದ್ದ. ಹುಟ್ಟಿ ಬೆಳೆದದ್ದು ಅಂಕೋಲಾ ತಾಲೂಕಿನ ಬೇಲೇಕೇರಿಯಲ್ಲಾದರೂ ಅಲ್ಲಿ ಇಲ್ಲಿ ಅಲೆದಾಡಿ ಬದುಕಿನ ನೆಲೆ ಕಂಡುಕೊಂಡಿದ್ದು ಮುಂಡಗೋಡು ತಾಲೂಕಿನ ಮಳಗಿಯಲ್ಲಿ.

ತಾನು ಕಲಿತ ನಾಲ್ಕಕ್ಷರವನ್ನೇ ಬಳಸಿಕೊಂಡು ಅರಣ್ಯ ಗುತ್ತಿಗೆದಾರರಲ್ಲಿ ಕಾರಕೂನನಾಗಿದ್ದ ಅಪ್ಪ, ಪ್ರತಿದಿನ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಸುಮಾರು 20-25 ಕಿ.ಮೀ.ಸೈಕಲ್ ಹೊಡೆದುಕೊಂಡು ಕಾಮಗಾರಿ ನಡೆಯುವ ಸ್ಥಳ ತಲುಪುತ್ತಿದ್ದ. ಮತ್ತೆ ಆತ ಮರಳುತ್ತಿದ್ದುದು ರಾತ್ರಿ ಒಂಬತ್ತು ಗಂಟೆಗೆ. ದಣಿದು ಬಂದವನು ನೀರನ್ನೂ ಕುಡಿಯದೇ” ಮಕ್ಕಳು ಊಟ ಮಾಡಿದರೆ? ಮಕ್ಕಳು ಮಲಗಿದರೆ?” ಎಂದು ಕೇಳುತ್ತ ತಲೆಯ ಮೇಲೆ ಕೈಯಾಡಿಸುತ್ತಿದ್ದುದು ನಿದ್ರೆಯ ಮಂಪರಿನಲ್ಲಿ ನಮ್ಮಅನುಭವಕ್ಕೆ ಬರುತಿತ್ತು. ಕಾರಕೂನಕಿಯ ಜೀತದಿಂದ ಬೇಸತ್ತ ಅಪ್ಪ ತಾನೇ ಸ್ವತಃ ಅರಣ್ಯ ಗುತ್ತಿಗೆದಾರನಾಗಲು ಪ್ರಯತ್ನಿಸಿದ. ಆದರೆ ಅದು ಅವನ ಕೈ ಹಿಡಿಯಲಿಲ್ಲ.

ಐದು ಜನ ಮಕ್ಕಳ ಸಂಸಾರ ಸಾಗಿಸಲು ಕಷ್ಟ ಪಡಲೇಬೇಕಾದ ಅನಿವಾರ್ಯತೆ ಅಪ್ಪನಿಗಿತ್ತು. ಸಾಮಾಜಿಕವಾಗಿ ತಕ್ಕ ಮಟ್ಟಿಗೆ ಗೌರವ ಸಂಪಾದಿಸಿದ್ದ ಅಪ್ಪ ಯಾವುದೇ ಕೆಲಸಕ್ಕೂ ಹಿಂಜರಿಯುತ್ತಿರಲಿಲ್ಲ. ಶ್ರಮಜೀವಿಯಾಗಿದ್ದ ಅವನಿಗೆ ಅನ್ಯಾಯದ ಮಾರ್ಗ ಗೊತ್ತಿರಲಿಲ್ಲ. ಸತ್ಯ, ಪ್ರಾಮಾಣಿಕತೆಯ ಸಂಕೇತವಾಗಿದ್ದ. ತಾನು ಪ್ರಾಥಮಿಕ ಶಾಲೆಯಲ್ಲಿ ಕಲಿತ”ಕಳ್ಳನಾಗಲು ಬೇಡ ಜನರೊಳು, ಸುಳ್ಳನೆನಿಸಲು ಬೇಡ ಜಗದೊಳು, ಮೈಗಳ್ಳನಾಗಲು ಬೇಡ ಗುರು ತಾಯ್ತಂದೆಗಳ ನುಡಿಗೆ”ಎಂಬ ಪದ್ಯವನ್ನು ಉಪದೇಶವೆಂಬ ರೀತಿಯಲ್ಲಿ ಯಾವಾಗಲೂ ಹೇಳುತ್ತ್ತಿದ್ದ. ಅರಣ್ಯ ಗುತ್ತಿಗೆದಾರನೊಬ್ಬ ಕೆಲಸಗಾರರಿಗೆ ಸರಿಯಾಗಿ ಕೂಲಿ ಕೊಡದಿದ್ದಾಗ ಅವನೊಡನೆ ಜಗಳವಾಡಿದ ಸಂಗತಿಯನ್ನು ಅಭಿನಯಪೂರ್ವಕವಾಗಿ ವರ್ಣಿಸುತ್ತಿದ್ದ.

ಇದನ್ನೂ ಓದಿ
Image
Indian book of Record: ಚಂದ್ರಹಾಸ ಅವರ ಕೃತಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೌರವ
Image
Gallstone: ಶಸ್ತ್ರಚಿಕಿತ್ಸೆಯಿಲ್ಲದೆ ಪಿತ್ತಕೋಶದ ಕಲ್ಲುಗಳನ್ನು ತೆಗೆಯಲು ಸಾಧ್ಯವೆ! ಇಲ್ಲಿದೆ ಮನೆಮದ್ದು
Image
Ayurvedic tips: ನೀವು ತುರಿಕೆ ಮತ್ತು ಫಂಗಲ್ ಸೋಂಕನ್ನು ಎದುರಿಸುತ್ತಿದ್ದರೆ ಈ ಪದಾರ್ಥಗಳನ್ನು ತಿನ್ನಬೇಡಿ..!

ಈ ಸುದ್ದಿಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ : ಎಲ್ಲ ಕೊಡಿಸುವ ಸಾಹುಕಾರ ಅಪ್ಪ 

ಬಡವರಿಗೆ ಅನ್ಯಾಯವಾದಾಗ, ಅವರಿಗೆ ಯಾವುದಾದರೂ ಸರಕಾರಿ ಸವಲತ್ತು ದೊರಕಬೇಕಾದಾಗ ಅವರ ಪರವಾಗಿ ಮೇಲಾಧಿಕಾರಿಗಳಿಗೆ ಅರ್ಜಿ ಬರೆದು ನ್ಯಾಯ ಒದಗಿಸುವ ಲಾಯರಿ ಕೆಲಸವನ್ನು ಮಾಡುತ್ತಿದ್ದ. ಹಲವು ಸಂದರ್ಭಗಳಲ್ಲಿ ಅಕ್ಕ-ಪಕ್ಕದ ಮನೆಗಳಲ್ಲಿ ನಡೆಯುತ್ತಿದ್ದ ಜಗಳಗಳನ್ನು ಪಂಚಾಯತಿ ಮೂಲಕ ಬಗೆಹರಿಸುವ ನ್ಯಾಯಾಧೀಶನೂ ಆಗುತ್ತಿದ್ದ. ಅಪ್ಪನಿಗೆ ಶಿಕ್ಷಣದ ಮಹತ್ವ ಗೊತ್ತಿತ್ತು. ಆದರೆ ಪಟ್ಟಾಗಿ ಕುಳಿತು ನಮ್ಮನ್ನೆಲ್ಲ ಓದಿಸಲು ಸಾಧ್ಯವಾಗುತ್ತಿರಲಿಲ್ಲ. ಹೊಟ್ಟೆ ತುಂಬಿಸಬೇಕಾದ ಅನಿವಾರ್ಯತೆಯ ನಡುವೆ ಅವನಿಗೆ ಅಷ್ಟು ಪುರುಸೊತ್ತು ಇರಲಿಲ್ಲ. ನಮ್ಮನ್ನೆಲ್ಲ ಓದಿಸುವ ಜವಾಬ್ದಾರಿ ನಮ್ಮ ಆಯಿಯದೇ ಆಗಿತ್ತು. ಮಕ್ಕಳಾದ ನಾವು ಏನಾದರೂ ಸಾಧನೆ ಮಾಡಿದರೆ ಹೆಮ್ಮೆ ಪಡುತ್ತಿದ್ದ.

ಅಪ್ಪನ ಸಿಟ್ಟು, ಸೆಡವು, ಹಸಿವು, ಬಳಲಿಕೆಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದ ಆಯಿ ಅಪ್ಪನ ನಿಜವಾದ ಶಕ್ತಿಯಾಗಿದ್ದಳು. ಆಯಿ ತೀರಿಹೋದ ನಂತರ ಅಪ್ಪ ಒಬ್ಬಂಟಿಯಾದ.”ಸಿಟ್ಟಿನ ಕೊರ್ಲಿಯಾದ ಇವರು ನಾನು ಸತ್ತರೆ ಮಕ್ಕಳ ಜೊತೆ ಹೇಗೆ ಹೊಂದಿಕೊಳ್ಳುವರೋ?’ಎಂಬ ಆತಂಕ ಅವಳಲ್ಲಿತ್ತು. ಆದರೆ ಅಂತಹ ಆತಂಕಕ್ಕೆ ಅವಕಾಶ ಕೊಡದೇ ಮಗುವಿನಂತೆ ಹದಿನೈದು ವರ್ಷ ನಮ್ಮ ಜೊತೆಯಲ್ಲಿದ್ದ . ಅಪ್ಪ ನೂರು ವರ್ಷ ಮುಗಿಸಬೇಕು ಎಂದು ನಾವೆಲ್ಲ ಅಪೇಕ್ಷೆ ಪಡುತ್ತಿದ್ದಾಗಲೇ ಸಾಕಿನ್ನು ಎಂದು ಮರಳಿಬಾರದ ಊರಿಗೆ ನಡೆದುಬಿಟ್ಟ. ಈಗ ನಮ್ಮೆಲ್ಲರ ನೆನಪಿನ ಭಿತ್ತಿಯಲ್ಲಿ ಅಪ್ಪನ ಚಿತ್ರ ನೇತಾಡುತ್ತಿದೆ.

‌ – ಶ್ರೀಧರ ಬಿ.ನಾಯಕ

Published On - 7:00 am, Sun, 19 June 22