ನಿಮ್ಮ ಪಿಎಫ್ ಖಾತೆಗೆ ಬಡ್ಡಿಹಣ ಯಾವಾಗ ಕ್ರೆಡಿಟ್ ಆಗುತ್ತೆ? ಇಲ್ಲಿದೆ ಇಪಿಎಫ್​ಒ ಅಪ್​ಡೇಟ್ಸ್

EPF Interest: ಕೇಂದ್ರ ಸರ್ಕಾರ 2022-23ರ ಹಣಕಾಸು ವರ್ಷಕ್ಕೆ ಪಿಎಫ್ ಹಣಕ್ಕೆ ಶೇ. 8.15ರಷ್ಟು ಬಡ್ಡಿ ಕೊಡಲಿದೆ. ಇದು ಯಾವಾಗ ಕ್ರೆಡಿಟ್ ಆಗುತ್ತದೆ ಎಂದು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಕೇಳಿದ್ದಾರೆ. ಇದಕ್ಕೆ ಇಪಿಎಫ್​​ಒ ಸ್ಪಂದಿಸಿದೆ.

ನಿಮ್ಮ ಪಿಎಫ್ ಖಾತೆಗೆ ಬಡ್ಡಿಹಣ ಯಾವಾಗ ಕ್ರೆಡಿಟ್ ಆಗುತ್ತೆ? ಇಲ್ಲಿದೆ ಇಪಿಎಫ್​ಒ ಅಪ್​ಡೇಟ್ಸ್
ಇಪಿಎಫ್​ಒ

Updated on: Aug 07, 2023 | 5:52 PM

ಉದ್ಯೋಗಿ ಭವಿಷ್ಯ ನಿಧಿ ಅಥವಾ ಇಪಿಎಫ್ ಖಾತೆಗೆ ಉದ್ಯೋಗಿಯ ಸಂಬಳ ಹಾಗೂ ಉದ್ಯೋಗನೀಡುಗ (Employer) ಸಂಸ್ಥೆ ಪ್ರತೀ ತಿಂಗಳು ನಿರ್ದಿಷ್ಟ ಮೊತ್ತದ ಹಣ ತುಂಬಿಸುತ್ತಾರೆ. ಈ ಹಣಕ್ಕೆ ಸರ್ಕಾರ ವರ್ಷಕ್ಕೊಮ್ಮೆ ಬಡ್ಡಿಹಣ ಸೇರಿಸುತ್ತದೆ. ಈ ಬಡ್ಡಿಹಣವನ್ನು (PF Interest) ಪ್ರತೀ ವರ್ಷವೂ ಸರ್ಕಾರವೇ ನಿಗದಿ ಮಾಡುತ್ತದೆ. 2022-23ರ ಹಣಕಾಸು ವರ್ಷಕ್ಕೆ ಇಪಿಎಫ್ ನಿಧಿ ಮೇಲೆ ಶೇ. 8.15ರಷ್ಟು ಬಡ್ಡಿ ಕೊಡಲೆಂದು ನಿರ್ಧರಿಸಲಾಗಿದೆ. ಇಪಿಎಫ್​ಒ ಸಂಸ್ಥೆಯ ಕೇಂದ್ರೀಯ ಟ್ರಸ್ಟೀ ಮಂಡಳಿ (CBT- Central Board of Trustees) ಈ ವರ್ಷಕ್ಕೆ ಶೇ. 8.15ರಷ್ಟು ಬಡ್ಡಿ ನೀಡಬೇಕೆಂದು ಮಾಡಿದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಜುಲೈ 24ರಂದು ಒಪ್ಪಿಗೆ ಕೊಟ್ಟಿದೆ. ಅದಾದ ಬಳಿಕ ಪಿಎಫ್ ಸದಸ್ಯರು ತಮ್ಮ ಖಾತೆಗೆ ಬಡ್ಡಿ ಜಮೆ ಆಗುತ್ತದೆಂದು ಕಾಯುತ್ತಿದ್ದಾರೆ. ಇಲ್ಲಿಯವರೆಗೂ ಆಗಿಲ್ಲ.

ಟ್ವಿಟ್ಟರ್​ನಲ್ಲಿ ಹಲವು ಇಪಿಎಫ್ ಸದಸ್ಯರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಇಪಿಎಫ್​ಒ ಸಂಸ್ಥೆ ಮಾಡಿದ ವಿಡಿಯೋ ಪೋಸ್ಟ್​ವೊಂದಕ್ಕೆ ಪ್ರತಿಕ್ರಿಯೆಯಾಗಿ ಕೆಲ ಸದಸ್ಯರು ಇಪಿಎಫ್ ಬಡ್ಡಿ ಹಣ ಯಾವಾಗ ಕ್ರೆಡಿಟ್ ಆಗುತ್ತೆ ಎಂದು ಕೇಳಿದ್ದಾರೆ. ಇದಕ್ಕೆ ಸ್ಪಂದಿಸಿದ ಇಪಿಎಫ್​ಒ, ಯಾವಾಗ ಬಡ್ಡಿಹಣ ಕೊಟ್ಟರೂ ಅದರಲ್ಲಿ ವ್ಯತ್ಯಯ ಆಗಲ್ಲ ಎಂದಿದೆ.

ಇದನ್ನೂ ಓದಿ: ಭರ್ಜರಿಯಾಗಿ ಬಡ್ಡಿದರ ಹೆಚ್ಚಿಸಿದ ಸೂರ್ಯೋದಯ್ ಬ್ಯಾಂಕ್; ಎಫ್​​ಡಿಗೆ ಶೇ. 9.10ರವರೆಗೂ ಬಡ್ಡಿ

‘ಈ ಪ್ರಕ್ರಿಯೆ (ಬಡ್ಡಿಹಣ ವಿಲೇವಾರಿ ಮಾಡುವ) ಚಾಲನೆಯಲ್ಲಿದೆ. ಬಹಳ ಶೀಘ್ರದಲ್ಲಿ ಇದು ಸೇರಬಹುದು. ಯಾವಾಗಲೇ ಬಡ್ಡಿ ಜಮೆಯಾದರೂ ಪೂರ್ಣಮೊತ್ತ ಕೂಡುತ್ತದೆ. ಬಡ್ಡಿಯಲ್ಲಿ ಏನೂ ಕಡಿಮೆ ಆಗುವುದಿಲ್ಲ. ದಯವಿಟ್ಟು ತಾಳ್ಮೆ ಇರಲಿ’ ಎಂದು ಇಪಿಎಫ್​ಒ ಟ್ವೀಟ್ ಮಾಡಿದೆ.

ಇತರ ಸಮಸ್ಯೆಗಳಿಗೂ ಇಪಿಎಫ್​ಒ ಸ್ಪಂದನೆ

ಹಾಗೆಯೇ, ಮತ್ತೊಬ್ಬರು, ತಮ್ಮ ಪಿಎಫ್ ಕ್ಲೇಮ್ ಅರ್ಜಿಗೆ ಆಗಸ್ಟ್ 1ರಂದು ಅನುಮೋದನೆ ಸಿಕ್ಕಿದೆ. ಆದರೆ, ಹಣ ಇನ್ನೂ ಕ್ರೆಡಿಟ್ ಆಗಿಲ್ಲ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಇಪಿಎಫ್​ಒ, ಪಿಎಫ್ ಹಣ ಬಿಡುಗಡೆ ಆಗಲು 20 ದಿನ ಬೇಕಾಗುತ್ತದೆ ಎಂದಿದೆ.

ಇನ್ನು, ಪಿಎಫ್ ಟ್ರಾನ್ಸ್​ಫರ್ ಸೇರಿದಂತೆ ಏನಾದರೂ ಸಮಸ್ಯೆಗಳು ಕಂಡುಬಂದರೆ epfigms.gov.in ಜಾಲತಾಣಕ್ಕೆ ಹೋಗಿ ದೂರನ್ನು ದಾಖಲು ಮಾಡುವಂತೆಯೂ ಇಪಿಎಫ್ ಮಾರ್ಗದರ್ಶನ ಮಾಡಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:50 pm, Mon, 7 August 23

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us