ಅಕ್ಕಿ, ಬೇಳೆ, ಮೊಸರು ಸೇರಿದಂತೆ 14 ವಸ್ತುಗಳಿಗೆ ಜಿಎಸ್​​ಟಿ ಅನ್ವಯವಾಗಲ್ಲ, ಷರತ್ತುಗಳು ಅನ್ವಯ: ನಿರ್ಮಲಾ ಸೀತಾರಾಮನ್

| Updated By: ರಶ್ಮಿ ಕಲ್ಲಕಟ್ಟ

Updated on: Jul 19, 2022 | 5:21 PM

14 ಟ್ವೀಟ್​​ಗಳ ಸರಣಿ ಟ್ವೀಟ್ ಮಾಡಿದ ನಿರ್ಮಲಾ ಸೀತಾರಾಮನ್, ಪ್ರೀ ಪ್ಯಾಕ್ಡ್ ಮತ್ತು ಮೊದಲೇ ಲೇಬಲ್ ಮಾಡಿದ ವಸ್ತುಗಳ ಮೇಲೆ ತೆರಿಗೆ ವಿಧಿಸುವ ನಿರ್ಧಾರವನ್ನು ಜಿಎಸ್​​ಟಿ ಕೌನ್ಸಿಲ್ ಒಟ್ಟಾರೆಯಾಗಿ ತೆಗೆದುಕೊಂಡಿದೆ, ಇದು ಒಬ್ಬ ಸದಸ್ಯರ ನಿರ್ಧಾರವಲ್ಲ ಎಂದು ಹೇಳಿದ್ದಾ

ಅಕ್ಕಿ, ಬೇಳೆ, ಮೊಸರು ಸೇರಿದಂತೆ 14 ವಸ್ತುಗಳಿಗೆ ಜಿಎಸ್​​ಟಿ ಅನ್ವಯವಾಗಲ್ಲ, ಷರತ್ತುಗಳು ಅನ್ವಯ: ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Follow us on

ಪ್ಯಾಕ್ ಆದ ಆಹಾರ ಪದಾರ್ಥಗಳು ಮತ್ತು ಲೇಬಲ್ ಮಾಡಿದ ವಸ್ತುಗಳ ಮೇಲೆ ಜುಲೈ 18ರಿಂದ ಜಾರಿಯಾಗಿರುವ ಶೇ 5ರ ಸರಕು ಮತ್ತು ಸೇವಾ ಸುಂಕಕ್ಕೆ (Goods and Service Tax – GST) ರಾಷ್ಟ್ರವ್ಯಾಪಿ ವರ್ತಕರು ಮತ್ತು ಗ್ರಾಹಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ವಸ್ತುಗಳನ್ನು ಬಿಡಿಬಿಡಿಯಾಗಿ ಮಾರಾಟಮಾಡಿದರೆ ಅಂಥವುಗಳಿಗೆ ಜಿಎಸ್​​ಟಿ ಅನ್ವಯವಾಗುವುದಿಲ್ಲ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಂಗಳವಾರ ಹೇಳಿದ್ದಾರೆ. ದಿನನಿತ್ಯ ಬಳಕೆಯ ವಸ್ತುಗಳಾದ ಅಕ್ಕಿ, ಹಾಲು, ಧಾನ್ಯ ಮೊದಲಾದವುಗಳು ಸದ್ಯ ಜಿಎಸ್​​ಟಿ ವ್ಯಾಪ್ತಿಗೆ ಬರುತ್ತಿವೆ. 14 ಟ್ವೀಟ್​​ಗಳ ಸರಣಿ ಟ್ವೀಟ್ ಮಾಡಿದ ನಿರ್ಮಲಾ ಸೀತಾರಾಮನ್, ಪ್ರೀ ಪ್ಯಾಕ್ಡ್ ಮತ್ತು ಮೊದಲೇ ಲೇಬಲ್ ಮಾಡಿದ ವಸ್ತುಗಳ ಮೇಲೆ ತೆರಿಗೆ ವಿಧಿಸುವ ನಿರ್ಧಾರವನ್ನು ಜಿಎಸ್​​ಟಿ ಕೌನ್ಸಿಲ್ ಒಟ್ಟಾರೆಯಾಗಿ ತೆಗೆದುಕೊಂಡಿದೆ, ಇದು ಒಬ್ಬ ಸದಸ್ಯರ ನಿರ್ಧಾರವಲ್ಲ ಎಂದು ಹೇಳಿದ್ದಾರೆ. ಜಿಎಸ್​​ಟಿ ಕೌನ್ಸಿಲ್, ಜಿಎಸ್​​ಟಿ ವಿನಾಯಿತಿ ನೀಡಿರುವ ವಸ್ತುಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ. ಈ ವಸ್ತುಗಳನ್ನು ಬಿಡಿಬಿಡಿಯಾಗಿ, ಮೊದಲೇ ಪ್ಯಾಕ್ ಮಾಡದೇ, ಮೊದಲೇ ಲೇಬಲ್ ಮಾಡಿಲ್ಲದಿದ್ದರೆ ಅವುಗಳಿಗೆ ಜಿಎಸ್​​ಟಿ ಅನ್ವಯವಾಗುವುದಿಲ್ಲ. ಇದು ಒಟ್ಟಾರೆ ಜಿಎಸ್​​ಟಿ ಕೌನ್ಸಿಲ್​​ವ ನಿರ್ಧಾರವೇ ಹೊರತು ಒಬ್ಬ ಸದಸ್ಯರ ನಿರ್ಧಾರವಲ್ಲ. ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ಬಗ್ಗೆ ಕೆಳಗಿನ 14 ಟ್ವೀಟ್ ಗಳಲ್ಲಿ ವಿವರಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಇತ್ತೀಚೆಗೆ ಜಿಎಸ್​​ಟಿ ಕೌನ್ಸಿಲ್ ನ 47 ನೇ ಸಭೆಯು ನಿರ್ದಿಷ್ಟ ಆಹಾರ ಪದಾರ್ಥಗಳಾದ ಕಾಳುಗಳು, ಧಾನ್ಯಗಳು, ಹಿಟ್ಟು ಮೊದಲಾದ ನಿರ್ದಿಷ್ಟ ವಸ್ತುಗಳ ಮೇಲೆ ಜಿಎಸ್​​ಟಿ ಹೇರಿಕೆಯನ್ನು ಮರು ಪರಿಶೀಲಿಸಬೇಕು ಎಂದು ಶಿಫಾರಸು ಮಾಡಿತ್ತು. ಈ ಬಗ್ಗೆ ಹಲವಾರು ತಪ್ಪುಕಲ್ಪನೆಗಳಿದ್ದು ಅವುಗಳನ್ನು ಪ್ರಚಾರ ಮಾಡಲಾಗಿದೆ ಎಂದ ನಿರ್ಮಲಾ, ಇಲ್ಲಿದೆ ಸತ್ಯಾಂಶ ಎಂದು ಸರಣಿ ಟ್ವೀಟ್ ಮಾಡಿದ್ದಾರೆ.


ಆಹಾರ ವಸ್ತುಗಳ ಮೇಲೆ ತೆರಿಗೆ ವಿಧಿಸುತ್ತಿರುವುದು ಇದೇ ಮೊದಲಾ? ಅಲ್ಲ. ಜಿಎಸ್​​ಟಿ ಬರುವುದಕ್ಕಿಂತ ಮುನ್ನವೇ ರಾಜ್ಯಗಳು ಆಹಾರ ಧಾನ್ಯಗಳಿಂದ ಇಂತಿಷ್ಟು ಆದಾಯವನ್ನು ಸಂಗ್ರಹಿಸುತ್ತಿತ್ತು. ಖರೀದಿ ತೆರಿಗೆ ಮೂಲಕ ಪಂಜಾಬ್ ಆಹಾರ ಧಾನ್ಯಗಳಿಂದ 2,000 ಕೋಟಿ ಸಂಗ್ರಹಿಸಿತ್ತು. ಉತ್ತರ ಪ್ರದೇಶ 700 ಕೋಟಿ ಸಂಗ್ರಹಿಸಿತ್ತು ಎಂದಿದ್ದಾರೆ ನಿರ್ಮಲಾ.

ಜಿಎಸ್​​ಟಿ ಜಾರಿಗೆ ಬಂದಾಗ ಶೇ 5ರಷ್ಟು ಜಿಎಸ್​​ಟಿ ಬ್ರಾಂಡೆಡ್ ಕಾಳು, ಧಾನ್ಯ ಮತ್ತು ಹಿಟ್ಟಿನ ಮೇಲೆ ಅನ್ವಯಿಸಲಾಯಿತು. ಆಮೇಲೆ ಇದನ್ನು ತಿದ್ದುಪಡಿ ಮಾಡಿದ್ದು, ನೋಂದಣಿ ಮಾಡಿದ ಬ್ರಾಂಡ್ ಅಡಿಯಲ್ಲಿ ಅಥವಾ ಸರಬರಾಜುದಾರರಿಂದ ಜಾರಿಗೊಳಿಸಬಹುದಾದ ಹಕ್ಕನ್ನು ಬಿಟ್ಟುಕೊಡದ ಬ್ರ್ಯಾಂಡ್​​ಗಳ ಅಡಿಯಲ್ಲಿ ಮಾರಾಟವಾಗುವ ವಸ್ತುಗಳಿಗೆ ಮಾತ್ರ ತೆರಿಗೆ ಅನ್ವಯಿಸಲಾಯಿತು. ಆದಾಗ್ಯೂ, ಇದರ ದುರ್ಬಳಕೆಯಾಗುತ್ತಿದೆ ಎಂದು ಪ್ರಖ್ಯಾತ ಉತ್ಪಾದಕರು ಮತ್ತು ಬ್ರಾಂಡ್ ಮಾಲೀಕರು ಗಮನಿಸಿದ್ದು, ಕ್ರಮೇಣ ಈ ವಸ್ತುಗಳಿಂದ ಬರುವ ಜಿಎಸ್​​ಟಿ ಆದಾಯ ಕುಸಿಯಿತು.

ಬ್ರಾಂಡೆಂಡ್ ಸರಕುಗಳ ಮೇಲೆ ತೆರಿಗೆ ಪಾವತಿ ಮಾಡುತ್ತಿರುವ ಸರಬರಾಜುದಾರರು ಮತ್ತು ಇಂಡಸ್ಟ್ರಿ ಅಸೋಸಿಯೇಷನ್ ಇದನ್ನು ಮತ್ತೆ ಕಳುಹಿಸಿತು. ಈ ರೀತಿಯ ದುರ್ಬಳಕೆ ತಡೆಯುವುದಕ್ಕಾಗಿ ಎಲ್ಲ ಪ್ಯಾಕೇಜ್ಡ್ ವಸ್ತುಗಳ ಮೇಲೆ ಜಿಎಸ್​​ಟಿ ವಿಧಿಸಬೇಕು ಎಂದು ಅವರು ಸರ್ಕಾರಕ್ಕೆ ಪತ್ರ ಬರೆದರು. ಈ ರೀತಿ ತೆರಿಗೆ ವಂಚನೆ ರಾಜ್ಯಗಳ ಗಮನಕ್ಕೂ ಬಂದಿತ್ತು. ರಾಜಸ್ಥಾನ, ಪಶ್ಚಿಮ ಬಂಗಾಳ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಹರ್ಯಾಣ ಮತ್ತು ಗುಜರಾತಿನ ಅಧಿಕಾರಿಗಳು ಇರುವ ಫಿಟ್​​ಮೆಂಟ್ ಸಮಿತಿಯು ಹಲವಾರು ಸಭೆ ನಡೆಸಿ ಈ ಸಮಸ್ಯೆಯನ್ನು ಪರಿಶೀಲಿಸಿದ್ದು, ದುರ್ಬಳಕೆ ತಡೆಯುವುದಕ್ಕಾಗಿ ವಿಧಾನಗಳನ್ನು ಬದಲಿಸಬೇಕೆಂದು ಶಿಫಾರಸು ಮಾಡಿತು.

ಪ್ಯಾಕ್ ಮಾಡಲಾದ ಮತ್ತು ಲೇಬಲ್ ಮಾಡಲಾದ ಸರಕುಗಳನ್ನ ಸರಬರಾಜು ಮಾಡಿದಾಗ ಜಿಎಸ್​​ಟಿ ಅನ್ವಯವಾಗುತ್ತದೆ.

ಈ ಕೆಳಗೆ ನೀಡಲಾದ ಪಟ್ಟಿಯಲ್ಲಿರುವ ನಿರ್ದಿಷ್ಟ ವಸ್ತುಗಳನ್ನು ಬಿಡಿಯಾಗಿ ಮಾರಿದಾಗ, ಮೊದಲೇ ಪ್ಯಾಕ್ ಮಾಡಿಲ್ಲದೆ ಅಥವಾ ಮೊದಲೇ ಲೇಬಲ್ ಮಾಡದೇ ಇದ್ದರೆ ಅದಕ್ಕೆ ಜಿಎಸ್​​ಟಿ ಅನ್ವಯವಾಗುವುದಿಲ್ಲ ಎಂದು ವಿತ್ತ ಸಚಿವೆ ಹೇಳಿದ್ದಾರೆ

ಬಿಡಿಯಾಗಿ ಮಾರಿದಾಗ ಜಿಎಸ್​​ಟಿ ಅನ್ವಯವಾಗದೇ ಇರುವ ವಸ್ತುಗಳ ಪಟ್ಟಿ

ದ್ವಿದಳ ಧಾನ್ಯ/ ಬೇಳೆ

ಗೋಧಿ

ಸಣ್ಣ ಗೋಧಿ

ಓಟ್ಸ್

ಮೈದಾ

ಅಕ್ಕಿ

ಗೋಧಿ ಹಿಟ್ಟು

ಸೂಜಿ/ ರವಾ

ಕಡಲೆ ಹಿಟ್ಟು

ಮಂಡಕ್ಕಿ

ಮೊಸರು/ ಲಸ್ಸಿ

ಜಿಎಸ್‌ಟಿ ಕೌನ್ಸಿಲ್‌ನಿಂದ ಸರ್ವಾನುಮತದ ನಿರ್ಧಾರವಾಗಿತ್ತು ಇದು

ದಿನಬಳಕೆಯ ವಸ್ತುಗಳ ಮೇಲೆ ಶೇ 5ರಷ್ಟು ಜಿಎಸ್​​ಟಿ ವಿಧಿಸುವುದು ಜಿಎಸ್‌ಟಿ ಕೌನ್ಸಿಲ್‌ನಿಂದ ಸರ್ವಾನುಮತದ ನಿರ್ಧಾರವಾಗಿತ್ತು ಎಂದು ವಿತ್ತಸಚಿವೆ ಒತ್ತಿ ಹೇಳಿದ್ದಾರೆ. ಎಲ್ಲ ರಾಜ್ಯಗಳು, ಬಿಜೆಪಿ ಸರ್ಕಾರವಿಲ್ಲದೇ ಇರುವ ರಾಜ್ಯಗಳು (ಪಂಜಾಬ್, ರಾಜಸ್ಥಾನ್, ಛತ್ತೀಸಗಡ, ತಮಿಳುನಾಡು, ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ) ಈ ನಿರ್ಧಾರಕ್ಕೆ ಸಹಮತ ಸೂಚಿಸಿದ್ದವು ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

Published On - 5:20 pm, Tue, 19 July 22