ಈರುಳ್ಳಿ ದರ ನಿಯಂತ್ರಣಕ್ಕೆ ಕೇಂದ್ರದಿಂದ ಮತ್ತಷ್ಟು ಕ್ರಮ: 25 ರೂ. ಸಬ್ಸಿಡಿ ದರದಲ್ಲಿ ಮಾರಾಟ

ಈಗಾಗಲೇ ಈರುಳ್ಳಿ ದರ ಇಳಿಕೆಗಾಗಿ ಮಟ್ರಿಕ್ ಟನ್​ಗೆ 800 ಕನಿಷ್ಠ ರಫ್ತು ದರವನ್ನು ಸರ್ಕಾರ ನಿಗದಿಪಡಿಸಿದೆ. ಇದು ಅಕ್ಟೋಬರ್​​ 29ರಿಂದಲೇ ಜಾರಿಗೆ ಬಂದಿದೆ. ಈರುಳ್ಳಿ ದಾಸ್ತಾನು 2 ಲಕ್ಷ ಟನ್‌ಗಳಷ್ಟು ಹೆಚ್ಚಿಸಿ, ಈಗಾಗಲೇ 5.06 ಲಕ್ಷ ಟನ್‌ಗಳಿಗಿಂತ ಹೆಚ್ಚು ಸಂಗ್ರಹಿಸಲಾಗಿದೆ.

ಈರುಳ್ಳಿ ದರ ನಿಯಂತ್ರಣಕ್ಕೆ ಕೇಂದ್ರದಿಂದ ಮತ್ತಷ್ಟು ಕ್ರಮ: 25 ರೂ. ಸಬ್ಸಿಡಿ ದರದಲ್ಲಿ ಮಾರಾಟ
ಸಾಂದರ್ಭಿಕ ಚಿತ್ರ

Updated on: Nov 04, 2023 | 3:17 PM

ನವದೆಹಲಿ, ನವೆಂಬರ್ 4: ಬೆಳೆ ಕೊರತೆ ಮತ್ತು ಪೂರೈಕೆ ಸಮಸ್ಯೆಯಿಂದಾಗಿ ಈರುಳ್ಳಿ ಬೆಲೆಯಲ್ಲಿ (Onion Price) ಆಗಿರುವ ಭಾರೀ ಏರಿಕೆಯಿಂದ ಗ್ರಾಹಕರನ್ನು ರಕ್ಷಿಸಲು ಸರ್ಕಾರವು ಹಲವು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ. ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಸರ್ಕಾರ, ಚಿಲ್ಲರೆ ಮಾರಾಟಕ್ಕೆ (Reatil Sale) ಅನುಕೂಲವಾಗುವಂತೆ 25 ರೂ. ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟಕ್ಕೆ ಕ್ರಮ ಕೈಗೊಂಡಿದೆ ಎಂದು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ (Ministry of Consumer Affairs, Food & Public Distribution) ತಿಳಿಸಿದೆ.

ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (NCCF), ನ್ಯಾಷನಲ್ ಅಗ್ರಿಕಲ್ಚರಲ್ ಕೋ ಆಪ್ ಮಾರ್ಕೆಟಿಂಗ್ ಫೆಡ್ ಆಫ್ ಇಂಡಿಯಾ ಲಿಮಿಟೆಡ್ (NAFED), ಕೇಂದ್ರೀಯ ಭಂಡಾರ ಹಾಗೂ ರಾಜ್ಯ ಸಹಕಾರ ಸಂಘಗಳ ಮೂಲಕ 25 ರೂ. ಸಬ್ಸಿಡಿ ದರದಲ್ಲಿ ಈರುಳ್ಳಿ ಮಾರಾಟ ಮಾಡಲಾಗುತ್ತಿದೆ. ಇ-ಮಾರಾಟ, ಇ-ನಾಮ್ ಹರಾಜು ಮತ್ತು ಬೃಹತ್ ಮಾರಾಟದ ಮೂಲಕ ವಿಲೇವಾರಿ ಮಾಡಲು ಗ್ರಾಹಕ ವ್ಯವಹಾರಗಳ ಇಲಾಖೆಯು 5.06 ಲಕ್ಷ ಮೆಟ್ರಿಕ್ ಟನ್ (LMT) ಈರುಳ್ಳಿಯನ್ನು ಸಂಗ್ರಹಿಸಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಈಗಾಗಲೇ ಈರುಳ್ಳಿ ದರ ಇಳಿಕೆಗಾಗಿ ಮಟ್ರಿಕ್ ಟನ್​ಗೆ 800 ಕನಿಷ್ಠ ರಫ್ತು ದರವನ್ನು ಸರ್ಕಾರ ನಿಗದಿಪಡಿಸಿದೆ. ಇದು ಅಕ್ಟೋಬರ್​​ 29ರಿಂದಲೇ ಜಾರಿಗೆ ಬಂದಿದೆ. ಈರುಳ್ಳಿ ದಾಸ್ತಾನು 2 ಲಕ್ಷ ಟನ್‌ಗಳಷ್ಟು ಹೆಚ್ಚಿಸಿ, ಈಗಾಗಲೇ 5.06 ಲಕ್ಷ ಟನ್‌ಗಳಿಗಿಂತ ಹೆಚ್ಚು ಸಂಗ್ರಹಿಸಲಾಗಿದೆ. ಚಿಲ್ಲರೆ ಮಾರಾಟ, ಇ-ನಾಮ್ ಹರಾಜು ಮತ್ತು ಸಗಟು ಮಾರುಕಟ್ಟೆಗಳಲ್ಲಿ ಆಗಸ್ಟ್ ಎರಡನೇ ವಾರದಿಂದ ಈರುಳ್ಳಿಯ ನಿರಂತರ ವಿಲೇವಾರಿ ಮಾಡಲಾಗುವುದು ಎಂದು ಸಚಿವಾಲಯ ಹೇಳಿದೆ.

ಇದನ್ನೂ ಓದಿ: ಭಾರತದಲ್ಲಿ ಈರುಳ್ಳಿ ಬೆಲೆ ಯಾಕೆ ಹೆಚ್ಚುತ್ತಿದೆ? ಶೇ. 40ರಷ್ಟು ರಫ್ತುಸುಂಕ ವಿಧಿಸುವ ಕ್ರಮ ಹಿಂದೆ ಏನಿದೆ ತಂತ್ರ?

ನವೆಂಬರ್ 2 ರವರೆಗಿನ ಲೆಕ್ಕಾಚಾರದ ಪ್ರಕಾರ, NAFED 21 ರಾಜ್ಯಗಳಾದ್ಯಂತ 55 ನಗರಗಳಲ್ಲಿ ಸ್ಥಾಯಿ ಮಳಿಗೆಗಳು ಮತ್ತು ಸಂಚಾರಿ ವ್ಯಾನ್‌ಗಳನ್ನು ಒಳಗೊಂಡಿರುವ 329 ರಿಟೇಲ್ ಪಾಯಿಂಟ್‌ಗಳನ್ನು ಸ್ಥಾಪಿಸಿದೆ. ಅದೇ ರೀತಿ, ಎನ್‌ಸಿಸಿಎಫ್ 20 ರಾಜ್ಯಗಳಾದ್ಯಂತ 54 ನಗರಗಳಲ್ಲಿ 457 ರಿಟೇಲ್ ಪಾಯಿಂಟ್‌ಗಳನ್ನು ಸ್ಥಾಪಿಸಿದೆ. ಕೇಂದ್ರೀಯ ಭಂಡಾರ ಕೂಡ 2023 ರ ನವೆಂಬರ್ 3 ರಿಂದ ದೆಹಲಿ-ಎನ್‌ಸಿಆರ್‌ನಾದ್ಯಂತ ತನ್ನ ಚಿಲ್ಲರೆ ಮಾರಾಟ ಮಳಿಗೆಗಳ ಮೂಲಕ ಈರುಳ್ಳಿಯ ಚಿಲ್ಲರೆ ಪೂರೈಕೆಯನ್ನು ಪ್ರಾರಂಭಿಸಿದೆ. ಸಫಲ್ ಮದರ್ ಡೈರಿ ಈ ವಾರಾಂತ್ಯದಿಂದ ಪ್ರಾರಂಭವಾಗಲಿದೆ. ತೆಲಂಗಾಣ ಮತ್ತು ದಕ್ಷಿಣದ ಇತರ ರಾಜ್ಯಗಳಲ್ಲಿ ಗ್ರಾಹಕರಿಗೆ ಈರುಳ್ಳಿ ಚಿಲ್ಲರೆ ಮಾರಾಟವನ್ನು ಹೈದರಾಬಾದ್ ಕೃಷಿ ಸಹಕಾರ ಸಂಘ (HACA) ಮಾಡಲಿದೆ ಎಂದು ಸಚಿವಾಲಯ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More
Follow Us