ಪ್ರಧಾನಿ ನರೇಂದ್ರ ಮೋದಿ
ನವದೆಹಲಿ, ಜುಲೈ 30: ತಮ್ಮ ಸರ್ಕಾರ ಒಂದೆರಡು ವಲಯಗಳಲ್ಲಿ ಮಾತ್ರವಲ್ಲ, ಎಲ್ಲಾ ವಲಯಗಳ ಬೆಳವಣಿಗೆ ಮೇಲೆ ಗಮನ ಹರಿಸಿದೆ. ಈ ಬಾರಿಯ ಬಜೆಟ್ ಕೂಡ ಇದೇ ದಿಕ್ಕಿನಲ್ಲಿ ಇತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇಲ್ಲಿ ಭಾರತೀಯ ಕೈಗಾರಿಕೆಗಳ ಮಹಾಒಕ್ಕೂಟವಾದ ಸಿಐಐನ ಸಭೆಯಲ್ಲಿ ಪಾಲ್ಗೊಂಡ ಪ್ರಧಾನಿಯವರು ಬಜೆಟ್ವೋತ್ತರ ಭಾಷಣ ಮಾಡುತ್ತಾ ದೇಶದಲ್ಲಾಗಿರುವ ಪರಿವರ್ತನೆ ಬಗ್ಗೆ ತಿಳಿಸಿದರು. ಹತ್ತು ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಈಗ ಬಹಳ ಬದಲಾಗಿದೆ. ಆಡಳಿತ ವ್ಯವಸ್ಥೆ ಮತ್ತು ಆರ್ಥಿಕತೆ ಹೆಚ್ಚು ಚುರುಕಾಗಿದೆ, ವಿಸ್ತೃತವಾಗಿದೆ ಎಂದು ಮೋದಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಭಾಷಣದ ಕೆಲ ಪ್ರಮುಖ ಅಂಶಗಳಿವು…
- 2014ರ ಬಳಿಕ ಭಾರತ ಆರ್ಥಿಕವಾಗಿ ಸಾಕಷ್ಟು ಬೆಳದಿದೆ. ಈಗ ಐದನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿದೆ. ನನ್ನ ಮೂರನೇ ಅವಧಿಯಲ್ಲಿ ಭಾರತ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಲಿದೆ.
- ಭಾರತ ಈಗ ಆರ್ಥಿಕತೆಯ ಪ್ರತಿಯೊಂದು ವಲಯದ ಮೇಲೂ ಗಮನ ಕೇಂದ್ರೀಕರಿಸಲಾಗಿದೆ.
- 2014ರಲ್ಲಿ ಇದ್ದುದ್ದಕ್ಕಿಂತ ಈಗ ಬಂಡವಾಳ ವೆಚ್ಚ (ಕ್ಯಾಪೆಕ್ಸ್) ನಾಲ್ಕು ಪಟ್ಟು ಬೆಳೆದಿದೆ.
- ರೈಲ್ವೆ ಬಜೆಟ್ 8 ಪಟ್ಟು ಹೆಚ್ಚು ಬೆಳೆದಿದೆ. ಕೃಷಿ ಬಜೆಟ್ 4 ಪಟ್ಟು ಹೆಚ್ಚಾಗಿದೆ. ರಕ್ಷಣಾ ಬಜೆಟ್ 2 ಪಟ್ಟು ಹೆಚ್ಚಿದೆ.
- ತೆರಿಗೆಯಲ್ಲೂ ಸಾಕಷ್ಟು ಕಡಿತಗೊಳಿಸಲಾಗಿದೆ. 2014ರಲ್ಲಿ 50 ಲಕ್ಷ ಆದಾಯ ಪಡೆಯುವ ಎಂಎಸ್ಎಂಇ ಶೇ. 30ರಷ್ಟು ತೆರಿಗೆ ಕೊಡಬೇಕಿತ್ತು. ಈಗ 22 ಪರ್ಸೆಂಟ್ಗೆ ಇಳಿಸಲಾಗಿದೆ.
- 400 ಕೋಟಿ ಆದಾಯ ಇರುವ ಕಾರ್ಪೊರೇಟ್ ಕಂಪನಿಗಳು ಶೇ. 30ರಷ್ಟು ತೆರಿಗೆ ಕಟ್ಟಬೇಕಿತ್ತು. ಈಗ ಕಾರ್ಪೊರೇಟ್ ತೆರಿಗೆಯನ್ನು ಶೇ. 25ಕ್ಕೆ ಇಳಿಸಲಾಗಿದೆ.
- ಹಿಂದಿನ ಸರ್ಕಾರ ಇನ್ಫ್ರಾಸ್ಟ್ರಕ್ಚರ್ಗೆಂದು ಇಟ್ಟ ಹಣವನ್ನು ಪೂರ್ಣವಾಗಿ ಬಳಕೆ ಮಾಡುತ್ತಿರಲಿಲ್ಲ. ಹತ್ತು ವರ್ಷದಲ್ಲಿ ಆ ಪರಿಸ್ಥಿತಿಯನ್ನು ಬದಲಿಸಿದ್ದೇವೆ. ನಮ್ಮ ಸರ್ಕಾರ ಇನ್ಫ್ರಾಸ್ಟ್ರಕ್ಚರ್ ಬೆಳವಣಿಗೆಯ ವೇಗ ಮತ್ತು ಪ್ರಮಾಣವನ್ನು ಹೆಚ್ಚಿಸಿರುವುದನ್ನು ನೀವು ಗಮನಿಸಿರಬಹುದು.
- ಇಂಟರ್ನ್ಶಿಪ್ ಸ್ಕೀಮ್ ತಂದಿದ್ದೇವೆ. ಯುವಕರಿಗೆ ದೊಡ್ಡ ಮಟ್ಟದಲ್ಲಿ ಉತ್ತೇಜನ ಕೊಡಲಾಗುತ್ತದೆ.
- ಸರ್ಕಾರದ ಗುರಿಯಲ್ಲಿ ಯಾವ ಬದಲಾವಣೆ ಇಲ್ಲ. ನಮಗೆ ದೇಶ ಮುಖ್ಯ, ಅದು ನಮಗಿರುವ ಬದ್ಧತೆ.
- ಐದು ಬಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವುದು, ಆತ್ಮ ನಿರ್ಭರ ಭಾರತ್ ನಿರ್ಮಿಸುವುದು, ಇವೆಲ್ಲಕ್ಕೂ ನಾವು ಬದ್ಧತೆಯಿಂದ ಮುಂದುವರಿಯುತ್ತಿದ್ದೇವೆ.
- ನಾವು ರೂಪಿಸಿದ ಯೋಜನೆಗಳನ್ನು ನಿಲ್ಲಿಸದೆ ನಿರಂತವಾಗಿ ವಿಸ್ತರಣೆ ಮಾಡುತ್ತಿದ್ದೇವೆ.
ಇದನ್ನೂ ಓದಿ: ಆಧಾರ್, ಪ್ಯಾನ್ ಲಿಂಕ್ ಮಾಡದಿರುವವರಿಗೆ ದುಬಾರಿ ತೆರಿಗೆ; ಬರಲಿದೆ ಟ್ಯಾಕ್ಸ್ ಡಿಮ್ಯಾಂಡ್ ನೋಟೀಸ್
- ನಾವು ಪ್ರತೀ ಬಾರಿಯೂ ಮೈಲಿಗಲ್ಲುಗಳನ್ನು ದಾಟುತ್ತಿದ್ದೇವೆ.
- 10 ವರ್ಷದಲ್ಲಿ ಮ್ಯಾನುಫ್ಯಾಕ್ಚರಿಂಗ್ ವಲಯ ಹೇಗೆ ಬದಲಾಯಿತು ನೋಡಿದ್ದೀರಿ. 14 ಸೆಕ್ಟರ್ನಲ್ಲಿ ಪಿಎಲ್ಐ ಯೋಜನೆ ತಂದಿದ್ದೇವೆ. ತಯಾರಕ ವಲಯಕ್ಕೆ ಪುಷ್ಟಿ ಕೊಡಲಾಗಿದೆ.
- ಹೊಸ ನಗರಗಳಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ. ಈ ನೂರು ನಗರಗಳು ವಿಕಸಿತ ಭಾರತಕ್ಕೆ ಕೊಡುಗೆ ನೀಡಲಿವೆ.
- ನಮ್ಮ ದೊಡ್ಡ ಗಮನವು ಎಂಎಸ್ಎಂಇ ಮೇಲಿದೆ. ಕೋಟಿ ಕೋಟಿ ಜನರಿಗೆ ಉದ್ಯೋಗ ಸಿಗುತ್ತದೆ. ಎಂಎಸ್ಎಂಇಗಳಿಗೆ ವರ್ಕಿಂಗ್ ಕ್ಯಾಪಿಟಲ್ ಸಿಗಲು, ಅದರ ಮಾರುಕಟ್ಟೆ ಅಸ್ತಿತ್ವ ಗಟ್ಟಿಗೊಳ್ಳಲು 2014ರಿಂದಲೂ ಕ್ರಮ ತೆಗೆದುಕೊಳ್ಳುತ್ತಾ ಬಂದಿದ್ದೇವೆ. ಈ ಬಜೆಟ್ನಲ್ಲೂ ಕ್ರೆಡಿಟ್ ಗ್ಯಾರಂಟಿ ಸ್ಕೀಮ್ ತಂದಿದ್ದೇವೆ.
- ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ಪಬ್ಲಿಕ್ ಇನ್ಫ್ರಾಸ್ಟ್ರಕ್ಚರ್ ತಂದಿದ್ದೇವೆ. ಕೃಷಿಕರಿಗೆ ಭೂ ಆಧಾರ್ ತಂದಿದ್ದೇವೆ.
- ಕ್ರಿಟಿಕಲ್ ಮಿನರಲ್ ಪಡೆಯಲು ಹೊಸ ಕಾನೂನು ಮಾಡಿದ್ದೇವೆ.
- ಭಾರತ ಬಲಿಷ್ಠ ಆರ್ಥಿಕತೆಯಾಗುತ್ತಿದೆ. ಹೊಸ ಹೊಸ ವಲಯಗಳನ್ನು ಗುರುತಿಸಲಾಗುತ್ತಿದೆ.
- ಟೆಕ್ನಾಲಜಿಯ ಪಾತ್ರ ಬಹಳ ಮಹತ್ವದ್ದಾಗಿದೆ. ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಅನ್ನು ಉತ್ತೇಜಿಸಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ