ಆರ್​ಬಿಐ ಮಾನಿಟರಿ ಪಾಲಿಸಿ ಕಮಿಟಿ ಸಭೆ ಇಂದು ಅಂತ್ಯ; ಬೆಳಗ್ಗೆ 10 ಗಂಟೆಗೆ ಆರ್​ಬಿಐ ಗವರ್ನರ್ ಸುದ್ದಿಗೋಷ್ಠಿ

RBI MPC Meet: ಅಕ್ಟೋಬರ್ 4ರಂದು ಆರಂಭವಾದ ಆರ್​ಬಿಐ ಎಂಪಿಸಿ ಸಭೆ ಇಂದು ಮುಕ್ತಾಯಗೊಳ್ಳುತ್ತಿದ್ದು, ಆರ್​ಬಿಐ ಗವರ್ನರ್ ಶಕ್ತಿಕಾಂತದಾಸ್ ಸುದ್ದಿಗೋಷ್ಠಿ ಉದ್ದೇಶಿಸಿ ಬೆಳಗ್ಗೆ 10 ಗಂಟೆಗೆ ಮಾತನಾಡಲಿದ್ದಾರೆ. ಸಭೆಯ ವಿಚಾರಗಳನ್ನು ಪ್ರಕಟಿಸಲಿದ್ದಾರೆ. ಆರ್​ಬಿಐ ಎಂಪಿಸಿ ಸಭೆ ಎಂದರೆ ಸಾಮಾನ್ಯವಾಗಿ ರೆಪೋ ದರದ ಬಗ್ಗೆ ಎಲ್ಲರ ಗಮನ ನೆಟ್ಟಿರುತ್ತದೆ. ಈ ಬಾರಿ ಹಣದುಬ್ಬರ ಪರಿಸ್ಥಿತಿ ಬಗ್ಗೆ ಅವಲೋಕನವೇನು ಎಂಬುದರ ಮೇಲೆ ಆಸಕ್ತಿ ಮೂಡಿದೆ.

ಆರ್​ಬಿಐ ಮಾನಿಟರಿ ಪಾಲಿಸಿ ಕಮಿಟಿ ಸಭೆ ಇಂದು ಅಂತ್ಯ; ಬೆಳಗ್ಗೆ 10 ಗಂಟೆಗೆ ಆರ್​ಬಿಐ ಗವರ್ನರ್ ಸುದ್ದಿಗೋಷ್ಠಿ
ಶಕ್ತಿಕಾಂತ ದಾಸ್

Updated on: Oct 06, 2023 | 4:37 AM

ನವದೆಹಲಿ, ಅಕ್ಟೋಬರ್ 6: ಭಾರತೀಯ ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿಯ (RBI MPC Meeting) ದ್ವೈಮಾಸಿಕ ಸಭೆಯ ನಿರ್ಧಾರಗಳು ಇಂದು ಪ್ರಕಟವಾಗಲಿವೆ. ಮೊನ್ನೆ (ಅಕ್ಟೋಬರ್ 4ರಂದು) ಆರಂಭವಾದ ಕಮಿಟಿ ಸಭೆ ಇಂದು ಮುಕ್ತಾಯಗೊಳ್ಳುತ್ತದೆ. ಸಭೆ ಬಳಿಕ ಬೆಳಗ್ಗೆ 10 ಗಂಟೆಗೆ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಲಿದ್ದಾರೆ. ಸಭೆಯಲ್ಲಿ ಚರ್ಚಿಸಲಾದ ವಿಚಾರಗಳು ಹಾಗು ನಿರ್ಧಾರಗಳನ್ನು ಬಹಿರಂಗಪಡಿಸಲಾಗುತ್ತದೆ. ಬಡ್ಡಿದರದಿಂದ ಹಿಡಿದು ಭಾರತದ ಆರ್ಥಿಕ ಮತ್ತು ಹಣಕಾಸು ಪರಿಸ್ಥಿತಿ ಬಗ್ಗೆ ಆರ್​ಬಿಐ ನೀಡುವ ಹೇಳಿಕೆ ಮತ್ತು ನಿರ್ಧಾರಗಳ ಮೇಲೆ ಎಲ್ಲರ ಚಿತ್ತ ನೆಟ್ಟಿರುತ್ತದೆ.

ಆರ್​ಬಿಐ ಎಂಪಿಸಿ ಸಭೆಯಲ್ಲಿ ಈ ಬಾರಿ ಯಾವ ವಿಚಾರ ಪ್ರಮುಖವಾದುವು?

  • ರೆಪೋ ದರ (ಬಡ್ಡಿದರ)
  • ಹಣದುಬ್ಬರ ಅಂದಾಜು
  • ಜಿಡಿಪಿ ಅಂದಾಜು
  • ಹಣಕಾಸು ಹರಿವು

ಇದನ್ನೂ ಓದಿ: ಜೆಪಿ ಮಾರ್ಗನ್ ಬಾಂಡ್ ಮಾರುಕಟ್ಟೆಗೆ ಭಾರತದ ಸೇರ್ಪಡೆಯಿಂದ 23 ಬಿಲಿಯನ್ ಡಾಲರ್ ಬಂಡವಾಳ: ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ

ರೆಪೋ ದರ ಎಂಬುದು ವಾಣಿಜ್ಯ ಬ್ಯಾಂಕುಗಳಿಗೆ ನೀಡುವ ಸಾಲಕ್ಕೆ ಆರ್​ಬಿಐ ವಿಧಿಸುವ ಬಡ್ಡಿದರವಾಗಿದೆ. ಕಳೆದ ಒಂದು ವರ್ಷದಿಂದಲೂ ರೆಪೋ ದರ ಶೇ. 6.5ರಷ್ಟಿದೆ. ಈ ಬಾರಿಯೂ ಅದರಲ್ಲಿ ಬದಲಾವಣೆ ಆಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಆರ್​ಬಿಐ ಎಂಪಿಸಿ ಸಭೆ ಎಂದರೆ ಸಾಮಾನ್ಯವಾಗಿ ರೆಪೋ ದರದ ಬಗ್ಗೆ ಎಲ್ಲರ ಗಮನ ನೆಟ್ಟಿರುತ್ತದೆ. ಈ ಬಾರಿ ಹಣದುಬ್ಬರ ಪರಿಸ್ಥಿತಿ ಬಗ್ಗೆ ಅವಲೋಕನವೇನು ಎಂಬುದರ ಮೇಲೆ ಆಸಕ್ತಿ ಮೂಡಿದೆ. ಹಣದುಬ್ಬರ ನಿಯಂತ್ರಣಕ್ಕೆ ಆರ್​ಬಿಐ ಬೇರೆ ತಂತ್ರ ಅನುಸರಿಸಬಹುದು. ಅದರಲ್ಲಿ ಹಣಕಾಸು ಹರಿವು ಹಿಂಪಡೆಯುವುದು (Accommodative stance) ಒಂದು ಕ್ರಮ. ಹಣಕಾಸು ಹರಿವನ್ನು ಹಿಂಪಡೆಯಲು ಕಳೆದ ಬಾರಿ ನಿರ್ಧರಿಸಲಾಗಿತ್ತು. ಈ ಬಾರಿಯೂ ಅದೇ ನಿಲುವು ಮುಂದುವರಿಯಬಹುದು.

ಇದನ್ನೂ ಓದಿ: ಮೂರನೇ ತ್ರೈಮಾಸಿಕ ಅವಧಿಗೆ ಪಿಎಫ್ ಬಡ್ಡಿದರದಲ್ಲಿ ಇಲ್ಲ ಬದಲಾವಣೆ; ಹತ್ತು ವಿವಿಧ ಪಿಎಫ್ ನಿಧಿಗಳಿಗೆ ಸರ್ಕಾರ ಎಷ್ಟು ಬಡ್ಡಿ ನೀಡುತ್ತೆ?

ಸದ್ಯ, ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ. 6.83ರಷ್ಟಿದೆ. ಇದನ್ನು ಶೇ. 4ಕ್ಕೆ ಹಿಡಿದು ನಿಲ್ಲಿಸುವುದು ಆರ್​ಬಿಐನ ಗುರಿಯಾಗಿದೆ. ಕಡೇಪಕ್ಷ ಹಣದುಬ್ಬರ ತಾಳಿಕೆ ಮಿತಿಯಾದ ಶೇ. 6ರೊಳಗೆ ಅದನ್ನು ತರುವ ಸಂಕಲ್ಪ ಇದೆ. ಟೊಮೆಟೋ ಮತ್ತಿತರ ತರಕಾರಿಗಳ ಬೆಲೆ ಏರಿಕೆಯಿಂದಾಗಿ ಜುಲೈನಲ್ಲಿ ಹಣದುಬ್ಬರ ಶೇ. 7.44ಕ್ಕೆ ಜಿಗಿದಿತ್ತು. ಆಗಸ್ಟ್​​ನಲ್ಲಿ ತುಸು ಕಡಿಮೆ ಆಗಿದೆ. ಸೆಪ್ಟೆಂಬರ್​ನಲ್ಲಿ ಇದು ಇನ್ನೂ ಸ್ವಲ್ಪ ಕಡಿಮೆ ಆಗಬಹುದಾದರೂ ತಾಳಿಕೆ ಮಿತಿಯಾದ ಶೇ. 6ಕ್ಕಿಂತಲೂ ಹೆಚ್ಚೇ ಇರಬಹುದು ಎಂದು ನಿರೀಕ್ಷಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us