ಎಟಿಎಂ ಎದುರು ಲಾಂಗ್ ಹಿಡಿದು ಓಡಾಡುತ್ತಿದ್ದವನ ಮನೆಯಲ್ಲಿತ್ತು 2556 ಬ್ಯಾಂಕ್​ ಅಕೌಂಟ್​ಗಳ​ ವಿವರ

ಪ್ರತಿ ಅಕೌಂಟ್​ಗೆ ₹ 10ರಿಂದ ₹ 30 ಸಾವಿರ ಹಣ ಜಮೆ ಮಾಡಿದ ವಿವರ ಪತ್ತೆಯಾಗಿದೆ. ಪೊಲೀಸರು ಈವರೆಗೆ 185 ಅಕೌಂಟ್​ಗಳ ವಿವರ ಸಂಗ್ರಹಿಸಿದ್ದಾರೆ.

ಎಟಿಎಂ ಎದುರು ಲಾಂಗ್ ಹಿಡಿದು ಓಡಾಡುತ್ತಿದ್ದವನ ಮನೆಯಲ್ಲಿತ್ತು 2556 ಬ್ಯಾಂಕ್​ ಅಕೌಂಟ್​ಗಳ​ ವಿವರ
ಸಾಂದರ್ಭಿಕ ಚಿತ್ರ
Edited By:

Updated on: Dec 02, 2021 | 10:22 PM

ಬೆಂಗಳೂರು: ನಗರದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಬ್ಲ್ಯಾಕ್ ಅಂಡ್ ವೈಟ್ ದಂಧೆಗೆ ಕಡಿವಾಣ ಹಾಕಲು ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ. ಎಟಿಎಂ ಕೇಂದ್ರದ ಬಳಿ ವ್ಯಕ್ತಿಯೊಬ್ಬ ಮಾರಕಾಸ್ತ್ರ ಹಿಡಿದು ಓಡಾಟ ನಡೆಸಿದ್ದ ಮಾಹಿತಿ ಆಧರಿಸಿ ಎಟಿಎಂ ಕೇಂದ್ರದ ಬಳಿ ತೆರಳಿದ್ದ ಪೊಲೀಸರು ವ್ಯಕ್ತಿಯ ಬಳಿಯಿದ್ದ ₹ 1 ಲಕ್ಷ ನಗದು ಮತ್ತು ಲಾಂಗ್ ವಶಪಡಿಸಿಕೊಂಡರು. ಆರೋಪಿಯ ಮನೆ ಪರಿಶೀಲನೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗಗೊಂಡಿತ್ತು. ಆತ ಎಟಿಎಂ ಕೇಂದ್ರಗಳಲ್ಲಿ ಹಲವರ ಖಾತೆಗಳಿಗೆ ಹಣ ಜಮಾ​ ಮಾಡಿದ್ದ ದಾಖಲೆಗಳು ಪತ್ತೆಯಾದವು.

ಆತನ ಮನೆಯಿಂದ ₹ 21 ಲಕ್ಷ ನಗದು ಮತ್ತು ಸಾವಿರಾರು ರಸೀದಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆತನ ವಿರುದ್ಧ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ತನಿಖೆ ವೇಳೆ ಈತನ ಮನೆಯಲ್ಲಿ ವಿವಿಧ ಬ್ಯಾಂಕ್​ಗಳ 2,656 ಅಕೌಂಟ್​ಗಳ ವಿವರ ಪತ್ತೆಯಾಗಿದೆ. ಪ್ರತಿ ಅಕೌಂಟ್​ಗೆ ₹ 10ರಿಂದ ₹ 30 ಸಾವಿರ ಹಣ ಜಮೆ ಮಾಡಿದ ವಿವರ ಪತ್ತೆಯಾಗಿದೆ. ಪೊಲೀಸರು ಈವರೆಗೆ 185 ಅಕೌಂಟ್​ಗಳ ವಿವರ ಸಂಗ್ರಹಿಸಿದ್ದಾರೆ. ಆರೋಪಿಗಳು ಒಟ್ಟು ₹ 31 ಕೋಟಿ ಜಮಾ​ ಮಾಡಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಪ್ರಕರಣ ಸಂಬಂಧ ಫೈಜಲ್, ಫಜಲ್, ಮೊಹಮ್ಮದ್ ಸಾಲಿ, ಅಬ್ದುಲ್ ಮುನಾಫ್​ ಎನ್ನುವವರನ್ನು ಬಂಧಿಸಲಾಗಿದೆ. ಬ್ಲ್ಯಾಕ್ ಅಂಡ್ ವೈಟ್​ ಮನಿ ದಂಧೆ ನಡೆದಿರುವ ಶಂಕೆ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆಗೆ ಪುಟ್ಟೇನಹಳ್ಳಿ ಪೊಲೀಸರು ಪತ್ರ ಬರೆದಿದ್ದಾರೆ.

ವಿಶ್ವನಾಥ್ ಹತ್ಯೆಗೆ ಸಂಚು ಪ್ರಕರಣ: ಗೋಪಾಲಕೃಷ್ಣ ಮನೆಯಲ್ಲಿ ಮಹಜರ್
ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗೋಪಾಲಕೃಷ್ಣ ಮನೆಗೆ ಕುಳ್ಳದೇವರಾಜ್​ನನ್ನು ಕರೆತಂದ ಪೊಲೀಸರು ಮಹಜರ್ ನಡೆಸಿದರು. ಡಿವೈಎಸ್​​ಪಿ ನಾಗರಾಜ್, ಇನ್​ಸ್ಪೆಕ್ಟರ್ ನವೀನ್, ಸತೀಶ್, ಶಬರೀಶ್, ಮಹಿಳಾ ಸಬ್​ಇನ್ಸ್​​ಪೆಕ್ಟರ್ ಭವಿತಾ ತಂಡದಲ್ಲಿದ್ದರು. ಹತ್ಯೆಗೆ ಮೊದಲು ಪ್ಲ್ಯಾನ್​ ಆರಂಭವಾಗಿದ್ದೇ ಈ ಮನೆಯಲ್ಲಿ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮನೆಯಲ್ಲಿ ಮಹಜರ್ ನಡೆಸಿದರು.

ಅಕ್ರಮ ಮದ್ಯ ಸಾಗಣೆ: ಬಂಧನ
ಕಾರವಾರ: ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲಾ ಕಾರವಾರ ಬಳಿಯ ಮಾಜಾಳಿ ಗ್ರಾಮದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನಿಂದ ₹ 4.15 ಲಕ್ಷ ಮೌಲ್ಯದ ವಿವಿಧ ವಸ್ತುಗಳು ಹಾಗೂ ಗೋವಾದಿಂದ ತಂದಿದ್ದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹಾವು ಕಡಿದು ಯುವತಿ ಸಾವು
ಹತ್ತಿ ಕಾಯಲು ಜಮೀನಿಗೆ ಹೋಗಿದ್ದ ಯುವತಿಯೊಬ್ಬಳು ಹಾವು ಕಡಿದು ಮೃತಪಟ್ಟಿರುವ ಘಟನೆ ಯಾದಗಿರಿ ‌ಜಿಲ್ಲೆ ಶಹಾಪುರ ತಾಲೂಕಿನ ಹುಂಡೆಕಲ್ ಗ್ರಾಮದಲ್ಲಿ ನಡೆದಿದೆ. ಮೃತಳನ್ನು ಶೋಭಾ (20) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಮೈಸೂರು: ಕುಡಿದ ಅಮಲಿನಲ್ಲಿ ಕೊಲೆ; ಗರ್ಭಿಣಿ ಪತ್ನಿ ಸೇರಿ ಆರು ಜನರ ಮೇಲೆ ಮಾರಣಾಂತಿಕ ಹಲ್ಲೆ
ಇದನ್ನೂ ಓದಿ: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ‘ಕೈ’ ಮುಖಂಡ ಸಾವು, ಇತ್ತೀಚೆಗೆ ಎಸಿಬಿ ದಾಳಿ ಎದುರಿಸಿದ್ದ ಸಕಾಲ ಅಧಿಕಾರಿ ಪತ್ನಿ ಕೊನೆಯುಸಿರು

Follow Us