ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್ ಹ್ಯಾಕ್​: ಕರ್ನಾಟಕದ ಅತಿದೊಡ್ಡ ಸೈಬರ್ ವಂಚಕ ಬಂಧನ

ಕರ್ನಾಟಕದ ಅತಿದೊಡ್ಡ ಸೈಬರ್ ವಂಚಕನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್​​ ಅನ್ನು ಹ್ಯಾಕ್​ ಮಾಡಿ ಆರೋಪಿ ದಿಲೀಪ್ ರಾಜೇಗೌಡ ಕೋಟಿ ಕೋಟಿ ಹಣ ದೋಚುತ್ತಿದ್ದದ್ದು ಹೇಗೆ? ಇಲ್ಲಿದೆ ಸ್ಟೋರಿ

ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್ ಹ್ಯಾಕ್​: ಕರ್ನಾಟಕದ ಅತಿದೊಡ್ಡ ಸೈಬರ್ ವಂಚಕ ಬಂಧನ
ಪ್ರಾತಿನಿಧಿಕ ಚಿತ್ರ
ವಿವೇಕ ಬಿರಾದಾರ

Updated on: May 16, 2023 | 9:25 AM

ಬೆಂಗಳೂರು: ಕರ್ನಾಟಕದ ಅತಿದೊಡ್ಡ ಸೈಬರ್ ವಂಚಕನನ್ನು (Cyber Crime) ಸಿಐಡಿ (CID) ಪೊಲೀಸರು ಬಂಧಿಸಿದ್ದಾರೆ. ದಿಲೀಪ್ ರಾಜೇಗೌಡ ಬಂಧಿತ ಆರೋಪಿ. ಇನ್ನು ಆರೋಪಿಯನ್ನು ಸೆರೆ ಹಿಡಿಯಲು ಸಿಐಡಿ ಎಸ್​ಪಿ ಎಂ.ಡಿ ಶರತ್ ನೇತೃತ್ವದಲ್ಲಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿತ್ತು. ಆದಾಯ ತೆರಿಗೆ ಇಲಾಖೆಯ (Income Tax Department) ವೆಬ್​ಸೈಟ್​ನಲ್ಲಿನ ಲೋಪವನ್ನು ತಿಳಿದುಕೊಂಡ ಆರೋಪಿ, ಆ ಲೋಪದ ಮೂಲಕ ತೆರಿಗೆ ಕಟ್ಟಿದ್ದವರಿಗೆ ಸಲ್ಲಬೇಕಿದ್ದ ರೀ ಫಂಡ್ಸ್​ ಹಣವನ್ನು​ ತನ್ನ ಖಾತೆಗೆ ಜಾಮಾ ಮಾಡಿಕೊಳ್ಳುತ್ತಿದ್ದನು. ಹೀಗೆ ಆದಾಯ ತೆರಿಗೆ ಇಲಾಖೆಗೆ ಬರೋಬ್ಬರಿ 1,41,84,360 ರೂ. ಹಣವನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ.

ಆರೋಪಿ ಹಣ ದೋಚುತ್ತಿದ್ದದ್ದು ಹೇಗೆ?

ಆದಾಯ ತೆರಿಗೆ ಇಲಾಖೆಗೆ ತೆರಿಗೆ ಕಟ್ಟಿದವರ, ರಿಫಂಡ್ ಖಾತೆಗಳನ್ನು ಹ್ಯಾಕ್​ ಮಾಡುತ್ತಿದ್ದನು. ನಂತರ ತೆರಿಗೆದಾರರ ಹೆಸರಲ್ಲಿ ಬೇರೆ ಬ್ಯಾಂಕ್ ಖಾತೆ ತೆರೆದು ನಕಲಿ ದಾಖಲೆಗಳ ಸಹಿತ, ಕೆವೈಸಿ ಕೂಡ ಸೃಷ್ಟಿ ಮಾಡುತ್ತಿದ್ದನು. ನಂತರ ಆದಾಯ ತೆರಿಗೆ ಇಲಾಖೆ ರಿಫಂಡ್ ಮಾಡಿದ ಹಣವನ್ನು ಆರೋಪಿ ತನ್ನ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದನು. ಹೀಗೆ ಕೋಟಿ ಕೋಟಿ ಹಣ ವಂಚನೆ ಮಾಡಿರುವುದು ವಿಚಾರಣೆ ವೇಳೆ ಬಹಿರಂಗವಾಗಿದೆ.

ವಿಚಾರಣೆ ವೇಳೆ ಮತ್ತಷ್ಟು ಸೈಬರ್ ವಂಚನೆ ಮಾಡಿರುವುದು ಬೆಳಕಿಗೆ…

ಅರೋಪಿ ಈ ಹಿಂದೆ ಇದೇ ರೀತಿ ಮಾಡಿ 3 ಕೋಟಿ 60 ಲಕ್ಷ ರೂ. ಹಣವನ್ನು ತನ್ನ ಖಾತೆಗೆ ಜಮಾ ಮಾಡಿಕೊಂಡಿದ್ದನು. ಹಾಗೇ ಬಾಜಾಜ್ ಕಾರ್ ಲೋನ್ ಕಂಪನಿಗೆ ನಕಲಿ ದಾಖಲೆ ನೀಡಿ ಸಾಲ ಪಡೆದು ವಂಚಿಸಿದ್ದಾನೆ.

ಅಲ್ಲದೇ ಈತ ಸರ್ಕಾರದ ವೈಬ್​​ ಪೋರ್ಟಲ್​​​ಗೂ ಲಗ್ಗೆ ಇಟ್ಟಿದ್ದು, ಕರ್ನಾಟಕ ಸರ್ಕಾರದ ಕಾವೇರಿ ಆನ್ಲೈನ್ ಪೋರ್ಟಲ್​ನಲ್ಲಿ (ಆಸ್ತಿಗಳನ್ನು ರಿಜಿಸ್ಟರ್ ಮಾಡಲು ಬಳಸುವ ವೆಬ್ ಪೋರ್ಟಲ್) ಅನ್ನು ಕೂಡ ಹ್ಯಾಕ್​ ಮಾಡಲು ಯತ್ನಿಸಿದ್ದಾನೆ. ಸದ್ಯ ಅರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಅಷ್ಟಕ್ಕೂ ಯಾರು ಈ ದಿಲೀಪ್ ರಾಜೆಗೌಡ

ಹಾಸನದ ಹಿರಿಸೇವೆಯಲ್ಲಿ ಹುಟ್ಟಿ ಬೆಳೆದಿದ್ದ ದಿಲೀಪ್ ರಾಜೆಗೌಡ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದನು. ಬಳಿಕ ಧಾರವಾಡದಲ್ಲಿ ನಲೆಸಿದ್ದ ಆರೋಪಿ, ಇಲ್ಲಿಂದಲೇ ಕೃತ್ಯ ಎಸಗುತಿದ್ದನು.

ಈ ಹಿಂದೆ ದಾಖಲಾಗಿದ್ದ ಶ್ರೀಕೃಷ್ಣ ಅಲಿಯಾಸ್ ಹ್ಯಾಕರ್ ಶ್ರೀಕಿ ಕೂಡ ಕಾವೇರಿ ವೆಬ್ ಪೋರ್ಟಲ್​ನಿಂದ ಕೋಟ್ಯಾಂತರ ರೂ. ಸರ್ಕಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಅರೋಪ ಕೇಳಿ ಬಂದಿತ್ತು.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:48 am, Tue, 16 May 23

Vivek Biradar

ಮೂಲತಃ ಧಾರವಾಡ ಜಿಲ್ಲೆಯ ಹುಬ್ಬಳ್ಳಿಯವ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ. ಕಳೆದ ಮೂರು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಚಲಿತ ವಿದ್ಯಮಾನ, ರಾಜಕೀಯ, ಅಪರಾಧ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದೇನೆ.

Follow Us