ಬೆಂಗಳೂರು: ಗ್ರಾಹಕನ ಸೋಗಿನಲ್ಲಿ ಬಂದು 75 ಲಕ್ಷ ಮೌಲ್ಯದ ಡೈಮಂಡ್ ಉಂಗುರ ಕದ್ದ ಖದೀಮ

ಎಂ.ಜಿ. ರಸ್ತೆಯ ಜಾಯ್ ಅಲುಕ್ಕಾಸ್ ಮಳಿಗೆಗೆ ಬಂದ ಖದೀಮ 75 ಲಕ್ಷ ಮೌಲ್ಯದ ಡೈಮಂಡ್ ಉಂಗುರ ಕಳ್ಳತನ ಮಾಡಿದ್ದಾನೆ. ಗ್ರಾಹಕನ ಸೋಗಿನಲ್ಲಿ ಬಂದು ಡೈಮಂಡ್ ಉಂಗುರ ಕದ್ದ ಕಳ್ಳನ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಬ್ಬನ್ ಪಾರ್ಕ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಡೈಮಂಡ್ ಕಳ್ಳನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಬೆಂಗಳೂರು, ಫೆ.24: ಗ್ರಾಹಕನ ಸೋಗಿನಲ್ಲಿ ಬಂದು ದುಬಾರಿ ಡೈಮಂಡ್ ಉಂಗುರ ಕಳ್ಳತನ (Diamond Ring Theft) ಮಾಡಿದ ಘಟನೆ ಎಂ.ಜಿ. ರಸ್ತೆಯ ಜಾಯ್ ಅಲುಕ್ಕಾಸ್ (Joyalukkas) ಮಳಿಗೆಯಲ್ಲಿ ನಡೆದಿದೆ. ಖದೀಮ ಡೂಪ್ಲಿಕೇಟ್ ಉಂಗುರ ಇಟ್ಟು ಒರಿಜಿನಲ್ ಡೈಮಂಡ್ ಉಂಗುರ ಕದ್ದು ಪರಾರಿಯಾಗಿದ್ದಾನೆ. ಬರೋಬ್ಬರಿ 75 ಲಕ್ಷ ಮೌಲ್ಯದ ಡೈಮಂಡ್ ಉಂಗುರ ಕಳ್ಳತನವಾಗಿದೆ. ಗ್ರಾಹಕನ ಸೋಗಿನಲ್ಲಿ ಬಂದು ಡೈಮಂಡ್ ಉಂಗುರ ಕದ್ದ ಕಳ್ಳನ ಕೈ ಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಫೆಬ್ರವರಿ 18 ರಂದು ಗ್ರಾಹಕನ ಸೋಗಿನಲ್ಲಿ ಜಾಯ್ ಅಲುಕ್ಕಾಸ್ ಮಳಿಗೆಗೆ ಎಂಟ್ರಿ ಕೊಟ್ಟ ಖದೀಮ ಡೈಮಂಡ್ ಉಂಗುರ ಕದ್ದಿದ್ದಾನೆ. ಇನ್ನು ಈ ಕಳ್ಳ ನಗರದ ಹಲವೆಡೆ ಆಭರಣ ಅಂಗಡಿಗಳಲ್ಲಿ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಕಬ್ಬನ್ ಪಾರ್ಕ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಡೈಮಂಡ್ ಕಳ್ಳನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಮಹಿಳೆ ಮುಂದೆ ವ್ಯಕ್ತಿ ಅಸಭ್ಯ ವರ್ತನೆ ಆರೋಪ, ವ್ಯಕ್ತಿ ವಶ

ಒಂಟಿಯಾಗಿ ವಾಸವಿದ್ದ ಮಹಿಳೆ ಕಂಡಾಗ ವ್ಯಕ್ತಿಯೋರ್ವನಿಂದ ಅಸಭ್ಯ ವರ್ತನೆ ಆರೋಪ ಕೇಳಿ ಬಂದಿದೆ. ಪುಲಿಕೇಶಿನಗರದ ಖಾಸಗಿ ಅಪಾರ್ಟ್ಮೆಂಟ್​ನಲ್ಲಿ ಒಂಟಿಯಾಗಿ ಜೀವನ ಸಾಗಿಸುತ್ತಿದ್ದ ಮಹಿಳೆಯನ್ನು ಕಂಡು ವ್ಯಕ್ತಿಯೋರ್ವ ಕಳೆದ ಒಂದು ವರ್ಷದಿಂದ ಮಹಿಳೆಗೆ ನಿರಂತರ ಕಿರುಕುಳ ನೀಡುತ್ತಿದ್ದ. ಒಂಟಿ ಮಹಿಳೆ ಕಂಡಾಗ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸುತ್ತಿದ್ದ. ವ್ಯಕ್ತಿಯ ಈ ಚಾಳಿ ಪದೇ ಪದೇ ನಡೆಯುತ್ತಿತ್ತು. ಜೊತೆಗೆ ಅಸಭ್ಯವಾಗಿ ಬೆರಳು ತೋರಿಸಿ ಕಿರುಕುಳ ನೀಡುತ್ತಿದ್ದ. ಇದೇ ತಿಂಗಳ 18ರಂದು ಕೂಡ ಮತ್ತದೇ ಮಾದರಿಯ ಕೃತ್ಯ ಎಸಗಿದ್ದಾನೆ. ಆಗ ಕೂಡಲೇ ಸ್ಥಳೀಯರ ಸಹಾಯದಿಂದ ವ್ಯಕ್ತಿಯನ್ನು ಹಿಡಿದು ಮಹಿಳೆ ಪೊಲೀಸರಿಗೆ ಒಪ್ಪಿಸಿದ್ದಾಳೆ. ಸದ್ಯ ಪುಲಿಕೇಶಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪದೆ ಪದೇ ಅಸಭ್ಯ ವರ್ತನೆ ಮಾಡಿರೋ ಆರೋಪ ಹಿನ್ನಲೆ ವ್ಯಕ್ತಿ ವಿರುದ್ಧ FIR ದಾಖಲಿಸಲಾಗಿದೆ. ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು ಕೃತ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ: ಬಾಂಗ್ಲಾ ಪ್ರಜೆಗಳ ಅಕ್ರಮ ಮಾನವ ಕಳ್ಳಸಾಗಣೆ: ಇಬ್ಬರನ್ನು ಬಂಧಿಸಿದ ಎನ್​ಐಎ

ತಲೆ ಮೇಲೆ ಖಾಸಗಿ ಬಸ್ ಚಕ್ರ ಹರಿದು ಸವಾರ ಸಾವು

ಬೆಂಗಳೂರಿನಲ್ಲಿ ಖಾಸಗಿ ಬಸ್‌ ಹರಿದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮುರುಳಿ (40) ಮೃತ ಬೈಕ್ ಸವಾರ. ನಾಗರಬಾವಿ ರಿಂಗ್ ರಸ್ತೆಯ ಮಲೆಮಹದೇಶ್ವರ ದೇಗುಲ ಬಳಿ ರಾತ್ರಿ 8.30ರ ಸುಮಾರಿಗೆ ಘಟನೆ ನಡೆದಿದೆ. ವೇಗವಾಗಿ ಬಂದ ಖಾಸಗಿ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಸವಾರ ಕೆಳಗೆ ಬಿದಿದ್ದಾನೆ, ಆಗ ಖಾಸಗಿ ಬಸ್‌ ಬೈಕ್ ಸವಾರನ ಮೇಲೆ ಹರಿದಿದೆ. ತಲೆ ಮೇಲೆ ಖಾಸಗಿ ಬಸ್ ಚಕ್ರ ಹರಿದು ಸವಾರ ಮುರಳಿ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಜ್ಞಾನಭಾರತಿ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಖಾಸಗಿ ಬಸ್‌, ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಶವ ಸ್ಥಳಾಂತರಿಸಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:47 am, Sat, 24 February 24

Loading...
Unable to load recommendations.
Follow Us