UVCE ಮೊದಲ ಚೇರ್ಮನ್ ಆಗಿ ಟಾಟಾ ಮುತ್ತುರಾಮನ್ ನೇಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ, ಟಾಟಾ ಇಂಟರ್‌ನ್ಯಾಶನಲ್‌ ಮತ್ತು ಟಾಟಾ ಸ್ಟೀಲ್ಸ್ ಲಿಮಿಟೆಡ್‌ನ ಮಾಜಿ ಅಧ್ಯಕ್ಷರಾದ ಮುತ್ತುರಾಮನ್ ಅವರನ್ನು ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ ಮೊದಲ ಬೋರ್ಡ್ ಆಫ್ ಗವರ್ನರ್ಸ್ ಚೇರ್ಮನ್ ಆಗಿ ನೇಮಕ ಮಾಡಲಾಗಿದೆ.

UVCE ಮೊದಲ ಚೇರ್ಮನ್ ಆಗಿ ಟಾಟಾ ಮುತ್ತುರಾಮನ್ ನೇಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್
Updated By: ಆಯೇಷಾ ಬಾನು

Updated on: Aug 10, 2022 | 6:41 PM

ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಯುನಿವರ್ಸಿಟಿ ಆಫ್ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್ (ಯುವಿಸಿಇ) ಬೋರ್ಡ್ ಆಫ್ ಗವರ್ನರ್ಸ್ ಚೇರ್ಮನ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಯುವಿಸಿಇಯ ಮೊದಲ ಚೇರ್ಮನ್ ಆಗಿ ಮುತ್ತುರಾಮನ್ ನೇಮಕಗೊಂಡಿದ್ದಾರೆ.

ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜಿನ (ಯುವಿಸಿಇ) ಆಡಳಿತ ಮಂಡಳಿಯ ಮುಖ್ಯಸ್ಥ ರಾಗಿ ಮುತ್ತುರಾಮನ್ ಅವರನ್ನು ನೇಮಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಬುಧವಾರ ಈ ವಿಚಾರ ತಿಳಿಸಿರುವ ಅವರು, ಟಾಟಾ ಸ್ಟೀಲ್ಸ್ ಲಿಮಿಟೆಡ್ ಮತ್ತು ಟಾಟಾ ಇಂಟರ್ನ್ಯಾಷನಲ್ ಸಂಸ್ಥೆಗಳ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಮುತ್ತುರಾಮನ್ ಅವರ ಕಾರ್ಯಾವಧಿಯು 4 ವರ್ಷಗಳಾಗಿರುತ್ತದೆ ಎಂದಿದ್ದಾರೆ.

ಸರಕಾರವು ಯುವಿಸಿಇ ಯನ್ನು ಉತ್ಕೃಷ್ಟ ಸಂಸ್ಥೆಯನ್ನಾಗಿ ಬೆಳೆಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಮುತ್ತುರಾಮನ್ ಅವರ ಅನುಭವವು ನೆರವಿಗೆ ಬರಲಿದೆ ಎಂದು ಅವರು ಹೇಳಿದ್ದಾರೆ.

ಯುವಿಸಿಇಗೆ ಸಂಪೂರ್ಣ ಸ್ವಾಯತ್ತತೆ ನೀಡುವ ಸರ್ಕಾರದ ಪ್ರಕ್ರಿಯೆಯ ಮೊದಲ ಭಾಗವಾಗಿ ಈ‌ ನೇಮಕ ಮಾಡಲಾಗಿದೆ. ರಾಜ್ಯ ಮಟ್ಟದಲ್ಲಿ ಈ ರೀತಿಯ ಕ್ರಾಂತಿಕಾರಕ ತೀರ್ಮಾನ ಆಗಿರುವುದು ಇದೇ ಮೊದಲು. ಮುಂದಿನ ದಿನಗಳಲ್ಲಿ ಅಧ್ಯಕ್ಷರ ನೇಮಕದ ವಿಷಯದಲ್ಲಿ ಸರ್ಕಾರದ ಪಾತ್ರ ಹೆಚ್ಚಾಗಿ ಇರುವುದಿಲ್ಲ. ಹಾಲಿ ಇರುವ ಅಧ್ಯಕ್ಷರೇ ಅವರ ಉತ್ತರಾಧಿಕಾರಿಯನ್ನು ನೇಮಕ‌ ಮಾಡಲಿದ್ದಾರೆ. ಇದು ಐಐಎಂ, ಐಐಟಿ ಮಾದರಿಯಲ್ಲಿ ಇರುತ್ತದೆ.

Published On - 6:21 pm, Wed, 10 August 22