ಮೇ 16ರಿಂದ ಶಾಲೆಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಆದೇಶ: ಸರ್ಕಾರದ ನಡೆಗೆ ಪೋಷಕರು ಗರಂ

ಪ್ರವೇಶ ಶುಲ್ಕ ತೆತ್ತು, ಸಮವಸ್ತ್ರ ಖರೀದಿಸಿದ ಬಳಿಕ ಲಾಕ್​ಡೌನ್ ಘೋಷಿಸುತ್ತಾರೆ. ನಂತರ ಆನ್​ಲೈನ್ ತರಗತಿ ಆರಂಭಿಸುತ್ತಾರೆ. ಇದು ದೊಡ್ಡ ಹುನ್ನಾರ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇ 16ರಿಂದ ಶಾಲೆಗಳ ಆರಂಭಕ್ಕೆ ಶಿಕ್ಷಣ ಇಲಾಖೆ ಆದೇಶ: ಸರ್ಕಾರದ ನಡೆಗೆ ಪೋಷಕರು ಗರಂ
ಪ್ರಾತಿನಿಧಿಕ ಚಿತ್ರ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 27, 2022 | 8:24 AM

ಬೆಂಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವನ್ನು ಮೇ 16ರಿಂದಲೇ ಆರಂಭಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷವನ್ನು ‘ಕಲಿಕಾ ಚೇತರಿಕೆ ವರ್ಷ’ ಎಂದು ಸಂಕಲ್ಪ ಮಾಡಲಾಗಿದ್ದು, ಮಕ್ಕಳ ಕಲಿಕೆ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಮೇ‌ 16ರಿಂದ ಜೂನ್ 15ರವರೆಗೆ, ಒಂದು ತಿಂಗಳ ಅವಧಿಗೆ ಸೇತುಬಂಧ ಕಾರ್ಯಕ್ರಮ ನಡೆಸಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಮೇ 16ರಿಂದಲೇ ಮಕ್ಕಳ ದಾಖಲಾತಿ ಆರಂಭಿಸಿ, ಜುಲೈ 31ರೊಳಗೆ ಮುಗಿಸಬೇಕು. ಮೇ 14ರಿಂದ ತರಗತಿ ಆರಂಭಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಮೇ 16ರಿಂದ 20ರವರೆಗೆ ದಾಖಲಾತಿ ಆಂದೋಲನ ನಡೆಸಬೇಕು. ಜೂನ್ 1ರಿಂದ ಕಲಿಕಾ ಚೇತನ ಕಾರ್ಯಕ್ರಮದಡಿ ಪಠ್ಯ ಬೋಧನೆ ನಡೆಸಬೇಕು ಎಂದು ಶಿಕ್ಷಣ ಇಲಾಖೆ ಹೇಳಿದೆ.

ಕಳೆದ ಮೂರು ವರ್ಷಗಳ ಚಟುವಟಿಕೆಗಳನ್ನು ಅವಲಕೋಕಿಸಿದ ನಂತರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ. ಶೈಕ್ಷಣಿಕ ವರ್ಷ ಬೇಗನೇ ಆರಂಭಿಸಿದರೆ ಕಲಿಸಲು ಹೆಚ್ಚು ಸಮಯ ಸಿಗುತ್ತದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಕಳೆದ 3 ವರ್ಷಗಳಲ್ಲಿ ಶೇಕಡಾ 50-60ರಷ್ಟು ಮಾತ್ರ ಭೌತಿಕ ಕಲಿಕೆ ಆಗಿದೆ. 2019-20, 2020-21, 2021-22ನೇ ಸಾಲಿನಲ್ಲಿ ಕಲಿಕೆಗೆ ಧಕ್ಕೆಯಾಗಿದೆ. ಮಕ್ಕಳಿಗೆ ಪೂರ್ಣ ಪ್ರಮಾಣದ ಕಲಿಕೆ ಆಗಿಲ್ಲ. ಹೀಗಾಗಿ ರಾಜ್ಯದ ಎಲ್ಲ ಶಾಲೆಗಳಲ್ಲಿ ಶಿಕ್ಷಣಕ್ಕೆ ಹಿನ್ನಡೆ ಉಂಟಾಗಿದೆ. ಕೊವಿಡ್ ಪಿಡುಗಿನ ಕಾರಣದಿಂದಾಗಿ ಭೌತಿಕ ತರಗತಿಗಳಿಗೆ ಬದಲಿಗೆ ಆನ್​ಲೈನ್ ಮೂಲಕ ಶಿಕ್ಷಣ ನೀಡಲಾಗಿತ್ತು. ಆದರೆ ಈ ಕ್ರಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ತಲುಪಲು ಆಗಿರಲಿಲ್ಲ. ಈ ವರ್ಷದಿಂದಾದರೂ ಪರಿಣಾಮಕಾರಿ ಶಿಕ್ಷಣ ನೀಡಬೇಕು ಎಂದು ಶಿಕ್ಷಣ ಇಲಾಖೆ ಸಂಕಲ್ಪ ಮಾಡಿದೆ.

ಶಿಕ್ಷಣ ಇಲಾಖೆ ಸೂಚನೆಗೆ ಪೋಷಕರು ಗರಂ

ಅವಧಿಗೆ ಮೊದಲೇ ಶಾಲೆಗಳನ್ನು ಆರಂಭಿಸಬೇಕು ಎನ್ನುವ ಶಿಕ್ಷಣ ಇಲಾಖೆ ಸೂಚನೆಗೆ ಪೋಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಖಾಸಗಿ ಶಾಲೆಗಳ ಲಾಬಿಗೆ ಸರ್ಕಾರ ಮಣಿಯುತ್ತಿದೆ. ಪ್ರವೇಶ ಶುಲ್ಕ ತೆತ್ತು, ಸಮವಸ್ತ್ರ ಖರೀದಿಸಿದ ಬಳಿಕ ಲಾಕ್​ಡೌನ್ ಘೋಷಿಸುತ್ತಾರೆ. ಲಾಕ್​ಡೌನ್ ಹೇರಿಕೆ ಕಾರಣಕ್ಕೆ ಆನ್​ಲೈನ್ ತರಗತಿ ಆರಂಭಿಸುತ್ತಾರೆ. ಇದು ದೊಡ್ಡ ಹುನ್ನಾರ ಎಂದು ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಶಾಲೆ ಆರಂಭವಾದರೂ ನಾವು ಮಕ್ಕಳನ್ನು ಕಳಿಸುವುದಿಲ್ಲ ಎಂದು ಹಲವು ಪೋಷಕರು ಹೇಳಿದ್ದಾರೆ. ಖಾಸಗಿ ಶಾಲೆಗಳ ಲಾಬಿಗೆ ಸರ್ಕಾರ ಮಣಿಯುತ್ತಿದೆ ಎಂದು ದೂರುತ್ತಿರುವ ಕೆಲ ಪೋಷಕರು, ಇನ್ನೂ 15 ದಿನ ಅಥವಾ 1 ತಿಂಗಳು ಕಾದು ನೋಡಿದ ಬಳಿಕ ಶಾಲೆ ತೆರೆಯಬೇಕಿತ್ತು. ಮೊದಲು ಶಾಲೆಯ ಆರಂಭಿಸುವ ದಿನಾಂಕ ಬದಲಿಸಬೇಕು. ಕೋವಿಡ್ ಸ್ಥಿತಿಗತಿ ನೋಡಿ ಶಾಲೆ ಆರಂಭಿಸಿದ್ದರೆ ಒಳ್ಳೆಯದಿತ್ತು. ಬ್ರಿಡ್ಜ್​ಕೋರ್ಸ್ ತರಗತಿಗಳನ್ನು ಆನ್​ಲೈನ್ ಮೂಲಕವೇ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನ ಸರ್ಕಾರಿ ಶಾಲೆಯಲ್ಲಿ ವಿಭೂತಿ ಧರಿಸಿದ ವಿದ್ಯಾರ್ಥಿನಿಗೆ ಕಿರುಕುಳ; ಬಲವಂತವಾಗಿ ಮತಾಂತರಕ್ಕೆ ಯತ್ನ

ಇದನ್ನೂ ಓದಿ: ಬೈಬಲ್ ಬೋಧನೆ: ಕ್ಲಾರೆನ್ಸ್ ಶಾಲೆಗೆ ನೊಟೀಸ್ ಜಾರಿ ಮಾಡಲು ಶಿಕ್ಷಣ ಸಚಿವ ಬಿಸಿ ನಾಗೇಶ್ ಸೂಚನೆ

Published On - 8:23 am, Wed, 27 April 22