ಬಿಜೆಪಿ ಪರ ಅಲೆ ಎಬ್ಬಿಸಿದ ಕಿಚ್ಚ ಸುದೀಪ್; ಜಮಾಯಿಸಿದ ಜನರ ಅಭಿಮಾನಕ್ಕೆ ಕಿಚ್ಚ ಫಿದಾ

|

Updated on: Apr 27, 2023 | 10:25 PM

ನಟ ಕಿಚ್ಚ ಸುದೀಪ್ ಅವರು ಇಂದು ಬಳ್ಳಾರಿ, ಹಾವೇರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ರೋಡ್ ಶೋ ನಡೆಸಿ ಅಲೆ ಎಬ್ಬಿಸಿದ್ದಾರೆ. ರೋಡ್ ಶೋ ವೇಳೆ ಜನರು ತೋರಿದ ಅಭಿಮಾನಕ್ಕೆ ಕಿಚ್ಚ ತಲೆಬಾಗಿದರು.

ಬಿಜೆಪಿ ಪರ ಅಲೆ ಎಬ್ಬಿಸಿದ ಕಿಚ್ಚ ಸುದೀಪ್; ಜಮಾಯಿಸಿದ ಜನರ ಅಭಿಮಾನಕ್ಕೆ ಕಿಚ್ಚ ಫಿದಾ
ಕಿಚ್ಚ ಸುದೀಪ್ ರೋಡ್ ಶೋ
Follow us on

ಬಳ್ಳಾರಿ: ಸಂಡೂರಿನಲ್ಲಿ ವಿಜಯಾ ಸರ್ಕಲ್​ನಿಂದ ಕೆಎಸ್​ಆರ್​ಟಿಸಿ ಡಿಪೋವರೆಗೆ ನಟ ಕಿಚ್ಚ ಸುದೀಪ್ (Kichcha Sudeep) ಅವರ ರೋಡ್ ಶೋ ನಡೆಯಲಿರುವ ಹಿನ್ನೆಲೆ ಬೆಳ್ಳಂಬೆಳಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು, ಬಿಜೆಪಿ (BJP) ಕಾರ್ಯಕರ್ತರು ಜಮಾಯಿಸಿದರು. ಬೆಳಗ್ಗೆ 8ಗಂಟೆ ಸುಮಾರಿಗೆ ಕಾರಿನಲ್ಲಿ ಸುದೀಪ್ ಬರುತ್ತಿರುವುದನ್ನು ನೋಡಿದ ಅಭಿಮಾನಿಗಳು ಅಬ್ಬರಿಸಿ ಬೊಬ್ಬಿರಿಯಲು ಆರಂಭಿಸಿದರು. ಆದರೆ ಅಭಿಮಾನಿಗಳ ಈ ಉತ್ಸಾಹ ತುಂಬ ಹೊತ್ತು ಉಳಿಯಲಿಲ್ಲ. ಏಕೆಂದರೆ, ಭದ್ರತಾ ದೃಷ್ಟಿಯಿಂದ ಕಿಚ್ಚನ ರೋಡ್ ಶೋ (Road Show) ರದ್ದುಗೊಳಿಸಲಾಯಿತು. ಹೀಗಾಗಿ ಸಂಡೂರಿಗೆ ಆಗಮಿಸಿದ ಸುದೀಪ್ ಕಾರಿನಿಂದ ಕೆಳಗೆ ಇಳಿಯದೇ ನೇರವಾಗಿ ಕೂಡ್ಲಿಗಿ ಕ್ಷೇತ್ರಕ್ಕೆ ತೆರಳಿದರು. ಇದು ಸಂಡೂರು ಕ್ಷೇತ್ರದ ಕಿಚ್ಚನ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿತು.

ಭರ್ಜರಿ ಸೌಂಡ್​ನೊಂದಿಗೆ ಕೂಡ್ಲಿಗಿ ಕ್ಷೇತ್ರಕ್ಕೆ ಎಂಟ್ರಿಕೊಟ್ಟ ಕಿಚ್ಚ ಸುದೀಪ್

ಸಂಡೂರಿನಿಂದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಕ್ಷೇತ್ರಕ್ಕೆ ಸುದೀಪ್​ ಎಂಟ್ರಿ ಕೊಡುತ್ತಲೇ ಅಭಿಮಾನಿಗಳು ಪಟಾಕಿಗೆ ಬೆಂಕಿ ಹಚ್ಚಿದ್ದಾರೆ. ಆ ಮೂಲಕ ಸಿನಿಮೀಯ ಶೈಲಿಯಲ್ಲಿ ಸುದೀಪ್​ಗೆ ಸ್ವಾಗತ ಕೋರಿದರು. ಕಿಚ್ಚನ ಪೋಟೋ ಇರುವ ಧ್ವಜಗಳನ್ನು ಹಿಡಿದು ಜಯಘೋಷಗಳನ್ನು ಕೂಗಲಾಯಿತು. ಅಭಿಮಾನಿಗಳ ಹಾಗೂ ಕಾರ್ಯಕರ್ತರ ಭರ್ಜರಿ ಸ್ವಾಗತದೊಂದಿಗೆ ತೆರೆದ ವಾಹನವೇರಿದ ಸುದೀಪ್, ಕೂಡ್ಲಿಗಿ ಬಿಜೆಪಿ ಅಭ್ಯರ್ಥಿ ಲೋಕೇಶ್ ನಾಯಕ್ ಪರ ಮತಬೇಟೆ ಆರಂಭಿಸಿದರು.

ವಾಲ್ಮೀಕಿ ವೃತ್ತದಿಂದ ಮದಕರಿ ವೃತ್ತದವರೆಗೆ ದಾರಿಯುದ್ದಕ್ಕೂ ಜಮಾಯಿಸಿದ ಸಾವಿರಾರು ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರತ್ತ ಕಿಚ್ಚ ಕೈ ಬೀಸಿದರು. ಮೆರವಣಿಗೆ ಉದ್ದಕ್ಕೂ ಡೋಲು ತಾಷ್ಯ ಬಾರಿಸೋ ಮೂಲಕ ಬಿಜೆಪಿ ಮತ್ತು ಸುದೀಪ್ ಪರ ಜಯಘೋಷಗಳನ್ನು ಕೂಗಲಾಯಿತು. ಮನೆ, ಕಟ್ಟಡದ ಮೇಲೆ ಎಲ್ಲಂದರಲ್ಲಿ ಸುದೀಪ್ ನೋಡಲು ಜನರು ಕಾದುನಿಂತಿದ್ದರು. ತೆರೆದ ವಾಹನದಲ್ಲಿ ಕಿಚ್ಚ ತಮ್ಮ ಮನೆಗೆ ಸಮೀಪಿಸುತ್ತಿದ್ದಂತೆ ಕಿಚ್ಚನತ್ತ ಕೈಬೀಸಿ ಹರ್ಷಪಟ್ಟರು.

ಕಿಚ್ಚ ಸುದೀಪ್​ನನ್ನು ನೋಡಲು ಮುಗಿಬಿದ್ದ ಜನರು

ಕೂಡ್ಲಿಗಿಯಲ್ಲಿ ಭರ್ಜರಿ ರೋಡ್ ಶೋ ಮುಗಿಸಿದ ಸುದೀಪ್, ಧಾರವಾಡ ಜಿಲ್ಲೆಯ ಕುಂದಗೋಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಆರ್​.ಪಾಟೀಲ್ ಪರ ಮತಯಾಚನೆ ನಡೆಸಲು ಸಂಶೆ ಗ್ರಾಮಕ್ಕೆ ಆಗಮಿಸಿದರು. ಈ ವೇಳೆ ಕಿಚ್ಚನನ್ನು ನೋಡಲು ಜನರು ಮುಗಿಬಿದ್ದರು. ತೆರೆದ ವಾಹನದಲ್ಲೇ ಅಭಿಮಾನಿಗಳತ್ತ ಕೈಬೀಸಿದ ಕಿಚ್ಚ, ಎಂ.ಆರ್​.ಪಾಟೀಲ್​ಗೆ ಮತನೀಡುವಂತೆ ಮನವಿ ಮಾಡಿದರು.

ಇದನ್ನೂ ಓದಿ: Karnataka Assembly Polls: ಹಿರೇಕೆರೂರಲ್ಲಿ ಸಚಿವ ಬಿಸಿ ಪಾಟೀಲ ಪರ ಕಿಚ್ಚ ಸುದೀಪ್ ಅಬ್ಬರದ ಪ್ರಚಾರ, ರೋಡ್ ಶೋ!

ನಾನು ಕಾರು ಇಳಿದು ಬಂದಾಗ ಕೆಲವರು ಎಂಆರ್ ಪಾಟೀಲ್ ಗೆಲ್ಲಲ್ಲ ಅಂದರು.  ಆದರೆ ನನಗೆ ಜನರ ಮೇಲೆ ನಂಬಿಕೆ ಇದೆ. ಎಂಆರ್ ಪಾಟೀಲ್ ಗೆಲ್ಲುತ್ತಾರೆ, ಅವರು ಗೆಲ್ಲಸಬೇಕು ಎಂದರು. ನಾನು ರೋಡ್ ಶೋ ವೇಳೆ ರಸ್ತೆ ನೋಡಿದೆ. ಇಲ್ಲಿ ಲೀಡರ್ ಯಾರು ಇದ್ದಾರೋ ಏನೂ ಕೆಲಸ ಮಾಡಿಲ್ಲ. ಕೆಲಸ ಮಾಡಿಲ್ಲ ಅಂದರೆ ಅವರನ್ನು ಒದ್ದು ಓಡಿಸಿ ಅಂತಾನೂ ಹೇಳಿದರು. ಈ ವೇಳೆ ಅಭಿಮಾನಿಗಳು ಮತ್ತು ಕಾರ್ಯಕರ್ತರು ಶಿಲ್ಲೆ, ಚಪ್ಪಾಳೆ ತಟ್ಟಿ ಕಿಚ್ಚನ ಹೇಳಿಕೆಯನ್ನು ಬೆಂಬಲಿಸಿದರು. ಅಷ್ಟಕ್ಕೂ ನಿಲ್ಲದ ಕಿಚ್ಚನ ಕಿಚ್ಚಿನ ಮಾತು, ನಾಳೆ ಪಾಟೀಲರು ಕೆಲಸ ಮಾಡದೆ ಇದ್ದಲ್ಲಿ ನನಗೆ ಹೇಳಿ ನಾನು ಕೆಲಸ ಮಾಡಸುತ್ತೇನೆ ಎಂದು ಹೇಳಿ ಕೊನೆಯಲ್ಲಿ ವೀರ ಮದಕರಿ ಸಿನಿಮಾದ ಡೈಲಾಗ್ ಹೊಡೆದು ಭಾಷಣಕ್ಕೆ ಫುಲ್​ಸ್ಟಾಪ್ ಇಟ್ಟರು.

ಅಭಿಮಾನಿಗಳ ಮನಸು ಕದ್ದ ಕಿಚ್ಚ ಸುದೀಪ್

ಹಿರೇಕೆರೂರಿನಲ್ಲಿ ಬಿಸಿ ಪಾಟೀಲ್ ಪರ ಮತಬೇಟೆಗೆ ಇಳಿದ ಕಿಚ್ಚ ಸುದೀಪ್ ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದರು. ಕ್ಷೇತ್ರಕ್ಕೆ ಆಗಮಿಸಿದ ಸುದೀಪ್ ಪೊಟೋ, ಬಾವುಟ ಹಿಡಿದು ಅಭಿಮಾನಿಗಳು ನೆಚ್ಚಿನ ನಟನಿಗೆ ಸ್ವಾಗರ ಕೋರಿದರು. ನಂತರ ತೆರೆದ ವಾಹನವೇರಿ ಬಿಜಿ ಶಂಕರ್ ರಾವ್ ವೃತ್ತದಿಂದ ಸರ್ವಜ್ಞ ಸರ್ಕಲ್​ವರೆಗೆ ರ್ಯಾಲಿ ಮಾಡಿದರು. ಇದೇ ವೇಳೆ ಜಮಾಯಿಸಿದ ಜನರ ಅಭಿಮಾನಕಂಡು ಕಿಚ್ಚ ತಲೆಬಾಗಿದರು.

ನಿಮ್ಮ ಅಭಿಮಾನಕ್ಕೆ ನಾನು ಚಿರಋಣಿ, ನೀವು ಸ್ವಾಗತಿಸಿರುವ ರೀತಿಗೆ ಅಭಾರಿಯಾಗಿದ್ದೀನೆ ಎಂದು ಹೇಳಿದ ಕಿಚ್ಚ, ನಾನು ಇಷ್ಟು ಪ್ರೀತಿ ಸಂಪಾದಿಸಿದ್ದೀನಿ ಅಂತ ಅರ್ಥ ಆಗುತ್ತಿದೆ. ಪದೇ ಪದೇ ಈ ಭಾಗಕ್ಕೆ ಬರಲು ಅವಕಾಶ ಸಿಗಲ್ಲ. ಅವಕಾಶ ಸಿಕ್ಕಾಗ ಓಡಿ ಬರುತ್ತೇವೆ. ಯಾಕೆಂದರೆ ಜನ ನಮ್ಮನ್ನ ನೆನಪಿಟ್ಟುಕೊಂಡಿದ್ದಾರಾ ಇಲ್ವಾ ಅಂತ ಗೊತ್ತಾಗುತ್ತದೆ ಎಂದು ಹೇಳುವ ಮೂಲಕ ತಾನು ಅಭಿನಯಿಸಿದ ಸ್ವಾತಿ ಮುತ್ತು ಸಿನಿಮಾದ ಗೆದ್ದೇ ಗೆಲ್ಲುವೆ ಒಂದು ದಿನ ಗಲ್ಲಲೆ ಬೇಕು ಒಳ್ಳೆತನ ಹಾಡಿನ ಸಾಲನ್ನು ಹೇಳಿದರು.

ದೇಶವನ್ನು ಮತ್ತಷ್ಟು ಅಭಿವೃದ್ಧಿ ಮಾಡುವ ಕನಸು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಮೋದಿ ಅವರ ಕನಸನ್ನು ನಾವೆಲ್ಲ ನನಸು ಮಾಡಬೇಕು ಎಂದು ಹೇಳಿದ ಸುದೀಪ್, ನರೇಂದ್ರ ಮೋದಿ ಅವರ ಕನಸಿನ ರೀತಿ ರಾಷ್ಟ್ರ ಆಭಿವೃದ್ಧಿಯಾಗಲಿ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು. ಅಲ್ಲದೆ, ಇಲ್ಲಿಂದ ಹೊರಡುವ ವೇಳೆ ಒಂದನ್ನ ತಗೆದುಕೊಂಡು ಹೋಗುತ್ತೇನೆ, ಅದು ನಿಮ್ಮ ಪ್ರೀತಿ ಎಂದು ಹೇಳುವ ಮೂಲಕ ಅಭಿಮಾನಿಗಳ ಮನಸ್ಸನ್ನು ಕದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:21 pm, Thu, 27 April 23