ಚಿತ್ರದುರ್ಗ: ತಪ್ಪಿದ ಕಾಂಗ್ರೆಸ್ ಟಿಕೆಟ್, ರಘು ಆಚಾರ್ ಜೆಡಿಎಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್
ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನೆಲೆ ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಮಾಜಿ ಎಂಎಲ್ಸಿ ರಘು ಆಚಾರ್ ಅವರು ಏಪ್ರಿಲ್ 14ರಂದು ಜೆಡಿಎಸ್ ಪಕ್ಷ ಸೇರಲಿದ್ದಾರೆ. ಜೆಡಿಎಸ್ ಎಂಎಲ್ಸಿ ಟಿಎ ಶರವಣ ಅವರನ್ನು ಭೇಟಿಯಾದ ನಂತರ ರಘು ಆಚಾರ್ ಈ ಬಗ್ಗೆ ಘೋಷಿಸಿದ್ದಾರೆ.

ಮುಖ್ಯಾಂಶಗಳು
- ಕಾಂಗ್ರೆಸ್ ಟಿಕೆಟ್ ತಪ್ಪಿದ ಹಿನ್ನೆಲೆ ಏಪ್ರಿಲ್ 14ರಂದು ಜೆಡಿಎಸ್ ಸೇರಲಿರುವ ರಘು ಆಚಾರ್
- ಸ್ವಾಭಿಮಾನಕ್ಕೆ ಚ್ಯುತಿ ತಂದವರಿಗೆ ಚುನಾವಣೆಯಲ್ಲಿ ಉತ್ತರ ನೀಡುತ್ತೇನೆ: ರಘು ಆಚಾರ್
- ಏಪ್ರಿಲ್ 17ರಂದು ಚಿತ್ರದುರ್ಗ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ: ರಘು ಆಚಾರ್
ಚಿತ್ರದುರ್ಗ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಕಾಂಗ್ರೆಸ್ ಬಿಡುಗಡೆ ಮಾಡಿದ ಮೊದಲ ಹಂತದ ಪಟ್ಟಿಯಲ್ಲೂ ಟಿಕೆಟ್ ಘೋಷಿಸಿಲ್ಲ, ಎರಡನೇ ಹಂತದ ಪಟ್ಟಿಯಲ್ಲೂ ತಮ್ಮ ಹೆಸರು ಕಾಣಿಸಿಲ್ಲ ಎಂದು ಅಸಮಾಧಾನಗೊಂಡಿರುವ ಮಾಜಿ ಎಂಎಲ್ಸಿ ರಘು ಆಚಾರ್ (Raghu Achar), ಜೆಡಿಎಸ್ ಸೇರ್ಪಡೆಗೊಂಡು ಕಾಂಗ್ರೆಸ್ ವಿರುದ್ಧ ತೊಡೆತಟ್ಟಲು ಸಜ್ಜಾಗುತ್ತಿದ್ದಾರೆ. ಇಂದು ಜೆಡಿಎಸ್ ಎಂಎಲ್ಸಿ ಟಿಎ ಶರವಣ ಅವರನ್ನು ಭೇಟಿಯಾದ ನಂತರ ಚಿತ್ರದುರ್ಗದಲ್ಲಿ ಹೇಳಿಕೆ ನೀಡಿದ ರಘು ಆಚಾರ್, ಏಪ್ರಿಲ್ 14ರ ಮಧ್ಯಾಹ್ನ 12.07ಕ್ಕೆ ಜೆಡಿಎಸ್ (JDS Karnataka) ಸೇರ್ಪಡೆಯಾಗುತ್ತೇನೆ. ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಜೆಡಿಎಸ್ ಸೇರ್ಪಡೆಯಾಗುತ್ತಿದ್ದೇನೆ. ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಪಕ್ಷದ ಕಚೇರಿ ಜೆ ಪಿ ಭವನದಲ್ಲಿ ಸೇರ್ಪಡೆಯಾಗಲಿದ್ದೇನೆ ಎಂದರು.
ಚಿತ್ರದುರ್ಗ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಿಸಲು ಶ್ರಮಿಸುತ್ತೇನೆ. ಜಿಲ್ಲೆಯ ಆರಕ್ಕೆ ಆರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಸೋಲಲಿದೆ. ಸ್ವಾಭಿಮಾನಕ್ಕೆ ಚ್ಯುತಿ ತಂದವರಿಗೆ ಚುನಾವಣೆಯಲ್ಲಿ ಉತ್ತರ ನೀಡುತ್ತೇನೆ ಎಂದು ಕಾಂಗ್ರೆಸ್ ವಿರುದ್ಧ ರಘು ಆಚಾರ್ ಕಿಡಿಕಾರಿದರು. ಜೆಡಿಎಸ್ ಟಿಕೆಟ್ ವಿಚಾರವಾಗಿ ಮಾತನಾಡಿದ ಅವರು, ವರಿಷ್ಠರು ನನಗೆ ಟಿಕೆಟ್ ನೀಡುವ ಬಗ್ಗೆ ತೀರ್ಮಾನಿಸುತ್ತಾರೆ. ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸೂಚಿಸಿದರೂ ನಾನು ಸಿದ್ಧನಾಗಿರುವೆ. ಇಲ್ಲವಾದರೆ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುತ್ತೇನೆ. ಜೆಡಿಎಸ್ ಸೇರ್ಪಡೆ ಬಗ್ಗೆ ಈಗಷ್ಟೇ ಚರ್ಚೆಯಾಗಿದೆ, ಟಿಕೆಟ್ಗೆ ಸಮಯಬೇಕು. ಏಪ್ರಿಲ್ 17ರಂದು ಚಿತ್ರದುರ್ಗ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತೇನೆ ಎಂದರು.
ಮಾಜಿ ಎಂಎಲ್ಸಿ ರಘು ಆಚಾರ್ ನಾಯಕತ್ವದ ವಿರುದ್ಧ ಆಕ್ರೋಶ ವ್ಯಕ್ತವಾದ ನಡುವೆ ಬಿಡುಗಡೆಯಾದ ಕಾಂಗ್ರೆಸ್ 2ನೇ ಪಟ್ಟಿಯಲ್ಲಿ ಚಿತ್ರದುರ್ಗದಿಂದ ಕೆ.ಸಿ.ವಿರೇಂದ್ರ ಪಪ್ಪಿಗೆ ಕೈ ಟಿಕೆಟ್ ಘೋಷಣೆಯಾಗಿದೆ. ಇದರಿಂದ ಅಸಮಾಧಾನಗೊಂಡ ರಘು ಆಚಾರ್, ಸಿದ್ದರಾಮಯ್ಯ ಅವರೇ ನನಗೆ ಸ್ಪರ್ಧಿಸುವಂತೆ ಹೇಳಿದ್ದರು. ಎಂಎಲ್ಸಿ ಬೇಡ, ಶಾಸಕ ಸ್ಥಾನಕ್ಕೆ ಸ್ಪರ್ಧಿಸಿ ಎಂದು ಕೈ ನಾಯಕರು ಹೇಳಿದ್ದರು. ಈಗ ಅರ್ಧ ದಾರಿಯಲ್ಲೇ ಕತ್ತು ಕೊಯ್ದಿದ್ದಾರೆ ಎಂದು ಈ ಹಿಂದೆ ಆಕ್ರೋಶ ಹೊರಹಾಕಿದ್ದರು.
ಜಾತಿ, ಮತ ಬಲ ಇಲ್ಲವೆಂಬ ಸಣ್ಣ ಕಾರಣಕ್ಕೆ ಈ ರೀತಿ ಮಾಡಿದ್ದಾರೆ. ಈ ಜಿಲ್ಲೆಯ ಜನ ಇದಕ್ಕೆ ಉತ್ತರ ನೀಡುತ್ತಾರೆ. ನನಗೊಬ್ಬನಿಗೆ ಅಲ್ಲ, ಮಡಿವಾಳ ಸಮುದಾಯದ, ತರೀಕೆರೆ ಕ್ಷೇತ್ರದ ಆಕಾಂಕ್ಷಿ ಆಗಿದ್ದ ಗೋಪಿಕೃಷ್ಣ ಅವರಿಗೂ ಅನ್ಯಾಯ ಮಾಡಲಾಗಿದೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. 197 ಸಣ್ಣ ಸಮುದಾಯಗಳಿಗೆ ಕಾಂಗ್ರೆಸ್ ಒಂದು ಸ್ಥಾನ ನೀಡಿಲ್ಲ. ಆ ಸಮುದಾಯಗಳ ಬಗ್ಗೆ ಕೆಪಿಸಿಸಿ ಅಧ್ಯಕ್ಷರಿಗೆ ಗೌರವ ಇದೆಯೋ, ಇಲ್ಲವೊ ಗೊತ್ತಿಲ್ಲ ಎಂದು ಡಿಕೆ ಶಿವಕುಮಾರ್ ವಿರುದ್ಧ ರಘು ಆಚಾರ್ ಅಸಮಧಾನ ಹೊರಹಾಕಿದ್ದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:39 pm, Fri, 7 April 23



