CT Ravi: ಖಂಡಿತಾ ನನಗೂ ಸಿಎಂ ಆಗಬೇಕೆಂಬ ಆಸೆ ಇದೆ ಎಂದ ಸಿ.ಟಿ.ರವಿ

ಖಂಡಿತಾ ನನಗೂ ಸಿಎಂ ಆಗಬೇಕೆಂಬ ಆಸೆ ಇದೆ. ನಾನು ಸಿಎಂ ಆಗಬೇಕೆಂದು ಕ್ಷೇತ್ರದಲ್ಲಿ ಮಾತ್ರ ಕೂಗು ಕೇಳಿಬರುತ್ತಿದೆ. ರಾಜ್ಯದೆಲ್ಲೆಡೆ ಈ ಕೂಗು ಕೇಳಿದಾಗ ಸಿಎಂ ಮಾಡುವಂತೆ ಕೇಳುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.

CT Ravi: ಖಂಡಿತಾ ನನಗೂ ಸಿಎಂ ಆಗಬೇಕೆಂಬ ಆಸೆ ಇದೆ ಎಂದ ಸಿ.ಟಿ.ರವಿ
ಬಿಜೆಪಿ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಸಿ.ಟಿ.ರವಿ

Updated on: Apr 24, 2023 | 3:01 PM

ಮೈಸೂರು: ಖಂಡಿತಾ ನನಗೂ ಸಿಎಂ ಆಗಬೇಕೆಂಬ ಆಸೆ ಇದೆ. ನಾನು ಸಿಎಂ ಆಗಬೇಕೆಂದು ಕ್ಷೇತ್ರದಲ್ಲಿ ಮಾತ್ರ ಕೂಗು ಕೇಳಿಬರುತ್ತಿದೆ. ರಾಜ್ಯದೆಲ್ಲೆಡೆ ಈ ಕೂಗು ಕೇಳಿದಾಗ ಸಿಎಂ ಮಾಡುವಂತೆ ಕೇಳುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಹೇಳಿದರು. ಜಿಲ್ಲೆಯಲ್ಲಿ ಆಯೋಜಿಸಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್​, ಜೆಡಿಎಸ್ ಮೈತ್ರಿ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಇದು ರಾಜಕೀಯ ವ್ಯಭಿಚಾರನಾ ಎಂದು ಪ್ರಶ್ನಿಸಿದರು. ಇದನ್ನು ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಬೇಕು. ರಾಜಕೀಯ ಹಾದರದ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಮುಳುಗುವುದು ನಿಶ್ಚಿತ

ಲಿಂಗಾಯತ ಡ್ಯಾಂ ಒಡೆದಿರುವ ಹೇಳಿಕೆ ವಿಚಾರವಾಗಿ ಮಾತನಾಡಿ ಅವರು, ಇದು ಕಾಂಗ್ರೆಸ್‌ಗೆ ರಾಜಕೀಯ ವೃತ್ತಿ. ಅವರದ್ದು ಬರೀ ಒಡೆಯುವ ಕೆಲಸ. ಹಿಂದೆ ವೀರಶೈವ ಲಿಂಗಾಯತ ಹೆಸರಲ್ಲಿ ಒಡೆದು ಅದನ್ನು ಅನುಭವಿಸಿದ್ದರು. ನಾವು ಲಿಂಗಾಯತರ ಡ್ಯಾಂನ್ನು ಗಟ್ಟಿ ಮಾಡಿದ್ದೇವೆ. ಬೇರೆ ಬೇರೆ ಸಮುದಾಯದವನ್ನು ಸೇರಿಸಿಕೊಂಡು ಡ್ಯಾಂ ಗಟ್ಟಿ‌ ಮಾಡಿದ್ದೇವೆ. ಹಿಂದುತ್ವದ ಡ್ಯಾಂನ್ನು ಗಟ್ಟಿ ಮಾಡಿ ಎತ್ತರಿಸಿದ್ದೇವೆ. ಚುನಾವಣೆಯಲ್ಲಿ ಮುಳುಗಿದಾಗ ನಿಮಗೆ ಗೊತ್ತಾಗುತ್ತದೆ. ಕಾಂಗ್ರೆಸ್ ಮುಳುಗುವುದು ನಿಶ್ಚಿತ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಏಪ್ರಿಲ್‌ 25, 26 ರಂದು ಬಿಜೆಪಿಯಿಂದ ವಿಶೇಷ ಮಹಾ ಪ್ರಚಾರ ಅಭಿಯಾನ; ಕೇಂದ್ರದ 98, ರಾಜ್ಯದ 150ಕ್ಕೂ ಹೆಚ್ಚು ನಾಯಕರು ಭಾಗಿ

ಭಯಮಿಶ್ರಿತ ಆಕ್ರೋಶವಾಗಿ ಆ ಮಾತು ಬಂದಿದೆ

ಸಿದ್ದರಾಮಯ್ಯ ಲಿಂಗಾಯತ ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ತಮ್ಮ ಅಸಹನೆ ಆಕ್ರೋಶ ಹೊರ ಹಾಕಿದ್ದಾರೆ. ವರುಣದಲ್ಲಿ ಲಿಂಗಾಯತರು ಎಸ್​ಸಿ, ಎಸ್​ಟಿ ಎಲ್ಲರೂ ಒಂದಾಗಿದ್ದಾರೆ. ಅಹಿಂದ ಕಾರ್ಡ್ ನಡೆಯುತ್ತಿಲ್ಲ. ಹಿಂದು ಕಾರ್ಡ್ ನಡೆಯುತ್ತಿದೆ ಅನಿಸಿರಬಹುದು. ಭಯಮಿಶ್ರಿತ ಆಕ್ರೋಶವಾಗಿ ಈ ಮಾತು ಬಂದಿದೆ. ಎರಡು ರೀತಿಯ ಸಿಟ್ಟು ಸಿದ್ದರಾಮಯ್ಯಗೆ ಇದೆ. ಒಂದು ಕೋಲಾರ ವರುಣದಲ್ಲಿ ಸ್ಪರ್ಧೆ ಮಾಡಬೇಕು ಅಂತಾ ಇತ್ತು. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ.

ಸಿದ್ದರಾಮಯ್ಯ ಚಕ್ರವ್ಯೂಹದಲ್ಲಿ ಸಿಲುಕಿದ್ದಾರೆ. ಅವರನ್ನು ಚಕ್ರವ್ಯೂಹದಿಂದ ಬಿಡಿಸಲು ಕೃಷ್ಣ ಅವರ ಜೊತೆ ಇಲ್ಲ. ಕೃಷ್ಣ ಬಿಜೆಪಿ ಅಲ್ಲಿ ಇರುವುದು. ಡಿ.ಕೆ ಶಿವಕುಮಾರ್ ಸಹಾ ಸಿದ್ದರಾಮಯ್ಯ ಜೊತೆಗಿಲ್ಲ. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ತಮ್ಮ ಎಲ್ಲಾ ಅಸ್ತ್ರ ಬಳಸುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಪರಮೇಶ್ವರ್ ಶಾಪ ತಟ್ಟದೆ ಬಿಡುವುದಿಲ್ಲ. ತನಗೆ ಸಿಕ್ಕದ್ದು ಬೇರೆಯವರಿಗೆ ಸಿಗಬಾರದು ಅನ್ನೋ ಮನಸ್ಥಿತಿ ಅವರಿಗಿದೆ. ಖರ್ಗೆ, ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಅನ್ನೋ ಕಾರಣಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರದಂತೆ ತಡೆಯಲು ಈ ರೀತಿ ಹೇಳಿದ್ದಾರೆ ಎಂದು ಕಿಡಿಕಾರಿದರು.

ಹಳೆ ಬೇರು, ಹೊಸ ಚಿಗುರು ಮಾದರಿಯಲ್ಲಿ ಟಿಕೆಟ್​ ಹಂಚಿಕೆ

ಹಳೆಬೇರು ಹೊಸ ಚಿಗುರು ಮಾದರಿಯಲ್ಲಿ ಟಿಕೆಟ್​ ನೀಡಲಾಗಿದೆ. ಕಾಲ ಕಾಲಕ್ಕೆ ಬದಲಾವಣೆ ಅಗತ್ಯ. ರಾಜಕೀಯ ಪಕ್ಷದಲ್ಲೂ ಒಳಹರಿವು ಇರಬೇಕು. ಬಡವರಿಂದ ಮೇಧಾವಿಗಳವರೆಗೂ ರಾಜಕೀಯ ಪ್ರಾತಿನಿಧ್ಯ, ಸಾಮಾಜಿಕ ನ್ಯಾಯ ನಮ್ಮ ಬದ್ದತೆ. ಕೆಲವು ಪಕ್ಷಗಳಿಗೆ ಅದು ಬರೀ ಘೋಷಣೆ ಮಾತ್ರ. ಒಳ ಮೀಸಲಾತಿ ಜಾರಿ ಎಸ್​ಸಿ, ಎದ್​ಟಿ ಮೀಸಲಾತಿ ಜಾಸ್ತಿ ಮಾಡಿದೆವು.

ಇದನ್ನೂ ಓದಿ: ಮೈಸೂರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅಮಿತ್​ ಶಾ

ಕಡೆಯ ಓವರ್‌ನಲ್ಲಿ ಸಿಕ್ಸರ್ ಹೊಡೆದು ಜೇನಿಗೂಡಿಗೆ ಕೈ ಹಾಕಿದ್ದಾರೆ. ಸಿದ್ದರಾಮಯ್ಯ ಈ ಫೈಲ್‌ನ್ನು ಬಿಸಾಕಿದ್ದಾರೆ. ಅದನ್ನು ಸತಃ ಅವರ ಸಚಿವ ಆಂಜನೇಯ ಹೇಳಿದ್ದರು. ಚಾಲೆಂಜ್ ಯಾರ ಮೀಸಲಾತಿ ವಾಪಸ್ಸು ಪಡೆಯುತ್ತೀರಾ ಸ್ಪಷ್ಟಪಡಿಸಿ. ಲಿಂಗಾಯತ ಒಕ್ಕಲಿಗ ಯಾವುದು ಪಡೆಯುತ್ತೀರಾ? ನಿಮಗೆ ರಾಜಕೀಯ ತಾಕತ್ತಿದ್ದರೆ ಇದನ್ನು ಸ್ಪಷ್ಟಪಡಿಸಿ. ಕೆಲವರು ಅತಂತ್ರ ಸರ್ಕಾರದ ಕನಸು ಕಾಣುತ್ತಿದ್ದಾರೆ,
ಆದರೆ ಅದು ಸಾಧ್ಯವಿಲ್ಲ ಎಂದು ಹೇಳಿದರು.

ಏ. 25 ಮತ್ತು 26 ಬಿಜೆಪಿ ಮಹಾ ಪ್ರಚಾರ ಅಭಿಯಾನ

ಏ. 25 ಮತ್ತು 26 ಬಿಜೆಪಿ ಮಹಾ ಪ್ರಚಾರ ಅಭಿಯಾನ ನಡೆಯಲಿದ್ದು, ಕೇಂದ್ರ ರಾಜ್ಯ ಜಿಲ್ಲಾ ನಾಯಕರು ಭಾಗಿಯಾಗಲಿದ್ದಾರೆ. ಕಾರ್ಪರೇಟ್ ಬಾಂಬಿಂಗ್ ಹೆಸರಿನ ಬೂತ್ ಮಟ್ಟದವರೆಗಿನ ಅಭಿಯಾನ ನಡೆಯಲಿದೆ. 224 ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯಲಿದ್ದು, 98 ಕೇಂದ್ರ ಸಚಿವರು, 13 ಕೇಂದ್ರ ನಾಯಕರು, 14 ರಾಜ್ಯ ನಾಯಕರು ಮತ್ತು ಸಚಿವರು, ಶಾಸಕರು, ಸಂಸದರು ಸೇರಿ ಎಲ್ಲರೂ ಭಾಗಿಯಾಗಲಿದ್ದಾರೆ. 150 ಸ್ಥಾನ ಗೆಲ್ಲುವ ಉದ್ದೇಶದಿಂದ ಮಹಾ ಪ್ರಚಾರ ಮಾಡಲಾಗುತ್ತಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:01 pm, Mon, 24 April 23

Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Follow Us