ಕಾಂಗ್ರೆಸ್​ನ ಗ್ಯಾರಂಟಿ ಘೋಷಣೆಗಳನ್ನು ಕುಮಾರಸ್ವಾಮಿ ಈಗಾಗಲೇ ಮಾಡಿ ತೋರಿಸಿದ್ದಾರೆ: ಹೆಚ್​ಡಿ ದೇವೇಗೌಡ

|

Updated on: May 01, 2023 | 5:35 PM

ಮೊಯಿದ್ದೀನ್ ಬಾವರಿಗೆ ದುರುದ್ದೇಶದಿಂದ ಕಾಂಗ್ರೆಸ್ ನಲ್ಲಿ ಸೀಟು ತಪ್ಪಿಸಲಾಯಿತು. ವಿಧಾನಸಭೆಗೆ ಬರಬಾರದು ಎಂದು ವೈಯಕ್ತಿಕ ದ್ವೇಷದಿಂದ ಟಿಕೇಟ್ ಕೊಟ್ಟಿಲ್ಲ. ರಾಜಕೀಯವಾಗಿ ಬೀದಿ ಪಾಲು ಮಾಡಲು ಈ ಹುನ್ನಾರ ಮಾಡಲಾಗಿದೆ ಎಂದು ಹೆಚ್​ಡಿ ದೇವೇಗೌಡ ಹೇಳಿದ್ದಾರೆ.

ಕಾಂಗ್ರೆಸ್​ನ ಗ್ಯಾರಂಟಿ ಘೋಷಣೆಗಳನ್ನು ಕುಮಾರಸ್ವಾಮಿ ಈಗಾಗಲೇ ಮಾಡಿ ತೋರಿಸಿದ್ದಾರೆ: ಹೆಚ್​ಡಿ ದೇವೇಗೌಡ
ಹೆಚ್​ ಡಿ ದೇವೇಗೌಡ
Follow us on

ಮಂಗಳೂರು: ಕಾಂಗ್ರೆಸ್​ನವರು ಈಗ ಗ್ಯಾರಂಟಿ ಘೋಷಣೆ (Congress guarantee announces) ಮಾಡುತ್ತಿದ್ದಾರೆ. ಆದರೆ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅವರು ಆ ಗ್ಯಾರಂಟಿಗಳನ್ನು ಈಗಾಗಲೇ ಮಾಡಿ ತೋರಿಸಿದ್ದಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ (HD Deve Gowda) ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್​ನಲ್ಲಿ ಮಾತನಾಡಿದ ಅವರು, ಮೇ 13ರಂದು ಕುಮಾರಣ್ಣನ ಸರ್ಕಾರ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮ್ಮಿಶ್ರ ಸರ್ಕಾರದ ಬಗ್ಗೆ ಮಾತನಾಡಿದ ದಳಪತಿ ದೇವೇಗೌಡ, 2018ರಲ್ಲಿ ನಾವು ಕಾಂಗ್ರೆಸ್​​ನವರ ಮನೆ ಬಾಗಿಲಿಗೆ ಹೋಗಿರಲಿಲ್ಲ. ಕಾಂಗ್ರೆಸ್​ ನಾಯಕರೇ ನಮ್ಮ ಬಳಿ‌ಗೆ ಬಂದಿದ್ದರು ಎಂದರು. ಕಾಂಗ್ರೆಸ್ ನಮ್ಮ ಬಳಿಗೆ ಅಂದು ಬಂದು ಸಮ್ಮಿಶ್ರ ಸರ್ಕಾರದ ಪ್ರಸ್ತಾವನೆಯನ್ನು ಇಟ್ಟಿತು. ಗೆಹ್ಲೋಟ್, ಗುಲಾಂ ನಬಿ ಅಝಾದ್ ಬಂದು ನಿಮ್ಮ ಮಗನನ್ನು ಮುಖ್ಯಮಂತ್ರಿ ಮಾಡುತ್ತೇವೆ ಒಪ್ಪಿಕೊಳ್ಳಿ ಎಂದು ಹೇಳಿದ್ದರು. ಬಳಿಕ ಆದ ಘಟನೆಗಳಿಗೆ ಕಾರಣ ಯಾರೂ ಎನ್ನುವುದು ಎಲ್ಲರಿಗೂ ಗೊತ್ತು. ಕೆಲ ಶಾಸಕರನ್ನು ಮುಂಬೈಗೆ ಕಳುಹಿಸಿಕೊಟ್ಟವರು ಯಾರು? ಬಿಜೆಪಿ ಸರ್ಕಾರ ಆಡಳಿತಕ್ಕೆ ಬರಲು ಕಾರಣ ಯಾರು? ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಪ್ರಯಾಣ; ಕಾಂಗ್ರೆಸ್​​ ಘೋಷಣೆಗೆ ಸಿಎಂ ಬೊಮ್ಮಾಯಿ ತಿರುಗೇಟು

ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್, ಇದೀಗ ಜೆಡಿಎಸ್ ವಿರುದ್ಧ ತಿರುಗಿಬಿದ್ದು ಜೆಡಿಎಸ್ ಗೆದ್ದ ಎತ್ತಿನ ಬಾಲ ಹಿಡಿಯುವ ಪಕ್ಷ ಎಂಬಿತ್ಯಾದಿಯಾಗಿ ಜರಿಯುತ್ತಿದ್ದರೆ, ಇತ್ತ ಬಿಜೆಪಿ, ಜೆಡಿಎಸ್​ಗೆ ಹಾಕಿದ ವೋಟ್ ಅದು ಕಾಂಗ್ರೆಸ್​ಗೆ ಹಾಕಿದಂತೆ, ಫಿಲಿತಾಂಶದ ನಂತರ ಅವರು ಒಟ್ಟು ಸೇರುತ್ತಾರೆ ಎಂದು ಟೀಕಿಸುತ್ತಿದೆ. ಈ ವಿಚಾರವಾಗಿ ದೇವೇಗೌಡರು ತಿರುಗೇಟು ನೀಡಿದ್ದಾರೆ.

ಮೊಯಿದ್ದೀನ್ ಬಾವಾಗೆ ವೈಯಕ್ತಿಕ ದ್ವೇಷದಿಂದ ಕಾಂಗ್ರೆಸ್ ಟಿಕೇಟ್ ಕೊಟ್ಟಿಲ್ಲ: ದೇವೇಗೌಡ

ಸುರತ್ಕಲ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಮೊಯಿದ್ದೀನ್ ಬಾವರಿಗೆ ದುರುದ್ದೇಶದಿಂದ ಕಾಂಗ್ರೆಸ್​ನಲ್ಲಿ ಸೀಟು ತಪ್ಪಿಸಲಾಯಿತು. ವಿಧಾನಸಭೆಗೆ ಬರಬಾರದು ಎಂದು ವೈಯಕ್ತಿಕ ದ್ವೇಷದಿಂದ ಟಿಕೇಟ್ ಕೊಟ್ಟಿಲ್ಲ. ರಾಜಕೀಯವಾಗಿ ಬೀದಿ ಪಾಲು ಮಾಡಲು ಈ ಹುನ್ನಾರ ಮಾಡಲಾಗಿದೆ. ಆದರೆ ಬಾವ ಅವರ ಕೆಲಸವನ್ನು ಗುರುತಿಸಿ ಉತ್ತರದಲ್ಲಿ ಅವರಿಗೆ ಟಿಕೆಟ್ ನೀಡಿದ್ದೇವೆ. ಅವರಿಗೆ ಆದ ಅನ್ಯಾಯ ಸರಿಪಡಿಸಲು ನಮ್ಮ ಪಕ್ಷವಿದೆ. ಎಲ್ಲಾ ಸಮೀಕ್ಷೆಗಳು ಬಾವ ಪರವಾಗಿ ಇದೆ ಎಂದರು.

ಇಡೀ ಹಿಂದೂಸ್ತಾನದಲ್ಲಿ ರೈತರ ಸಾಲ ಮನ್ನಾ ಮಾಡಿದ ಏಕೈಕ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದು ಹೇಳಿದ ದೇವೇಗೌಡರು, ರಾತ್ರಿ ಎರಡು ಗಂಟೆಯವರೆಗೂ ಪ್ರಚಾರ ಮಾಡುತ್ತಿರುವುದಾಗಿ ಹೇಳಿದ್ದಾರೆ. ನಮ್ಮ ವಿಚಾರವನ್ನು ಮನೆ ಮನೆಗೆ ತಲುಪಿಸಿದ್ದೇವೆ. ಈ ಹಿಂದೆ ಇದ್ದಿದ್ದಕ್ಕೂ ಈಗ ಇರುವುದಕ್ಕೂ ವ್ಯತ್ಯಾಸ ಇದೆ. ಮೇ 13 ರಂದು ಕುಮಾರಣ್ಣನ ಸರ್ಕಾರ ಬರಲಿದೆ ಎಂದರು.

ಮೋದಿ ಬಗ್ಗೆ ದೇವೇಗೌಡ ಸಾಫ್ಟ್​ಕಾರ್ನರ್

ಕಳೆದ ಬಾರಿ ಗುಜರಾತ್​ಗೆ ಆಹ್ವಾನಿಸಿದಾಗ ಬಹುಮತದ ಸರ್ಕಾರ ಬಂದರೆ ರಾಜೀನಾಮೆ ಕೊಡುತ್ತೇನೆ ಅಂತ ಮೋದಿಗೆ ಹೇಳಿದ್ದೆ. ಅದರಂತೆ ರಾಜೀನಾಮೆ ಕೊಡಲು ಹೋದಾಗ ಮೋದಿ ತಿರಸ್ಕರಿಸಿ ನಿಮ್ಮ ಸೇವೆ ಅಗತ್ಯ ಇದೆ ಅಂತಾ ಹೇಳಿದ್ದರು. ಹೀಗಾಗಿ ಮೋದಿಯವರ ಬಗ್ಗೆ ವ್ಯಕ್ತಿಗತವಾಗಿ ನಾನು ಟೀಕೆ ಮಾಡಲ್ಲ. ಅವರ ಹೇಳಿಕೆಗೆ ನಾನು ಟೀಕೆ ಮಾಡುವುದಿಲ್ಲ. ಅವರ ಬಗ್ಗೆ ನಾನು ಲಘುವಾಗಿ ಮತನಾಡುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಗೆ ಮಾತನಾಡುವ ಸ್ವಾತಂತ್ರ್ಯ ಇದೆ. ಮೋದಿ ಸ್ವಾತಂತ್ರ್ಯವನ್ನು ನಾನು ಕಿತ್ತುಕೊಳ್ಳುವುದಿಲ್ಲ ಎಂದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:35 pm, Mon, 1 May 23