ಪದ್ಮನಾಭನಗರ ಕ್ಷೇತ್ರದಲ್ಲಿ ಅಖಾಡಕ್ಕಿಳಿದ ಹೆಚ್​ಡಿ ದೇವೇಗೌಡ, ಜೆಡಿಎಸ್ ಅಭ್ಯರ್ಥಿ ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಕರೆ

|

Updated on: Apr 23, 2023 | 4:21 PM

ಪದ್ಮನಾಭನಗರದಲ್ಲಿ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ವಿರುದ್ಧ ಪ್ರಚಾರಕ್ಕೆ ಇಳಿದ ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ ಅವರು, ಪದ್ಮನಾಭನಗರದ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ನಿವಾಸದಲ್ಲಿ ಸಭೆ ನಡೆಸಿದ್ದು, ಕ್ಷೇತ್ರದಲ್ಲಿ 2-3 ದಿನ ಪ್ರಚಾರ ಮಾಡಲು ನಿರ್ಧಾರಿಸಿದ್ದಾರೆ.

ಬೆಂಗಳೂರು: ಯಾವುದೇ ರಾಷ್ಟ್ರ ನಾಯಕರು ಕರ್ನಾಟಕದಲ್ಲಿ ಪ್ರಚಾರ ನಡೆಸಿದರೂ ನಮ್ಮ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಹೆಚ್​.ಡಿ.ದೇವೇಗೌಡ (HD Deve Gowda) ಹೇಳಿದ್ದಾರೆ. ಪದ್ಮನಾಭನಗರದಲ್ಲಿ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ (R Ashok) ವಿರುದ್ಧ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗುತ್ತಿರುವ ಜೆಡಿಎಸ್ ಅಭ್ಯರ್ಥಿ ಬಂಜಾರಪಾಳ್ಯ ಮಂಜುನಾಥ್​ಗೆ (Banjarapalya Manjunath) ಸಾಥ್ ನೀಡಲು ದಳಪತಿ ಅಖಾಡಕ್ಕಿಳಿದಿದ್ದಾರೆ. ಪದ್ಮನಾಭನಗರದಲ್ಲಿರುವ ಮಂಜುನಾಥ್ ನಿವಾಸದಲ್ಲಿ ಸಭೆ ನಡೆಸಿದ ಅವರು ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಸೂಚಿಸಿದರಲ್ಲದೆ, ಕ್ಷೇತ್ರದಲ್ಲಿ 2-3 ದಿನ ಪ್ರಚಾರ ಮಾಡಲು ನಿರ್ಧಾರಿಸಿದ್ದಾರೆ. ಇದೇ ವೇಳೆ ಪ್ರಚಾರ ವಾಹನಗಳಿಗೆ ಚಾಲನೆಯೂ ನೀಡಿದರು.

ನಂತರ ಮಾತನಾಡಿದ ಅವರು, ಬೀದರ್​ಗೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಬಂದಿದ್ದಾರೆ. ಯಾರು ಬೇಕಾದರೂ ಬಂದು ಪ್ರಚಾರ ಮಾಡಲಿ. ನಾವು ನಮ್ಮ ಪ್ರಚಾರ ಮಾಡುತ್ತೇವೆ. ಕಳೆದ 40 ವರ್ಷಗಳಿಂದ ನಾನು ಪದ್ಮನಾಭನಗರದಲ್ಲೇ ಇದ್ದೇನೆ. ಹಾಸನದಲ್ಲಿ ಮತ ಹಾಕಿದರೂ ಪದ್ಮನಾಭನಗರದಲ್ಲೇ ಇದ್ದೇನೆ, ವಿವಿಧ ಸಮುದಾಯಗಳ ಅಭ್ಯರ್ಥಿಗಳು ಬಂದು ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡಿ ಗೆಲ್ಲಿಸಿಕೊಂಡು ಬರುತ್ತೇವೆ ಅಂತ ಹೇಳಿದ್ದರು. ಅದಕ್ಕಾಗಿ ಬಂಜಾರಪಾಳ್ಯ ಮಂಜುನಾಥ್‌ಗೆ ಟಿಕೆಟ್ ಕೊಟ್ಟಿದ್ದೇವೆ. ಬಂಜಾರಪಾಳ್ಯ ಮಂಜುನಾಥ್ ಉತ್ತಮ‌ ಅಭ್ಯರ್ಥಿ ಎಂದರು.

ಇದನ್ನೂ ಓದಿ: ಮಂಡ್ಯ ಜಿಲ್ಲೆ ಜೆಡಿಎಸ್​ನ ಭದ್ರಕೋಟೆ ಅನ್ನೋದು ಹಾಸ್ಯಾಸ್ಪದ: ಸಂಸದೆ ಸುಮಲತಾ

ನಮ್ಮ ಕೊಡುಗೆ ಪುಸ್ತಕದಲ್ಲಿ ಅಡಕವಾಗಿದೆ, ಕಾಂಗ್ರೆಸ್, ಬಿಜೆಪಿ ಕೊಡುಗೆ ಏನು?: ದೇವೇಗೌಡ

ಇಡೀ ರಾಜ್ಯದಲ್ಲಿ ನಾನು ಮಾಡಿರುವ ಕೆಲಸಗಳ ಬಗ್ಗೆ ಜನರ ಮುಂದೆ ಹೋಗಿ ಹೇಳುವ ನೈತಿಕ ಶಕ್ತಿ ನನಗೆ ಇದೆ ಎಂದು ಹೇಳಿದ ದೇವೇಗೌಡರು, ರಾಯಚೂರು ಗುಲ್ಬರ್ಗ ಯಾದಗಿರಿ ಬಾಗಲಕೋಟೆ ಈ ಭಾಗಕ್ಕೆ ನೀರಾವರಿಯಲ್ಲಿ ದೇವೇಗೌಡರ ಕೊಡುಗೆ ಅಪಾರ ಎಂದು ಪುಸ್ತಕದಲ್ಲಿ ಬರುವಯಲಾಗಿದೆ. ನನ್ನ ಹೆಸರು ಇದ್ದರೆಷ್ಟು ಹೋದರೆಷ್ಟು ಪುಸ್ತಕದಲ್ಲಿರುವ ವಾಸ್ತವಂಶ ಮಾತ್ರ ಯಾರು ಸುಟ್ಟು ಹಾಕಲು ಆಗುವುದಿಲ್ಲ ಎಂದು ಹೇಳಿ ಕಾಂಗ್ರೆಸ್ ಹಾಗೂ ಬಿಜೆಪಿ ಕೊಡುಗೆ ಏನು ಎಂದು ಪ್ರಶ್ನಿಸಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:46 pm, Sun, 23 April 23