Karnataka Polls: ನನ್ನ ಹೆಣ ಕೂಡ ಬಿಜೆಪಿ ಕಚೇರಿ ಮುಂದೆ ಹೋಗಲ್ಲ; ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಲಕ್ಷ್ಮಣ ಸವದಿ

|

Updated on: Apr 14, 2023 | 5:03 PM

ಅಥಣಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಕೈತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಬೆಂಗಳೂರು: ನನ್ನ ಹೆಣ ಕೂಡ ಬಿಜೆಪಿ ಕಚೇರಿ ಮುಂದೆ ಹೋಗಲ್ಲ. ರಾಹುಲ್‌ ಗಾಂಧಿರನ್ನು ಭೇಟಿಯಾಗುವ ಅಗತ್ಯವಿಲ್ಲ. ನಮ್ಮ ಕ್ಷೇತ್ರದಲ್ಲಿ ಕೆಲಸ ಮಾಡಿಕೊಂಡು ಇರುತ್ತೇನೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ (Laxman Savadi) ಸವದಿ ಹೇಳಿದರು. ಅಥಣಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಬಳಿಕ ಮಾತನಾಡಿ ಅವರು, ಬಿಜೆಪಿ ಕೊಟ್ಟ ಮಾತಿನಂತೆ ನಡೆಯದಿದ್ದಾಗ ಪಕ್ಷ ತ್ಯಜಿಸುತ್ತಿದ್ದೇನೆ. ಬೆಳಗಾವಿ ಜಿಲ್ಲೆ ಅಥಣಿ ಕ್ಷೇತ್ರದ ಟಿಕೆಟ್​ ನೀಡುವಂತೆ ಕೇಳಿದ್ದೇನೆ. ಪಕ್ಷ ಅಧಿಕಾರಕ್ಕೆ ಬಂದ ನಂತರ ಅಥಣಿ ಕ್ಷೇತ್ರಕ್ಕೆ ಯೋಜನೆ ರೂಪಿಸುತ್ತೇನೆ. ಅಥಣಿ ಕ್ಷೇತ್ರದ ನೀರಾವರಿ ಯೋಜನೆ ಪೂರ್ಣಗೊಳಿಸಲು ಮನವಿ ಮಾಡಿದ್ದೇನೆ ಎಂದು ಹೇಳಿದರು. ಇಂದು ಸಂಜೆ ಕಾಂಗ್ರೆಸ್​ ಸೇರ್ಪಡೆ ಆಗಲಿರುವ ಲಕ್ಷ್ಮಣ ಸವದಿ ಬಿಜೆಪಿ ಉಪಾಧ್ಯಕ್ಷ ಸ್ಥಾನ, ಪಕ್ಷದ ಕೋರ್​ ಕಮಿಟಿ ಸದಸ್ಯ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದಾರೆ.

ನನ್ನ ಕ್ಷೇತ್ರದ ಕಾರ್ಯಕರ್ತರು, ಬೆಂಬಲಿಗರ ಅನುಮತಿ ಪಡೆದಿದ್ದೇನೆ. ಇಂದು ಸಂಜೆ 4.30ಕ್ಕೆ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇನೆ. ನಾನು ಬೆಳಗಾವಿ ಜಿಲ್ಲೆಗೆ ಸೀಮಿತವಾಗಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿಲ್ಲ. ಇಡೀ ರಾಜ್ಯ ಸುತ್ತಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ಶಕ್ತಿಮೀರಿ ಪ್ರಯತ್ನ ಮಾಡುವೆ. ರಾಜ್ಯದ ಇತರೆ ಭಾಗಗಳಲ್ಲಿ ನನ್ನನ್ನು ಬಳಸಿಕೊಳ್ಳುವುದಾಗಿ ಹೇಳಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರ ಹೇಳಿಕೆಗೆ ಸಮ್ಮತಿ ಸೂಚಿಸಿದ್ದೇನೆ ಎಂದರು.

ಇದನ್ನೂ ಓದಿ: Karnataka Assembly Election 2023: ಎಂಎಲ್​ಸಿ ಲಕ್ಷ್ಮಣ ಸವದಿ ಕಾಂಗ್ರೆಸ್​ ಸೇರುವುದು ಪಕ್ಕಾ: ಡಿಕೆ ಶಿವಕುಮಾರ್​

ಆಪರೇಷನ್​ ಕಮಲದಿಂದ ಕೈತಪ್ಪಿದ ಟಿಕೆಟ್​

ಕಳೆದ 20 ವರ್ಷಗಳಿಂದ ಬಿಜೆಪಿ ಶಿಸ್ತಿನ ಸಿಪಾಯಿಯಾಗಿ ದುಡಿದಿದ್ದೇನೆ. 2018ರ ಚುನಾವಣೆಯಲ್ಲಿ ಅಲ್ಪಮತಗಳ ಅಂತರದಿಂದ ಸೋತಿದ್ದೆ. ಬದಲಾದ ಸನ್ನಿವೇಶದಲ್ಲಿ ಮಹೇಶ್ ಕುಮಟಳ್ಳಿ ಬಿಜೆಪಿ ಸೇರಿದರು. ಆಪರೇಷನ್​ ಕಮಲದಿಂದ ಮಹೇಶ್ ಕುಮಟಳ್ಳಿ ಬಿಜೆಪಿ ಸೇರಿದ್ದರು. ಉಪ ಚುನಾವಣೆಯಲ್ಲಿ ಮಹೇಶ್​ ಕುಮಟಳ್ಳಿ ಅವರಿಗೆ ಬಿಜೆಪಿಯವರು ಟಿಕೆಟ್​ ಕೊಟ್ಟರು. ಈ ವೇಳೆ ಮಹೇಶ್ ಕುಮಟಳ್ಳಿ ಗೆಲ್ಲಿಸುವಂತೆ ವರಿಷ್ಠರು ಸೂಚಿಸಿದ್ದರು ಎಂದು ತಿಳಿಸಿದರು.

ಇದನ್ನೂ ಓದಿ: Karnataka Assembly Elections 2023: ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನಿರ್ಧಾರ ಸ್ವಾರ್ಥದಿಂದ ಕೂಡಿದೆ: ಅರುಣ್ ಸಿಂಗ್ ವಾಗ್ದಾಳಿ

2023ರ ಸಾರ್ವತ್ರಿಕ ಚುನಾವಣೆಯಲ್ಲಿ ಟಿಕೆಟ್​ ನೀಡುವುದಾಗಿ ಹೇಳಿದ್ದರು. ಚುನಾವಣೆಯಲ್ಲಿ ಸೋತಿದ್ದ ನನ್ನನ್ನು ಪರಿಷತ್ ಸದಸ್ಯನಾಗಿ ಮಾಡಿದ್ದರು. ನಾನು ಡಿಸಿಎಂ ಹುದ್ದೆ ಕೇಳಿರಲಿಲ್ಲ ಕೊಟ್ಟರು, ಮತ್ತೆ ತೆಗೆದಿದ್ದು ಯಾಕೆ? ಡಿಸಿಎಂ ಹುದ್ದೆಯಿಂದ ತೆಗೆದಿದ್ದರಿಂದ ನನಗೆ ಅವಮಾನ ಆಗಲಿಲ್ಲವೇ? ಕಾಂಗ್ರೆಸ್ ಸೇರಲು ನಾನು ಯಾವುದೇ ಷರತ್ತುಗಳನ್ನು ವಿಧಿಸಲಿಲ್ಲ. ನನಗೆ ಪುತ್ರ ವ್ಯಾಮೋಹವಿಲ್ಲ, ಅವನು ಸ್ಪರ್ಧಿಸುವುದಾಗಿ ಹೇಳಿಲ್ಲ ಎಂದರು.

ಲಕ್ಷ್ಮಣ ಸವದಿ ವಿರುದ್ಧ ಅರುಣ್ ಸಿಂಗ್​ ವಾಗ್ದಾಳಿ 

ರಾಜ್ಯ ಬಿಜೆಪಿಉಸ್ತುವಾರಿ ಅರುಣ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ಯಾರೋ ನಾಲ್ಕು ಜನ ಪಕ್ಷ ಬಿಟ್ಟು ಹೋದರೆ ಏನೂ ನಷ್ಟ ಆಗಲ್ಲ. ಆದರೆ ಹೋಗುವವರು ದುಡುಕಿನ ನಿರ್ಧಾರ ತೆಗೆದುಕೊಂಡು ಹೋಗಿದ್ದಾರೆ. ಅಂಥವರಿಗೆ ನಮ್ಮ ಪಕ್ಷದ ಬಾಗಿಲು ಶಾಶ್ವತವಾಗಿ ಬಂದ್ ಆಗಲಿದೆ. ಬಿಟ್ಟು ಹೋದವರನ್ನು ಮತ್ತೆ ಸೇರಿಸಿಕೊಳ್ಳಲು 20 ವರ್ಷವಾಗಬಹುದು. ಎಂಎಲ್​ಸಿ ಲಕ್ಷ್ಮಣ ಸವದಿಯವರು 10 ವರ್ಷವಾದರೂ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಅವರ ಮುಖ ನೋಡುತ್ತಾರೋ ಇಲ್ವೋ ಗೊತ್ತಿಲ್ಲ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರ ನಿರ್ಧಾರ ಸ್ವಾರ್ಥದಿಂದ ಕೂಡಿದೆ ಎಂದು ವಾಗ್ದಾಳಿ ಮಾಡಿದರು.  ​

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:32 pm, Fri, 14 April 23