AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಚಾಚಾ ಬಂದಿದ್ದಾರೆ, ಮಾಮನನ್ನು ನಂಬಬೇಡಿ’: ಮಧ್ಯಪ್ರದೇಶ ಸಿಎಂ ಶಿವರಾಜ್ ಚೌಹಾಣ್ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ

ಮಧ್ಯ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ, ಆಪ್ ಸರ್ಕಾರವು ತಮ್ಮ ಆಯ್ಕೆಯ ಸ್ಥಳದಲ್ಲಿ ತೀರ್ಥಯಾತ್ರೆಗೆ ಹೋಗಲು ಬಯಸುವ ವೃದ್ಧರಿಗಾಗಿ "ತೀರ್ಥ ದರ್ಶನ ಯೋಜನೆ"ಯನ್ನು ಜಾರಿಗೆ ತರಲಿದೆ. ಕರ್ತವ್ಯದ ವೇಳೆ ಸಾವಿಗೀಡಾಜ ಸೈನಿಕರು ಮತ್ತು ಕಾನ್‌ಸ್ಟೆಬಲ್‌ಗಳಿಗೆ ₹1 ಕೋಟಿ ಗೌರವಧನ ನೀಡುವುದಾಗಿ ಕೇಜ್ರಿವಾಲ್ ಭರವಸೆ ನೀಡಿದರು.

ನಿಮ್ಮ ಚಾಚಾ ಬಂದಿದ್ದಾರೆ, ಮಾಮನನ್ನು ನಂಬಬೇಡಿ’: ಮಧ್ಯಪ್ರದೇಶ ಸಿಎಂ ಶಿವರಾಜ್ ಚೌಹಾಣ್ ವಿರುದ್ಧ ಕೇಜ್ರಿವಾಲ್ ವಾಗ್ದಾಳಿ
ಅರವಿಂದ್ ಕೇಜ್ರಿವಾಲ್
Follow us
ರಶ್ಮಿ ಕಲ್ಲಕಟ್ಟ
|

Updated on: Aug 20, 2023 | 7:44 PM

ಭೋಪಾಲ್ ಆಗಸ್ಟ್ 20: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ (Arvind Kejriwal) ಅವರು ಭಾನುವಾರ ಮಧ್ಯಪ್ರದೇಶದ (Madhya Pradesh) ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಚೌಹಾಣ್ ಅವರನ್ನು ಮಾಮ ಎಂದು ಕರೆದ ಕೇಜ್ರಿವಾಲ್, ಮಧ್ಯಪ್ರದೇಶದಲ್ಲಿ ‘ಮಾಮ’ ಇದ್ದಾರೆ ಎಂದು ನನಗೆ ಗೊತ್ತಾಯಿತು. ಅವರು ತಮ್ಮ ಸೋದರಳಿಯ ಮತ್ತು ಸೊಸೆಯಂದಿರನ್ನು ಮೋಸ ಮಾಡಿದ್ದಾರೆ, ಅವರನ್ನು ನಂಬಬೇಡಿ. ಈಗ ನಿಮ್ಮ ‘ಚಾಚಾ’ ಬಂದಿದ್ದಾರೆ.. ನಿಮ್ಮ ‘ಮಾಮ’ನನ್ನು ನಂಬಬೇಡಿ, ನಿಮ್ಮ ‘ಚಾಚಾ’ನಲ್ಲಿ ನಂಬಿಕೆಯನ್ನು ತೋರಿಸಿ. ನಾನು ಶಾಲೆಗಳು, ಕಾಲೇಜುಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸುತ್ತೇನೆ ಮತ್ತು ಮಧ್ಯಪ್ರದೇಶದ ಯುವಕರಿಗೆ ಉದ್ಯೋಗಗಳನ್ನು ಒದಗಿಸುತ್ತೇನೆ ಎಂದಿದ್ದಾರೆ.

ಆಮ್ ಆದ್ಮಿ ಪಕ್ಷದ ಸಂಚಾಲಕರಾದ ದೆಹಲಿ ಸಿಎಂ ಕೇದ್ರಿವಾಲ್, ಮಧ್ಯಪ್ರದೇಶದಲ್ಲಿ ‘ಕೇಜ್ರಿವಾಲ್ ಕಿ ಗ್ಯಾರಂಟಿ’ಯನ್ನೂ ಘೋಷಿಸಿದ್ದಾರೆ. ರಾಜ್ಯದಲ್ಲಿ 24 ಗಂಟೆ ವಿದ್ಯುತ್ ನೀಡುವುದಾಗಿ ನಾನು ಭರವಸೆ ನೀಡುತ್ತೇನೆ. ರಾಜ್ಯದ ಜನರು ಕಳೆದ 75 ವರ್ಷಗಳಿಂದ ಈ ಎರಡು ಪಕ್ಷಗಳನ್ನು (ಕಾಂಗ್ರೆಸ್ ಮತ್ತು ಬಿಜೆಪಿ)ಯನ್ನು ನೋಡಿದ್ದಾರೆ. ಆದರೆ ಅವುಗಳಲ್ಲಿ ಯಾವುದೂ ರಾಜ್ಯದಲ್ಲಿ ವಿದ್ಯುತ್ ನೀಡಲಿಲ್ಲ. ನಿಮಗೆ ವಿದ್ಯುತ್ ಪೂರೈಕೆ ಬೇಕಿದ್ದರೆ ಎಎಪಿಗೆ ಮತ ನೀಡಿ. ವಿದ್ಯುತ್ ಕಡಿತ ಬೇಕಾದರೆ ಈ ಎರಡು ಪಕ್ಷಗಳಿಗೆ ಮತ ನೀಡಿ”ಎಂದು ಅವರು ಸತ್ನಾದಲ್ಲಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೊಗೆಯಲಿದೆ. ಪಡಿತರ ಚೀಟಿ ಅಥವಾ ಪರವಾನಗಿ ಪಡೆಯಲು ಜನರು ಸರ್ಕಾರಿ ಕಚೇರಿಗಳನ್ನು ಸುತ್ತುವ ಅಗತ್ಯವಿಲ್ಲ. ನಾವು ಅಧಿಕಾರಕ್ಕೇರಿದರೆ ದೆಹಲಿ ಮತ್ತು ಪಂಜಾಬ್‌ನಲ್ಲಿರುವಂತೆ ಈ ಸೌಲಭ್ಯಗಳನ್ನು ಒದಗಿಸಲು ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳು ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಮಥುರಾದಲ್ಲಿ 5 ವರ್ಷದ ಬಾಲಕನನ್ನು ನೆಲಕ್ಕೆ ಎಸೆದು ಕೊಂದ ವೃದ್ಧ; ವಿಡಿಯೊ ವೈರಲ್

ಮಧ್ಯ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೆ, ಆಪ್ ಸರ್ಕಾರವು ತಮ್ಮ ಆಯ್ಕೆಯ ಸ್ಥಳದಲ್ಲಿ ತೀರ್ಥಯಾತ್ರೆಗೆ ಹೋಗಲು ಬಯಸುವ ವೃದ್ಧರಿಗಾಗಿ “ತೀರ್ಥ ದರ್ಶನ ಯೋಜನೆ”ಯನ್ನು ಜಾರಿಗೆ ತರಲಿದೆ. ಕರ್ತವ್ಯದ ವೇಳೆ ಸಾವಿಗೀಡಾಜ ಸೈನಿಕರು ಮತ್ತು ಕಾನ್‌ಸ್ಟೆಬಲ್‌ಗಳಿಗೆ ₹1 ಕೋಟಿ ಗೌರವಧನ ನೀಡುವುದಾಗಿ ಕೇಜ್ರಿವಾಲ್ ಭರವಸೆ ನೀಡಿದರು. ವಿವರವಾದ ಯೋಜನೆ ಸಿದ್ಧಪಡಿಸಿದ ನಂತರ ರೈತರು ಮತ್ತು ಗಿರಿಜನರಿಗೆ ಪ್ರತ್ಯೇಕ ಘೋಷಣೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಈ ವರ್ಷದ ಕೊನೆಯಲ್ಲಿ ಮಧ್ಯಪ್ರದೇಶ ಚುನಾವಣೆ ನಡೆಯಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ