ಬೆಂಗಳೂರು ನೀರಿನ ಸಮಸ್ಯೆ: ಕನ್ನಡದಲ್ಲಿ ಟ್ವೀಟ್​ ಮಾಡಿ ಪರಿಹಾರ ತಿಳಿಸಿದ ಮೆಗಾ ಸ್ಟಾರ್​ ಚಿರಂಜೀವಿ

|

Updated on: Mar 26, 2024 | 10:49 PM

ಟಾಲಿವುಡ್​ನ ಹಿರಿಯ ನಟ ಮೆಗಾ ಸ್ಟಾರ್​ ಚಿರಂಜೀವಿ ಅವರು ಬೆಂಗಳೂರಿನ ನೀರಿನ ಸಮಸ್ಯೆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ. ಕನ್ನಡದಲ್ಲೇ ಅವರು ಇದನ್ನು ಬರೆದಿರುವುದು ವಿಶೇಷ. ಬೆಂಗಳೂರಿನ ತಮ್ಮ ಫಾರ್ಮ್​ ಹೌಸ್​ನಲ್ಲಿ ಅಳವಡಿಸಿದ ಕ್ರಮವನ್ನು ಅವರು ಜನರಿಗೆ ತಿಳಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಬೆಂಗಳೂರು ನೀರಿನ ಸಮಸ್ಯೆ: ಕನ್ನಡದಲ್ಲಿ ಟ್ವೀಟ್​ ಮಾಡಿ ಪರಿಹಾರ ತಿಳಿಸಿದ ಮೆಗಾ ಸ್ಟಾರ್​ ಚಿರಂಜೀವಿ
ಚಿರಂಜೀವಿ
Follow us on

ಕಳೆದ ವರ್ಷ ಮಳೆಗಾಲದಲ್ಲಿ ಸರಿಯಾಗಿ ಮಳೆಯಾಗದ ಕಾರಣ ಈಗ ನೀರಿನ ಸಮಸ್ಯೆ ಎದುರಾಗಿದೆ. ಕರ್ನಾಟಕದಲ್ಲಿನ ಜಲಾಶಯಗಳ ನೀರು ಖಾಲಿ ಆಗುತ್ತಿವೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ತೊಂದರೆ (Bengaluru Water Crisis) ಆಗಿದೆ. ಇಂಥ ಸಂದರ್ಭದಲ್ಲಿ ನೀರು ಪೋಲು ಮಾಡುವವರಿಗೆ ದಂಡ ಹಾಕಲಾಗುತ್ತಿದೆ. ಸಿಲಿಕಾನ್​ ಸಿಟಿಯ ಹಲವು ಕಂಪನಿಗಳು ಉದ್ಯೋಗಿಗಳಿಗೆ ವರ್ಕ್​ ಫ್ರಂ ಹೋಮ್​ ಅವಕಾಶ ನೀಡುವ ಮೂಲಕ ನೀರಿನ ಸಮಸ್ಯೆ ಎದುರಿಸಲು ಪ್ರಯತ್ನಿಸುತ್ತಿವೆ. ಒಟ್ಟಿನಲ್ಲಿ ಈ ಸಮಸ್ಯೆ ದೇಶಾದ್ಯಂತ ಸುದ್ದಿ ಆಗುತ್ತಿದೆ. ಈಗ ತೆಲುಗು ಚಿತ್ರರಂಗದ ಜನಪ್ರಿಯ ನಟ ‘ಮೆಗಾ ಸ್ಟಾರ್’ ಚಿರಂಜೀವಿ (Mega Star Chiranjeevi) ಅವರು ಈ ಸಮಸ್ಯೆಗೆ ಪರಿಹಾರ ಸೂಚಿಸಿದ್ದಾರೆ. ವಿಶೇಷ ಏನೆಂದರೆ ಅವರು ಕನ್ನಡದಲ್ಲಿಯೇ ಪೋಸ್ಟ್​ ಮಾಡುವ ಮೂಲಕ ಕಾಳಜಿ ವ್ಯಕ್ತಪಡಿಸಿದ್ದಾರೆ.

‘ಈ ಪೋಸ್ಟ್ ಸ್ವಲ್ಪ ಉದ್ದವಾಗಿದ್ದರೂ, ಪಾಯಿಂಟ್ ಚಿಕ್ಕದಾದರೂ ಬಹಳ ಮುಖ್ಯ’ ಎಂದು ಮೆಗಾ ಸ್ಟಾರ್​ ಚಿರಂಜೀವಿ ಅವರು ಬರಹ ಆರಂಭಿಸಿದ್ದಾರೆ. ‘ನಮಗೆಲ್ಲರಿಗೂ ತಿಳಿದಿರುವಂತೆ ನೀರು ಅತ್ಯಂತ ಅಮೂಲ್ಯವಾದ ವಸ್ತು. ನೀರಿನ ಕೊರತೆಯು ದೈನಂದಿನ ಜೀವನವನ್ನು ಕಷ್ಟಕರ ಆಗಿಸುತ್ತದೆ. ಇಂದು ಬೆಂಗಳೂರಿನಲ್ಲಿ ನೀರಿನ ಕೊರತೆ ಎದುರಾಗಬಹುದು. ನಾಳೆ ಎಲ್ಲಿ ಬೇಕಾದರೂ ಸಂಭವಿಸಬಹುದು. ಆದ್ದರಿಂದ ನೀರನ್ನು ಸಂರಕ್ಷಿಸಲು ಸಹಾಯ ಮಾಡುವ ಮನೆಗಳನ್ನು ನಿರ್ಮಿಸುವ ಅಗತ್ಯವನ್ನು ಒತ್ತಿಹೇಳಲು ನಾನು ಈ ಅವಕಾಶವನ್ನು ಬಳಸಲು ಬಯಸುತ್ತೇನೆ. ಬೆಂಗಳೂರಿನ ನನ್ನ ಫಾರ್ಮ್ ಹೌಸ್‌ಗಾಗಿ ನಾನು ಮಾಡಿದ್ದನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ’ ಎಂದು ಚಿರಂಜೀವಿ ಕೆಲವು ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನೀರಿನ ಸಮಸ್ಯೆ: ಈಜು ಕೊಳಕ್ಕೆ ಕುಡಿಯುವ ನೀರಿನ ಬಳಕೆಗೆ ನಿಷೇಧ

‘20-36 ಅಡಿ ಆಳದ ರೀಚಾರ್ಜ್ ಬಾವಿಗಳನ್ನು ಸೈಟ್‌ನಾದ್ಯಂತ ಆಯಕಟ್ಟಿನ ಬಿಂದುಗಳಲ್ಲಿ ಸ್ಥಾಪಿಸಲಾಗಿದ್ದು, ರೀಚಾರ್ಜ್ ಬಾವಿಗಳಿಗೆ ಮೇಲ್ಮೈ ನೀರಿನ ಹರಿವನ್ನು ನಿರ್ದೇಶಿಸಲು ಸಾಕಷ್ಟು ಇಳಿಜಾರುಗಳಿವೆ. ಪ್ರತಿಯೊಂದು ಬಾವಿಯು ಫಿಲ್ಟರ್ ವ್ಯವಸ್ಥೆಯನ್ನು ಹೊಂದಿದೆ. ವಿವಿಧ ಸಮುಚ್ಚಯಗಳೊಂದಿಗೆ ಒಂದು ಹೂಳು ಬಲೆ, ಅಂದರೆ ಕಲ್ಲಿನ ಗಾತ್ರಗಳು ಮತ್ತು ಮರಳು, ಪದರಗಳ ಮೂಲಕ ನೀರಿನ ಅಂಗೀಕಾರವನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ. ರೀಚಾರ್ಜ್ ಬಾವಿ – ರೀಚಾರ್ಜ್ ಪಿಟ್‌ಗೆ ಹೋಲಿಸಿದರೆ – ಹೆಚ್ಚು ನೀರನ್ನು ಸಂಗ್ರಹಿಸಬಹುದು ಮತ್ತು ಹೆಚ್ಚು ಆಳವಾದ ಜಲಚರಗಳನ್ನು ತಲುಪಲು ತಲಾಧಾರದಲ್ಲಿನ ಸರಂಧ್ರ ಪದರಗಳ ಮೂಲಕ ನೀರನ್ನು ನಿಧಾನವಾಗಿ ಹರಿಯುವಂತೆ ಮಾಡುತ್ತದೆ’ ಎಂದು ಚಿರಂಜೀವಿ ವಿವರಿಸಿದ್ದಾರೆ.

ಚಿರಂಜೀವಿ ಎಕ್ಸ್​ (ಟ್ವಿಟರ್​) ಪೋಸ್ಟ್​:

‘ನಾನು ಪರ್ಮಾಕಲ್ಚರ್ ತತ್ವಗಳನ್ನು ಸಹ ಜಾರಿಗೆ ತಂದಿದ್ದೇನೆ. ಪರ್ಮಾಕಲ್ಚರ್ ಪರಿಸರವನ್ನು ಪುನರುಜ್ಜೀವನಗೊಳಿಸುವ ವೃತ್ತಾಕಾರದ ತತ್ವದ ಮೇಲೆ ಕಾರ್ಯ ನಿರ್ವಹಿಸುತ್ತದೆ. ಅದನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಪರ್ಮಾಕಲ್ಚರ್‌ನ ಪ್ರಮುಖ ಫಲಿತಾಂಶವೆಂದರೆ ನೀರಿನ ಬೇಡಿಕೆಯಲ್ಲಿನ ಕಡಿತ. ಮಣ್ಣಿನಿಂದ ಬಾಷ್ಪೀಕರಣದ ನಷ್ಟವನ್ನು ಕಡಿಮೆ ಮಾಡುವ ತೋಟವನ್ನು ಬಳಸಿಕೊಂಡು ಸೂಕ್ತವಾದ ನೆಲದ ಹೊದಿಕೆಯೊಂದಿಗೆ ಸತ್ತ ಎಲೆಗಳು ಮತ್ತು ಮರದ ಚಿಪ್ಸ್ ಬಳಸಿ ಮಲ್ಚಿಂಗ್ ಮಾಡುವ ಮೂಲಕ ಇದನ್ನು ಸಾಧಿಸಲಾಗುತ್ತದೆ. ಈ ಕ್ರಮಗಳನ್ನು ಕೈಗೊಳ್ಳುವ ಮೂಲಕ ನಾವು ನೀರನ್ನು ಸಂರಕ್ಷಿಸಬಹುದು ಮತ್ತು ಮಳೆ ನೀರು ಕೊಯ್ಲು ಉತ್ತಮಗೊಳಿಸಬಹುದು ಮತ್ತು ಪರಿಸರ ಸ್ನೇಹಿ ಮನೆಗಳನ್ನು ನಿರ್ಮಿಸಬಹುದು. ಆ ದೃಶ್ಯಗಳನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ’ ಎಂದು ಚಿರಂಜೀವಿ ಅವರು ಬರಹ ಪೂರ್ಣಗೊಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.