Kalki 2898 AD: ‘ಕಲ್ಕಿ’ ಸಿನಿಮಾ ನೋಡುವ ಮುಂಚೆ ಈ ವಿಷಯಗಳನ್ನು ತಿಳಿದುಕೊಳ್ಳಿ

|

Updated on: Jun 26, 2024 | 11:41 AM

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ನಾಳೆ (ಜೂನ್ 26) ಬಿಡುಗಡೆ ಆಗುತ್ತಿದೆ. ಇದು ಮಾಮೂಲಿ ಕಮರ್ಶಿಯಲ್ ಸಿನಿಮಾದಂತಿಲ್ಲ ಎಂಬುದು ಟ್ರೈಲರ್​ನಿಂದ ತಿಳಿದು ಬರುತ್ತಿದೆ. ಸಿನಿಮಾ ನೋಡಲು ಹೊರಡುವ ಮುನ್ನ ಈ ಕೆಲವು ವಿಷಯಗಳನ್ನು ತಿಳಿದುಕೊಳ್ಳಿ, ಕತೆ ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ.

Kalki 2898 AD: ‘ಕಲ್ಕಿ’ ಸಿನಿಮಾ ನೋಡುವ ಮುಂಚೆ ಈ ವಿಷಯಗಳನ್ನು ತಿಳಿದುಕೊಳ್ಳಿ
ಕಲ್ಕಿ 2898 ಎಡಿ
Follow us on

ಪ್ರಭಾಸ್ (Prabhas) ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ನಾಳೆ (ಜೂನ್ 26) ಬಿಡುಗಡೆ ಆಗಲಿದೆ. ಸಿನಿಮಾದ ಟೀಸರ್, ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ‘ಕಲ್ಕಿ’ ಸಾಮಾನ್ಯ ಸಿನಿಮಾ ಅಲ್ಲ ಬದಲಿಗೆ ಕತೆ, ಮೇಕಿಂಗ್ ಎಲ್ಲದರಲ್ಲೂ ಬಹಳ ಭಿನ್ನವಾದ ಸಿನಿಮಾ ಎಂಬುದು ಈಗಾಗಲೇ ತಿಳಿದಿದೆ. ಸಾಮಾನ್ಯ ಕಮರ್ಶಿಯಲ್ ಸಿನಿಮಾಗಳಿಗೆ ಅಭ್ಯಾಸವಾಗಿ ಹೋಗಿರುವ ಪ್ರೇಕ್ಷಕನಿಗೆ ‘ಕಲ್ಕಿ’ ಸಿನಿಮಾ ನೋಡುವ ಮುಂಚೆ ತುಸು ತಯಾರಿ ಬೇಕೆನಿಸುತ್ತದೆ. ಮುಖ್ಯವಾಗಿ ಈ ಸಿನಿಮಾದ ಕತೆ ಮಹಾಭಾರತದ ಅಂತ್ಯದಲ್ಲಿ ಪ್ರಾರಂಭವಾಗಿ ಕಲಿಯುಗದ ಅಂತ್ಯದಲ್ಲಿ ಮುಗಿಯುತ್ತದೆ. ಹಾಗಾಗಿ ಕತೆಯ ಬಗ್ಗೆ ಪಾತ್ರಗಳ ಬಗ್ಗೆ ಸಣ್ಣ ಪರಿಚಯವಿದ್ದರೆ ಸಿನಿಮಾ ನೋಡುವಾಗ ಸುಲಭವಾಗಿ ಅರ್ಥವಾಗುತ್ತದೆ.

‘ಕಲ್ಕಿ’ ಸಿನಿಮಾದ ಕತೆ ಪ್ರಾರಂಭವಾಗುವುದು ಮಹಾಭಾರತ ಅಥವಾ ದ್ವಾಪರಯುಗ ಅಂತ್ಯವಾಗಿ ಕಲಿಯುಗ ಪ್ರಾರಂಭವಾದಾಗ. ಆದರೆ ಸಿನಿಮಾದ ಕತೆ ನಡೆಯುವುದು ಕಲಿಯುಗದ ಅಂತ್ಯದ ಘಟ್ಟದಲ್ಲಿ. ಅಂದರೆ ಮಾನವ ಇಡೀ ಭೂಮಿಯನ್ನು ಮರಳುಗಾಡನ್ನಾಗಿಸಿ ಯಂತ್ರಗಳ ಮೇಲೆ ಅವಲಂಭಿತವಾಗಿರುವ ಸನ್ನಿವೇಶದಲ್ಲಿ ಈ ಸಿನಿಮಾ ನಡೆಯುತ್ತದೆ. ‘ಕಾಂಪ್ಲೆಕ್ಸ್’ ಎಂಬ ಸ್ಥಳದಲ್ಲಿ ‘ಕಲ್ಕಿ’ ಸಿನಿಮಾದ ಕತೆ ನಡೆಯುತ್ತದೆ. ಭೂಮಿಯ ಮೇಲೆ ಬದುಕಲು ಯೋಗ್ಯವಾದ ಸ್ಥಳಗಳು ಕಡಿಮೆ ಆಗಿರುವ ಕಾರಣ ಮನುಷ್ಯರು ‘ಕಾಂಪ್ಲೆಕ್ಸ್’ಗಳಲ್ಲಿ ಬದುಕುತ್ತಿರುತ್ತಾರೆ.

ಕಾಂಪ್ಲೆಕ್ಸ್​ ಒಂದು ರೀತಿ ಸಾಮ್ರಾಜ್ಯವಿದ್ದಂತೆ, ಇಲ್ಲಿ ಎಲ್ಲವೂ ಲ್ಯಾಬ್​ಗಳಲ್ಲಿಯೇ ನಡೆಯುತ್ತದೆ. ಟ್ರೈಲರ್​ನಲ್ಲಿ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿರುವುದು ಕಾಣಬಹುದು ಅಸಲಿಗೆ ದೀಪಿಕಾ ಗರ್ಭಿಣಿ ಆಗಿರುವುದು ಲ್ಯಾಬ್​ನ ಪ್ರಯೋಗದ ಮೂಲಕ. ಲ್ಯಾಬ್​ನಲ್ಲಿನ ಪ್ರಯೋಗ ಪಶು ದೀಪಿಕಾ ಪಡುಕೋಣೆ. ಆಕೆಯನ್ನು ವಾಪಸ್ ಕಾಂಪ್ಲೆಕ್ಸ್​ಗೆ ಸೇರಿಸುವ ಕಾರ್ಯ ಭೈರವ ಅಂದರೆ ಪ್ರಭಾಸ್ ಪಾತ್ರಕ್ಕೆ ದೊರಕಿರುತ್ತದೆ. ಪ್ರಭಾಸ್ ‘ಕಲ್ಕಿ’ ಸಿನಿಮಾದಲ್ಲಿ ಬೌಂಟಿ ಹಂಟರ್, ಅಂದರೆ ಹಣಕ್ಕಾಗಿ ಸರ್ಕಾರ ಅಥವಾ ಪೊಲೀಸರಿಗೆ ನೆರವಾಗುವ, ಹಣಕ್ಕಾಗಿ ಯಾವುದೇ ಕೆಲಸ ಮಾಡುವ ವ್ಯಕ್ತಿ.

ಇದನ್ನೂ ಓದಿ:‘ಕಲ್ಕಿ’ ಸಿನಿಮಾ ಅವಧಿ ಎಷ್ಟು? ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆ? ಮೊದಲ ದಿನ ಗಳಿಸುವುದೆಷ್ಟು?

ಕಮಲ್ ಹಾಸನ್, ಕಾಂಪ್ಲೆಕ್ಸ್​ನ ಅನಭಿಶಿಕ್ತ ದೊರೆ. ಸಿನಿಮಾದಲ್ಲಿ ಕಮಲ್ ಹಾಸನ್ ಹೆಸರು ಯಸ್ಕಿನ್. ಪ್ರಯೋಗಗಳಿಂದಾಗಿ ಹಲವು ವರ್ಷಗಳ ಕಾಲ ಬದುಕಿರುವ ಹಾಗೂ ಇಡೀ ಭೂಮಿಯನ್ನು ತನ್ನ ಇಚ್ಛೆಯಂತೆ ಬದಲಾಯಿಸುವ ಗುರಿ ಹೊಂದಿರುವವನು. ಇದಕ್ಕಾಗಿಯೇ ಲ್ಯಾಬ್​ ಮೂಲಕ ಭಿನ್ನ ರೀತಿಯ ಮನುಷ್ಯರ ಸೃಷ್ಟಿಯಲ್ಲಿ ತೊಡಗಿದ್ದಾನೆ.

ಅಮಿತಾಬ್ ಬಚ್ಚನ್, ಈ ಸಿನಿಮಾದಲ್ಲಿ ಅಶ್ವತ್ಥಾಮನ ಪಾತ್ರದಲ್ಲಿ ನಟಿಸಿದ್ದಾರೆ. ಮಾನವ ಕುಲವನ್ನು ರಕ್ಷಿಸುವ ಹೊಣೆ ಅವರದ್ದು, ಹೀಗಾಗಿಯೇ ಕಾಂಪ್ಲೆಕ್ಸ್​ನ ಶಿಸ್ತು ಪಾಲಕರ ಪರವಾಗಿ ದೀಪಿಕಾ ಪಡುಕೋಣೆ ಪಾತ್ರವನ್ನು ಕೊಂಡೊಯ್ಯಲು ಬರುವ ಭೈರವನನ್ನು ಅಶ್ವತ್ಥಾಮ ಎದುರಿಸುತ್ತಾನೆ. ಇಬ್ಬರ ನಡುವೆ ಭರ್ಜರಿ ಯುದ್ಧವೇ ನಡೆಯುತ್ತದೆ. ಕಾಂಪ್ಲೆಕ್ಸ್​ನ ಶಿಸ್ತುಪಾಲಕರ ಪರವಾಗಿ ಕೆಲಸ ಮಾಡುವ ಭೈರವ (ಪ್ರಭಾಸ್)ನ ಮನಃ ಪರಿವರ್ತನೆ ಹೇಗಾಗುತ್ತದೆ, ಮನುಕುಲವನ್ನು ರಕ್ಷಿಸಲು ಹೇಗೆ ನೆರವಾಗುತ್ತಾನೆ ಎಂಬುದು ಸಿನಿಮಾದ ಕತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ