ಸರ್ಕಾರಿ ನಿಗಮದ ರಾಯಭಾರಿಯಾದ ಡಾಲಿ ಧನಂಜಯ್

|

Updated on: Nov 23, 2023 | 9:38 PM

Daali Dhananjay: ವಿಚಾರವಾದಿ ನಟ ಡಾಲಿ ಧನಂಜಯ್ ಚರ್ಮ ಕರಕುಶಲಕರ್ಮಿಗಳ ಏಳ್ಗೆಗಾಗಿ ಶ್ರಮಿಸುತ್ತಿರುವ ನಿಗಮದ ಜೊತೆ ಕೈಗೂಡಿಸಿದ್ದಾರೆ. ಇದೇ ಮೊದಲ ಬಾರಿಗೆ ಡಾಲಿ ಧನಂಜಯ್ ಸರ್ಕಾರಿ ನಿಗಮೊಂದರ ರಾಯಭಾರಿ ಆಗಿದ್ದಾರೆ.

ಸರ್ಕಾರಿ ನಿಗಮದ ರಾಯಭಾರಿಯಾದ ಡಾಲಿ ಧನಂಜಯ್
ಡಾಲಿ ಧನಂಜಯ್
Follow us on

ಅಭಿಮಾನಿಗಳಿಂದ ನಟ ರಾಕ್ಷಸ ಎಂದು ಕರೆಸಿಕೊಳ್ಳುವ ನಟ ಡಾಲಿ ಧನಂಜಯ್ (Daali Dhananjay), ತೆರೆಯ ಮೇಲೆ ಮಾಸ್ ಹೀರೋ ಆಗಿ, ಖಡಕ್ ವಿಲನ್ ಆಗಿ ಕಾಣಿಸಿಕೊಂಡಿರುವುದುಂಟು. ಆದರೆ ಡಾಲಿಯ ನಿಜ ವ್ಯಕ್ತಿತ್ವಕ್ಕೂ ಅವರು ತೆರೆಯ ಮೇಲೆ ಕಾಣಿಸಿಕೊಳ್ಳುವ ರೀತಿಗೂ ಅಜಗಜಾಂತರ ವ್ಯತ್ಯಾಸ. ನಿಜ ಜೀವನದಲ್ಲಿ ವಿಚಾರವಂತ ವ್ಯಕ್ತಿಯಾಗಿರುವ ಡಾಲಿ, ವಚನ ಸಾಹಿತ್ಯ ಮಾತ್ರವೇ ಅಲ್ಲದೆ ಪ್ರಗತಿಶೀಲ ಸಾಹಿತ್ಯದ ಪರಿಚಯ ಇರುವವರು. ಅಂಬೇಡ್ಕರ್ ವಾದದ ಬಗ್ಗೆ ಅಗೌರವ ಉಳ್ಳುವರು. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಸಹ ಮುನ್ನಲೆಗೆ ಬರಬೇಕೆಂಬ ಆಶಯ ಇಟ್ಟುಕೊಂಡವರು. ಇದೀಗ ಚರ್ಮ ಕುಶಲಕರ್ಮಿಗಳ ಕಲ್ಯಾಣಕ್ಕಾಗಿ ತಮ್ಮ ನೆರವಿನ ಹಸ್ತ ಚಾಚಿದ್ದಾರೆ ಡಾಲಿ.

ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ (ಲಿಡ್ಕರ್)ಕ್ಕೆ ಇದೇ ಮೊದಲ ಬಾರಿಗೆ ರಾಯಭಾರಿಯನ್ನು ಆಯ್ಕೆ ಮಾಡಲಾಗಿದ್ದು ಅದು ನಟ‌ರಾಕ್ಷಸ ಡಾಲಿ ಧನಂಜಯ್. ಲಿಡ್ಕರ್ ಎಂದು ಚುಟುಕಾಗಿ ಕರೆಯಲಾಗುವ ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ರಾಯಭಾರಿಯಾಗಿ ಅದರ ಪ್ರಚಾರ, ಪ್ರಸಾರಕ್ಕೆ ನೆರವು ನೀಡಲಿದ್ದಾರೆ. ಸ್ಯಾಂಡಲ್‌ವುಡ್ ನಟನಾಗಿ ನಿರ್ಮಾಪಕನಾಗಿ ಡಾಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ಸ್ಟಾರ್ ನಟ, ಹಾಗಿದ್ದರೂ ಸಹ ಚರ್ಮ ಕುಶಲಕರ್ಮಿಗಳ ಕಲ್ಯಾಣಕ್ಕಾಗಿ ನಟನೆ, ನಿರ್ಮಾಣದ ಜೊತೆಗೆ ಲಿಡ್ಕರ್ ಉತ್ಪನ್ನಗಳ ಪ್ರಚಾರಕ್ಕೂ ಸಮಯ ಮೀಸಲಿಡಲಿದ್ದಾರೆ. ಅಂದಹಾಗೆ ಮೊದಲ ಬಾರಿಗೆ ಡಾಲಿ ಸರ್ಕಾರದ ಜಾಹೀರಾತಿನಲ್ಲಿ ಮಿಂಚಲಿದ್ದಾರೆ.

ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯರ ಭೇಟಿಯಾದ ಡಾಲಿ ಧನಂಜಯ್: ಕಾರಣ?

ಲಿಡ್ಕರ್ ನಲ್ಲಿ 50 ಸಾವಿರಕ್ಕೂ ಹೆಚ್ಚು ಚರ್ಮ ಕುಶಲಕರ್ಮಿಗಳ ಕುಟುಂಬವಿದೆ. ಚರ್ಮ ಕೈಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸರ್ಕಾರ ಸ್ಯಾಂಡಲ್‌ವುಡ್ ಸ್ಟಾರ್ ಧನಂಜಯ್ ಅವರನ್ನು ರಾಯಾಭಾರಿಯಾಗಿ ನೇಮಕಮಾಡಿದೆ. ಈಗಾಗಲೇ ಡಾಲಿ ಜೊತೆ ಮಾತುಕತೆಯಾಗಿದ್ದು ಧನಂಜಯ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಲಿಡ್ಕರ್​ನ ಮಳಿಗೆಯೊಂದಕ್ಕೆ ಭೇಟಿ ನೀಡಿ ಅಲ್ಲಿನ ವಸ್ತುಗಳನ್ನು ನೋಡಿ, ಧರಿಸಿ ಆನಂದಿಸಿದ ಡಾಲಿ ಧನಂಜಯ್, ತಮಗೆ ಇಷ್ಟವಾದ ಕೆಲವು ವಸ್ತುಗಳನ್ನು ಖರೀದಿಸಿ ತಮ್ಮ ಅಭಿಪ್ರಾಯವನ್ನು ವಿಸಿಟರ್ಸ್ ಡೈರಿಯಲ್ಲಿ ದಾಖಲಿಸಿದರು.

ಡಾಲಿ ಧನಂಜಯ್ ಲಿಡ್ಕರ್​ಗೆ ರಾಯಭಾರಿ ಆಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಲಿಡ್ಕರ್ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ.ಎಸ್ ವಸುಂಧರಾ, ಧನಂಜಯ್, ರಾಯಭಾರಿ ಆಗಿರುವುದು ಖುಷಿ ಇದೆ. ಅವರು ಸ್ಯಾಂಡಲ್‌ವುಡ್‌ನ ಮುಖ್ಯ ನಟ ಎಲ್ಲಾ ವರ್ಗದ ಜನರಿಗೆ ತಲುಪುವ ಕಲಾವಿದ ಹಾಗಾಗಿ ಅವರನ್ನ ಆಯ್ಕೆ ಮಾಡಿದ್ದೇವೆ. ಸಚಿವರು ಕೂಡ ಇದಕ್ಕೆ ಒಪ್ಪಿಗೆ ಸೂಚಿಸಿದ್ದು ಆದಷ್ಟು ಬೇಗ ಜಾಹೀರಾತಿನ ಚಿತ್ರೀಕರಣ ನಡೆಯಲಿದೆ ಎಂದಿದ್ದಾರೆ.

ಧನಂಜಯ ಸದ್ಯ ಸಾಲು ಸಾಲು ಸಿನಿಮಾಗಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಧನಂಜಯ್ ತಮ್ಮದೇ ಡಾಲಿ ಸಂಸ್ಥೆ ನಿರ್ಮಾಣದ ‘ಟಗರು ಪಲ್ಯ’ ಸಿನಿಮಾ ರಿಲೀಸ್ ಮಾಡಿದ್ದರು. ಟಗರು ಪಲ್ಯ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿರ್ಮಾಣದ ಜೊತೆಗೆ ಡಾಲಿ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ಉತ್ತರಕಾಂಡ’, ‘ಜೀಬ್ರಾ’, ‘ಅಣ್ಣ ಪ್ರಂ ಮೆಕ್ಸಿಕೋ’, ‘ಪುಷ್ಪ 2’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ