AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಸಿದ್ದರಾಮಯ್ಯರ ಭೇಟಿಯಾದ ಡಾಲಿ ಧನಂಜಯ್: ಕಾರಣ?

Siddaramaiah: ಸಿಎಂ ಸಿದ್ದರಾಮಯ್ಯ ಅವರನ್ನು ನಟ, ನಿರ್ಮಾಪಕ ಡಾಲಿ ಧನಂಜಯ್ ಇಂದು (ಅಕ್ಟೋಬರ್ 20) ಭೇಟಿ ಆಗಿದ್ದಾರೆ. ಈ ಸಂದರ್ಭದಲ್ಲಿ ನಟಿ ತಾರಾ ಅನುರಾಧ ಸಹ ಜೊತೆಗಿದ್ದರು.

ಸಿಎಂ ಸಿದ್ದರಾಮಯ್ಯರ ಭೇಟಿಯಾದ ಡಾಲಿ ಧನಂಜಯ್: ಕಾರಣ?
ಮಂಜುನಾಥ ಸಿ.
|

Updated on: Oct 20, 2023 | 9:16 PM

Share

ನಟ ಡಾಲಿ ಧನಂಜಯ್ (Daali Dhananjay) ಇತ್ತೀಚೆಗೆ ನಿರ್ಮಾಪಕರಾಗಿಯೂ ಯಶಸ್ವಿಯಾಗಿದ್ದಾರೆ. ಡಾಲಿ ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಮೂಲಕ ಸದಭಿರುಚಿಯ, ಕಂಟೆಂಟ್ ಆಧರಿತ ಸಿನಿಮಾಗಳನ್ನು ತೆರೆಗೆ ತರುತ್ತಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಬರುವ ಸಿನಿಮಾಗಳಿಗೆ ಕತೆಗಳನ್ನು ನಿರ್ದಿಷ್ಟ ಮಾನದಂಡಗಳ ಮೂಲಕ ಆಯ್ಕೆ ಮಾಡುವ ಧನಂಜಯ್, ಸಿನಿಮಾದ ಪ್ರಚಾರವನ್ನೂ ಅದ್ದೂರಿಯಾಗಿಯೇ ಮಾಡುತ್ತಿದ್ದಾರೆ. ಇದೀಗ ‘ಗಟರು ಪಲ್ಯ’ ಹೆಸರಿನ ಸಿನಿಮಾದ ನಿರ್ಮಾಣವನ್ನು ಡಾಲಿ ಧನಂಜಯ್ ಮಾಡಿದ್ದು, ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ಇದರ ನಡುವೆ ಧನಂಜಯ್ ಅವರು ಇಂದು (ಅಕ್ಟೋಬರ್ 20) ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ.

‘ಟಗರು ಪಲ್ಯ’ ಸಿನಿಮಾದ ನಿರ್ಮಾಪಕ ಡಾಲಿ ಧನಂಜಯ್ ಅವರು ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು ತಮ್ಮ ನಿರ್ಮಾಣದ ‘ಟಗರು ಪಲ್ಯ’ ಸಿನಿಮಾ ವೀಕ್ಷಣೆಗೆ ಬರಬೇಕೆಂದು ಆಹ್ವಾನ ನೀಡಿದ್ದಾರೆ. ಡಾಲಿ ಆಹ್ವಾನಕ್ಕೆ ಧನಾತ್ಮಕವಾಗಿ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದಾರೆ ಎನ್ನಲಾಗುತ್ತಿದೆ. ಸಿದ್ದರಾಮಯ್ಯ ಅವರ ಭೇಟಿ ಸಂದರ್ಭದಲ್ಲಿ ಡಾಲಿ ಧನಂಜಯ್ ಜೊತೆಗೆ ಬಿಜೆಪಿ ನಾಯಕಿ, ನಟಿ ತಾರಾ ಸಹ ಜೊತೆಗಿದ್ದರು.

ಇದನ್ನೂ ಓದಿ:7 star Sultan: ‘ಟಗರು ಪಲ್ಯ’ ಖ್ಯಾತಿಯ ‘7 ಸ್ಟಾರ್ ಸುಲ್ತಾನ್​’ ಕುರುಬಾನಿ ಕ್ಯಾನ್ಸಲ್​; ನಿಟ್ಟುಸಿರು ಬಿಟ್ಟ ಅಭಿಮಾನಿಗಳು

ತಮ್ಮ ನಿರ್ಮಾಣದ ‘ಟಗರು ಪಲ್ಯ’ ಸಿನಿಮಾದ ಟ್ರೈಲರ್ ಅನ್ನು ಸಿದ್ದರಾಮಯ್ಯ ಅವರಿಗೆ ತೋರಿಸಿರುವ ಡಾಲಿ ಧನಂಜಯ್, ಸಿನಿಮಾದ ಕತೆಯ ಬಗ್ಗೆ ಲಘುವಾಗಿ ವಿವರಿಸಿ ಸಿನಿಮಾದ ವೀಕ್ಷಣೆಗೆ ಆಹ್ವಾನ ನೀಡಿದ್ದಾರೆ. ಜೊತೆಗೆ ಸಿದ್ದರಾಮಯ್ಯ ಅವರಿಗೆ ಹಾರ ತೊಡಿಸಿ, ಫಲ-ಪುಷ್ಪ ನೀಡಿ ಗೌರವವನ್ನೂ ಸಹ ಡಾಲಿ ಧನಂಜಯ್ ಹಾಗೂ ತಾರಾ ಅನುರಾಧ ಮಾಡಿದ್ದಾರೆ. ಧನಂಜಯ್ ಹಾಗೂ ತಾರಾ ತಮ್ಮನ್ನು ಭೇಟಿಯಾದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ”ಕನ್ನಡ ಚಿತ್ರರಂಗದ ಖ್ಯಾತ ನಟ ಡಾಲಿ ಧನಂಜಯ ಅವರು ಇಂದು ನನ್ನನ್ನು ಭೇಟಿಮಾಡಿ “ಟಗರು ಪಲ್ಯ” ಸಿನೆಮಾ ವೀಕ್ಷಣೆಗೆ ಆಗಮಿಸುವಂತೆ ಆಹ್ವಾನಿಸಿದರು. ನಟಿ ತಾರಾ ಅವರು ಈ ವೇಳೆ ಜೊತೆಗಿದ್ದರು” ಎಂದು ಬರೆದುಕೊಂಡಿದ್ದಾರೆ.

‘ಟಗರು ಪಲ್ಯ’ ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಒಂದೇ ದಿನದಲ್ಲಿ ನಡೆವ ಕತೆಯನ್ನು ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ಡಾಲಿ ಧನಂಜಯ್ ಗೆಳೆಯ ನಾಗಭೂಷಣ್ ನಾಯಕ. ನಟ ಪ್ರೇಮ್ ಪುತ್ರಿ ಅಮೃತಾ ನಾಯಕಿ. ಸಿನಿಮಾದಲ್ಲಿ ರಂಗಾಯಣ ರಘು, ತಾರಾ ಅನುರಾಧ, ಬಿರಾದರ ಇನ್ನೂ ಹಲವು ಜನಪ್ರಿಯ ಹಾಗೂ ಹಿರಿಯ ನಟರು ನಟಿಸಿದ್ದಾರೆ. ದೇವರಿಗೆ ಹರಕೆ ಕೊಡಲು ತಂದ ಟಗರು ಹಾಗೂ ಅದರ ಸುತ್ತ ನಡೆಯುವ ಘಟನೆಗಳನ್ನೇ ಸಿನಿಮಾ ಮಾಡಲಾಗಿದೆ. ಸಿನಿಮಾವನ್ನು ಉಮೇಶ್ ಕೆ ಕೃಪಾ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ಸಂಗೀತವನ್ನು ವಾಸುಕಿ ವೈಭವ್ ನೀಡಿದ್ದು, ಕೆಲವು ಹಾಡುಗಳನ್ನು ಡಾಲಿ ಧನಂಜಯ್ ಅವರೇ ಬರೆದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ