Daily Devotional: ಮದುವೆ ಆಮಂತ್ರಣ ಪತ್ರಿಕೆಯನ್ನ ಮೊದಲು ಯಾರಿಗೆ ಕೊಡಬೇಕು

Updated on: Dec 02, 2025 | 7:08 AM

ವಿವಾಹ ಆಮಂತ್ರಣ ಪತ್ರಿಕೆಗಳನ್ನು ಯಾರಿಗೆ ಮೊದಲು ನೀಡಬೇಕು ಎಂಬುದು ಹಲವರ ಪ್ರಶ್ನೆ. ಶಾಸ್ತ್ರಗಳ ಪ್ರಕಾರ, ಪತ್ರಿಕೆಗಳನ್ನು ಸೋಮವಾರ, ಬುಧವಾರ, ಶುಕ್ರವಾರ ತರುವುದು ಶುಭ. ಮನೆಗೆ ತಂದ ನಂತರ ಗಣಪತಿ, ಲಕ್ಷ್ಮಿ-ವಿಷ್ಣು ಮತ್ತು ಕುಲದೇವರಿಗೆ ಮೊದಲು ಪೂಜಿಸಿ ಅರ್ಪಿಸಬೇಕು. ನಂತರ ಪೂರ್ವಜರನ್ನು ಸ್ಮರಿಸಿ, ಹಿರಿಯರಿಗೆ ಹಾಗೂ ಮುತ್ತೈದೆಯರಿಗೆ ನೀಡಿದರೆ ಶುಭವಾಗುತ್ತದೆ.

ಬೆಂಗಳೂರು, ಡಿಸೆಂಬರ್ 02: ವಿವಾಹ ಸಮಾರಂಭದಲ್ಲಿ ಆಮಂತ್ರಣ ಪತ್ರಿಕೆಗಳು ಮಹತ್ವದ ಪಾತ್ರವಹಿಸುತ್ತವೆ. ಮದುವೆ ಮಾಡಿ ನೋಡು ಎಂಬ ನಾಣ್ಣುಡಿಯಂತೆ, ವಿವಾಹವು ಅನೇಕ ವಿಧಿವಿಧಾನಗಳಿಂದ ಕೂಡಿದೆ. ಲಗ್ನಪತ್ರಿಕೆಗಳನ್ನು ತರುವ ಮೊದಲು ಶಿವ-ಪಾರ್ವತಿಯರನ್ನು ಸ್ಮರಿಸುವುದು ಶುಭ. ಪತ್ರಿಕೆಗಳನ್ನು ತರಲು ಸೋಮವಾರ, ಬುಧವಾರ, ಶುಕ್ರವಾರ ಉತ್ತಮ ದಿನಗಳಾಗಿವೆ.

ಪತ್ರಿಕೆಗಳನ್ನು ಮನೆಗೆ ತಂದ ನಂತರ ನೇರವಾಗಿ ಆಪ್ತರಿಗೆ ಅಥವಾ ಬೀಗರಿಗೆ ನೀಡುವ ಬದಲು ಕೆಲವು ಶಾಸ್ತ್ರಗಳನ್ನು ಅನುಸರಿಸುವುದು ಉತ್ತಮ. ಪ್ರಥಮವಾಗಿ ಗಣಪತಿ ದೇವಸ್ಥಾನದಲ್ಲಿ ಅಥವಾ ಮನೆಯಲ್ಲಿ ವಿನಾಯಕನ ಮುಂದೆ ಪೂಜಿಸಿ, ಬೆಲ್ಲ-ತುಪ್ಪ ಅಥವಾ ಸಕ್ಕರೆ ನೈವೇದ್ಯವನ್ನು ಇಡಬೇಕು. ಇದರ ಮೂಲಕ ಮೊದಲ ಆಮಂತ್ರಣವನ್ನು ಗಣಪತಿಗೆ ಸಲ್ಲಿಸಿದಂತಾಗುತ್ತದೆ. ನಂತರ ಲಕ್ಷ್ಮಿ-ವಿಷ್ಣು (ಪದ್ಮಾವತಿ, ಅಲುಮೇಲುಮಂಗ ಸಮೇತ ವೆಂಕಟೇಶ್ವರ) ಮತ್ತು ಕುಲದೇವರಿಗೆ ಪತ್ರಿಕೆಗಳನ್ನು ಅರ್ಪಿಸಬೇಕು. ಈ ವಿಧಿವಿಧಾನಗಳನ್ನು ಪೂರೈಸಿದ ನಂತರ ಬೀಗರಿಗೆ ಅಥವಾ ಸಂಬಂಧಿಕರಿಗೆ ಆಮಂತ್ರಣ ಪತ್ರಿಕೆಗಳನ್ನು ವಿತರಿಸಬಹುದು. ಇದರಿಂದ ವಿವಾಹ ಕಾರ್ಯವು ನಿರ್ವಿಘ್ನವಾಗಿ ನೆರವೇರುತ್ತದೆ ಎಂಬ ನಂಬಿಕೆಯಿದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.