ಕಲಬುರಗಿಯಲ್ಲಿ RSSಗೆ ಶಾಕ್​ ಮೇಲೆ ಶಾಕ್​: ಸೇಡಂ, ಕುಮ್ಮನ ಶಿರಸಗಿಯಲ್ಲೂ ಪಥಸಂಚಲನಕ್ಕೆ ಬ್ರೇಕ್​

ಕಲಬುರಗಿ ಜಿಲ್ಲೆಯ ಹಲವೆಡೆ RSS ಪಥಸಂಚಲನಕ್ಕೆ ಅನುಮತಿ ನಿರಾಕರಿಸಿರುವ ಬಗ್ಗೆ ವರದಿಯಾಗಿವೆ. ಚಿತ್ತಾಪುರದ ಬೆನ್ನಲ್ಲೇ ಜಿಲ್ಲೆಯ ಯಡ್ರಾಮಿ ತಾಲೂಕಿನ ಕುಮ್ಮನ ಶಿರಸಗಿಯಲ್ಲಿರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ನಡೆಸದಂತೆ ಪ್ರತಿಬಂಧಕಾಜ್ಞೆ ಜಾರಿ ಮಾಡಲಾಗಿದೆ. ಸೇಡಂ ಪಟ್ಟಣದಲ್ಲಿಯೂ RSS ಪಥಸಂಚಲನಕ್ಕೆ ತಹಶೀಲ್ದಾರ್​ ಅನುಮತಿ ನಿರಾಕರಿಸಿದ್ದಾರೆ.

ಕಲಬುರಗಿಯಲ್ಲಿ RSSಗೆ ಶಾಕ್​ ಮೇಲೆ ಶಾಕ್​: ಸೇಡಂ, ಕುಮ್ಮನ ಶಿರಸಗಿಯಲ್ಲೂ ಪಥಸಂಚಲನಕ್ಕೆ ಬ್ರೇಕ್​
RSS ಪಥಸಂಚಲನ (ಸಾಂದರ್ಭಿಕ ಚಿತ್ರ)
Edited By:

Updated on: Oct 19, 2025 | 4:24 PM

ಕಲಬುರಗಿ, ಅಕ್ಟೋಬರ್​ 19: ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (RSS) ಪಥಸಂಚಲನಕ್ಕೆ ಅನುಮತಿ ನಿರಾಕರಣೆ ಜಟಾಪಟಿ ಕೋರ್ಟ್​ ಮೆಟ್ಟಿಲೇರಿ ಸುಖಾಂತ್ಯ ಕಂಡಿರುವ ನಡುವೆಯೂ ಕಲಬುರಗಿಯ ವಿವಿಧೆಡೆ RSS ಪಥಸಂಚಲನಕ್ಕೆ ಅನುಮತಿ ನಿರಾಕರಿಸಿರುವ ಬಗ್ಗೆ ವರದಿಯಾಗುತ್ತಿವೆ. ಜಿಲ್ಲೆಯ ಸೇಡಂ ಪಟ್ಟಣದಲ್ಲಿ RSS ಪಥಸಂಚಲನಕ್ಕೆ ತಹಶೀಲ್ದಾರ್​ ಅನುಮತಿ ನಿರಾಕರಿಸಿದ್ದು, RSS ಮುಖಂಡರು ಸಲ್ಲಿಸಿದ್ದ ಮನವಿಯನ್ನ ಸೇಡಂ ತಹಶೀಲ್ದಾರ್ ಶ್ರೀಯಾಂಕಾ ತಿರಸ್ಕರಿಸಿದ್ದಾರೆ. ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಪ್ರತಿನಿಧಿಸುವ ಸೇಡಂ ಕ್ಷೇತ್ರದಲ್ಲಿ ಇಂದು ಸಂಜೆ ಪಥಸಂಚಲನಕ್ಕೆ ಸಿದ್ಧತೆ ನಡೆದಿತ್ತು. ಆದರೆ ಕೊನೆ ಕ್ಷಣದಲ್ಲಿ ಸೇಡಂ ತಹಶೀಲ್ದಾರ್ ಅನುಮತಿ ನಿರಾಕರಿಸಿದ್ದಾರೆ ಎನ್ನಲಾಗಿದೆ.

RSS ಪಥಸಂಚಲಕ್ಕೆ ಪ್ರತಿಬಂಧಕಾಜ್ಞೆ ಜಾರಿ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕುಮ್ಮನ ಶಿರಸಗಿಯಲ್ಲಿ RSS ಪಥಸಂಚಲನ ನಡೆಸದಂತೆ ಪ್ರತಿಬಂಧಕಾಜ್ಞೆ ಜಾರಿ ಮಾಡಲಾಗಿದೆ. RSS ಹಾಗೂ ದಲಿತ ಸಂಘಟನೆ ಮಧ್ಯೆ ವೈಷಮ್ಯ ಬೆಳೆದ ಹಿನ್ನೆಲೆ ಇಂದಿನಿಂದ ಸೋಮವಾರ ಬೆಳಗ್ಗೆ 6 ಗಂಟೆವರೆಗೆ ಪ್ರತಿಬಂಧಕಾಜ್ಞೆ ಜಾರಿ ಮಾಡಿ ಯಡ್ರಾಮಿ ತಾಲೂಕು ಹಶೀಲ್ದಾರ್​, ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ ಆದೇಶಿಸಿದ್ದಾರೆ.

ಚಿತ್ತಾಪುರದಲ್ಲಿ ಇಂದು ನಡೆಯಬೇಕಿದ್ದ RSS ಪಥಸಂಚಲನಕ್ಕೆ ಅನುಮತಿ ನಿರಾಕರಿಸಿ ತಹಶೀಲ್ದಾರ್​ ನಾಗಯ್ಯ ಹಿರೇಮಠ ಆದೇಶ ಹೊರಡಿಸಿದ್ದರು. ಕಾರ್ಯಕರ್ತರು ಕೋರ್ಟ್​ ಮೊರೆ ಹೋಗಿದ್ದು, ಕಲಬುರಗಿ ಹೈಕೋರ್ಟ್ ಪೀಠಕ್ಕೆ ಜಿಲ್ಲಾ ಪ್ರಮುಖರಾದ ಅಶೋಕ್ ಪಾಟೀಲ್ ಎಂಬುವವರು ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ ವಾದ-ಪ್ರತಿವಾದ ಆಲಿಸಿ ಪಥಸಂಚಲನ ಮಾರ್ಗದೊಂದಿಗೆ ಹೊಸದಾಗಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚನೆ ನೀಡಿದೆ. ಅರ್ಜಿದಾರರ ಮನವಿಯನ್ನು ಪರಿಗಣಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಜೊತೆಗೆ ಅಕ್ಟೋಬರ್​​ 24ರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿದೆ.

ಬಿಜೆಪಿ ಕಿಡಿ

ಚಿತ್ತಾಪುರದಲ್ಲಿ RSS ಪಥಸಂಚಲನ ನಿರ್ಬಂಧಿಸಲು ಹೊರಟವರಿಗೆ ಮುಖಭಂಗವಾಗಿದೆ. ಇಂದಿನ ನ್ಯಾಯಾಲಯದ ತೀರ್ಪು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವಾಧಿಕಾರಿ ಆಡಳಿತ ನಡೆಸಲು ಅವಕಾಶವಿಲ್ಲ ಎಂಬ ಸ್ಪಷ್ಟ ಸಂದೇಶ ಸಾರಿದೆಯಲ್ಲದೇ, ದಿನಬೆಳಗಾದರೆ ಸಂವಿಧಾನದ ಬಗ್ಗೆ ಬೊಗಳೆ ಮಾತನಾಡುವವರಿಗೆ ತಕ್ಕ ಪಾಠ ಹೇಳಿದೆ ಎಂದು ರಾಜ್ಯ ಬಿಜೆಪಿ ಕಿಡಿ ಕಾರಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.