ಕರ್ನಾಟಕದಲ್ಲಿ ಪೆಟ್ರೋಲ್-ಡೀಸೆಲ್, ಗ್ಯಾಸ್ ಬಗ್ಗೆ ಎದ್ದಿರುವ ಅಂತೆ ಕಂತೆಗಳಿಗೆ ತೆರೆ
ಇಸ್ರೆಲ್-ಇರಾನ್ ಯುದ್ಧದ ಪರಿಣಾಮ ಭಾತರದಲ್ಲಿ ಪೆಟ್ರೋಲ್, ಡಿಸೇಲ್ ಅಭಾವ ವದಂತಿ ಹಬ್ಬಿದೆ. ಈ ಹಿನ್ನೆಲೆಯಲ್ಲಿ ಇಂಧನ ಸಿಗುತ್ತೋ ಇಲ್ವೋ ಎಂದು ಕೆಲವೆಡೆ ಜನ ಬಂಕ್ ಗಳಿಗೆ ಮುಗಿಬಿದ್ದಿದ್ದು, ಹೆಚ್ಚೆಚ್ಚು ಇಂಧನ ಖರೀದಿಸಿ ಶೇಖರಣೆ ಮಾಡಿಕೊಳ್ಳುತ್ತಿದ್ದಾರೆ. ಈ ಸಂಬಂಧ ಕರ್ನಾಟಕದ ತೈಲ ಉದ್ಯಮದ ರಾಜ್ಯ ಮಟ್ಟದ ಸಂಯೋಜಕ ಪ್ರತಿಕ್ರಿಯಿಸಿದ್ದು, ಎಲ್ಲಾ ಅಂತೆ ಕಂತೆಗಳಿಗೆ ತೆರೆ ಎಳೆದಿದ್ದಾರೆ.

ಬೆಂಗಳೂರು, (ಮೇ 19): ತೈಲ ಮತ್ತು ಅನಿಲ ವಲಯದ ಮೇಲೆ ಪ್ರಸ್ತುತ ಪರಿಣಾಮ ಬೀರುತ್ತಿರುವ ಜಾಗತಿಕ ಅನಿಶ್ಚಿತತೆಗಳ ಹೊರತಾಗಿಯೂ, ಸಾರ್ವಜನಿಕ ವಲಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್, ಬಿಸಿಪಿಎಲ್ ಮತ್ತು ಎಚ್ಪಿಸಿಎಲ್, ಕರ್ನಾಟಕದಾದ್ಯಂತ ಪೆಟ್ರೋಲ್ (MS), ಡೀಸೆಲ್ (HSD) ಮತ್ತು ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ನಿರಂತರ ಪೂರೈಕೆಯನ್ನು ಕಾಯ್ದುಕೊಂಡಿವೆ ಎಂದು ಕರ್ನಾಟಕದ ತೈಲ ಉದ್ಯಮದ ರಾಜ್ಯ ಮಟ್ಟದ ಸಂಯೋಜಕರಾದ (IOCL, BPCL & HPCL) ಸಿದ್ಧಾರ್ಥ್ ಅಗರ್ವಾಲ್ ತಿಳಿಸಿದ್ದಾರೆ.
ಮುಖ್ಯಾಂಶಗಳು
- ಯುದ್ಧದ ಪರಿಣಾಮ ಪೆಟ್ರೀಲ್-ಡೀಸೆಲ್ ಹಾಗೂ ಗ್ಯಾಸ್ ಅಭಾವ ವದಂತಿ
- ಹೆಚ್ಚಿನ ಇಂಧನ ಶೇಖರಿಸಿಕೊಳ್ಳಲು ಬಂಕ್ಗಳಲ್ಲಿ ಮುಗಿಬೀಳುತ್ತಿರುವ ಸಾರ್ವಜನಿಕರು
- ಅಭಾವ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ ಕರ್ನಾಟಕದ ತೈಲ ಉದ್ಯಮದ ರಾಜ್ಯ ಮಟ್ಟದ ಸಂಯೋಜಕ
- ಕರ್ನಾಟಕದಾದ್ಯಂತ ಯಾವುದೇ ನಿರ್ಬಂಧಗಳಿಲ್ಲದೆ ಇಂಧನ ವಿತರಣೆ ಮುಂದುವರಿಕೆ ಎಂದು ಸ್ಪಷ್ಟನೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಟರ್ಮಿನಲ್ಗಳು, ಡಿಪೋಗಳು, ಎಲ್ಪಿಜಿ ಬಾಟ್ಲಿಂಗ್ ಪ್ಲಾಂಟ್ಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳನ್ನು ಒಳಗೊಂಡಿರುವ ತನ್ನ ವ್ಯಾಪಕ ಪೂರೈಕೆ ಜಾಲದ ಮೂಲಕ ಇಂಧನದ ಸುಗಮ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ತೈಲ ಉದ್ಯಮವು ಸಂಪೂರ್ಣವಾಗಿ ಸಜ್ಜಾಗಿದೆ. ಎಲ್ಲಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಇಂಧನ ವಿತರಣಾ ಕಾರ್ಯಾಚರಣೆಗಳು ಸುಗಮವಾಗಿ ಮುಂದುವರಿದಿದ್ದು, ನಿಗದಿತ ಸುರಕ್ಷತೆ ಮತ್ತು ಕಾರ್ಯಾಚರಣೆಯ ಮಾನದಂಡಗಳಿಗೆ ಅನುಗುಣವಾಗಿ ಯಾವುದೇ ನಿರ್ಬಂಧಗಳಿಲ್ಲದೆ ಪೂರೈಕೆಯನ್ನು ಕಟ್ಟುನಿಟ್ಟಾಗಿ ನಿರ್ವಹಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಮಿತಿಮೀರಿ ಇಂಧನ ಖರೀದಿಸದಿರಿ: ಕರ್ನಾಟಕದ ಜನತೆಗೆ ಈ ವಿಶೇಷ ಮನವಿಗೆ ಕಾರಣವೇನು?
ಇದಲ್ಲದೆ, ಪೂರೈಕೆ ಸರಪಳಿಯಾದ್ಯಂತ ಪೆಟ್ರೋಲಿಯಂ ಉತ್ಪನ್ನಗಳ ಸಮರ್ಪಕ ದಾಸ್ತಾನು ಲಭ್ಯವಿದೆ. ಗ್ರಾಹಕರ ನೈಜ ಬೇಡಿಕೆಯನ್ನು ಸಮರ್ಥವಾಗಿ ಪೂರೈಸಲು ದಾಸ್ತಾನು ಮರುಪೂರಣ ಕಾರ್ಯಾಚರಣೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ದೇಶೀಯ ಗ್ರಾಹಕರಿಗೆ ಎಲ್ಪಿಜಿ ಪೂರೈಕೆಯನ್ನು ಸಹ ಸಹಜ ಸ್ಥಿತಿಯಲ್ಲಿ ಕಾಯ್ದುಕೊಳ್ಳಲಾಗಿದ್ದು, ಇಡೀ ರಾಜ್ಯಾದ್ಯಂತ ವಿತರಣೆಗಳು ಸುಗಮವಾಗಿ ಪ್ರಗತಿಯಲ್ಲಿವೆ ಎಂದಿದ್ದಾರೆ.
ನಾಗರಿಕರಿಗೆ ನಿರಂತರ ಇಂಧನ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಸಾರ್ವಜನಿಕ ವಲಯದ ತೈಲ ಕಂಪನಿಗಳು ಲಾಜಿಸ್ಟಿಕ್ಸ್, ದಾಸ್ತಾನು ನಿರ್ವಹಣೆ ಮತ್ತು ವಿತರಣಾ ಯೋಜನೆಯಲ್ಲಿ ನಿಕಟ ಸಮನ್ವಯ ಸಾಧಿಸುತ್ತಿವೆ. ಒಟ್ಟಾರೆ ಪೂರೈಕೆ ಪರಿಸ್ಥಿತಿಯು ಸ್ಥಿರವಾಗಿದ್ದು, ನಿರಂತರ ಮೇಲ್ವಿಚಾರಣೆಯಲ್ಲಿದೆ ಎಂದು ತಿಳಿಸಿದ್ದಾರೆ.
ನಾಗರಿಕರು ಅವಶ್ಯತೆ ಇದ್ದಾಗ ಮಾತ್ರ ಇಂಧನ ಖರೀದಿ ಪ್ರವೃತ್ತಿ ಮುಂದುವರಿಸಬೇಕಿದ್ದು, ಅನಗತ್ಯ ಆತಂಕದಿಂದ ಮುಂಚಿತವಾಗಿಯೇ ಅತಿಯಾಗಿ ಖರೀದಿಸುವುದನ್ನು (panic buying) ತಪ್ಪಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಇಂಧನ ಲಭ್ಯತೆಗೆ ಸಂಬಂಧಿಸಿದಂತೆ ಅಧಿಕೃತ ಮತ್ತು ಪರಿಶೀಲಿಸಿದ ಮಾಹಿತಿಗಾಗಿ ಸಾರ್ವಜನಿಕರು ಕೇವಲ ತೈಲ ಕಂಪನಿಗಳು ಬಿಡುಗಡೆ ಮಾಡುವ ಅಧಿಕೃತ ಪ್ರಕಟಣೆಗಳನ್ನು ಮಾತ್ರ ಅವಲಂಬಿಸುವಂತೆ ಸಲಹೆ ನೀಡಲಾಗಿದೆ.

