ಧರ್ಮ ಸಂಘರ್ಷದ ಮಧ್ಯೆ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುತ್ತಿರುವ ಶಿಕ್ಷಕ; ಇತನ ಕೈಯಲ್ಲಿ ಅರಳಿವೆ ನೂರಾರು ಗಣಪ ವಿಗ್ರಹ

ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಧರ್ಮ ದಂಗಲ್ ಮಧ್ಯೆ, ಇಲ್ಲೊಂದು ಗ್ರಾಮದಲ್ಲಿ ಕುಟುಂಬವೊಂದು ಕಳೆದ ಮೂರು ತಲೆಮಾರಿನಿಂದ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುತ್ತಿದೆ. ಅಷ್ಟಕ್ಕೂ ಯಾವುದು ಆ ಊರು? ಆ ಕುಟುಂಬ ಯಾವುದು? ಆ ಕುಟುಂಬ ಸಾರುತ್ತಿರುವ ಭಾವೈಕ್ಯತೆ ಸಂದೇಶ ಏನು ಅಂತೀರಾ? ಇಲ್ಲಿದೆ ನೋಡಿ.

ಧರ್ಮ ಸಂಘರ್ಷದ ಮಧ್ಯೆ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುತ್ತಿರುವ ಶಿಕ್ಷಕ; ಇತನ ಕೈಯಲ್ಲಿ ಅರಳಿವೆ ನೂರಾರು ಗಣಪ ವಿಗ್ರಹ
ಅಲ್ಹಾಭಕ್ಷ ಜಮಾದಾರ್
Edited By:

Updated on: Sep 19, 2023 | 10:38 AM

ಬೆಳಗಾವಿ, ಸೆ.16: ಮನೆಯ ತುಂಬೆಲ್ಲ ಝಗಮಗಿಸುತ್ತಿರುವ ಕಲರ್‌‌ಫುಲ್ ಗಣೇಶ ಮೂರ್ತಿ (Ganesh Idol) ಗಳು, ವಿಘ್ನನಿವಾರಕನ ಮೂರ್ತಿಗೆ ಫೈನಲ್ ಟಚ್ ನೀಡುತ್ತಿರುವ ಮುಸ್ಲಿಂ ಕುಟುಂಬ. ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ (Belagavi) ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಗ್ರಾಮದಲ್ಲಿ. ಹೌದು, ಗಣೇಶ ಮೂರ್ತಿಗೆ ಫೈನಲ್ ಟಚ್ ನೀಡುತ್ತಿರುವ ಟೋಪಿಧಾರಿ ವ್ಯಕ್ತಿಯ ಹೆಸರು ಅಲ್ಹಾಭಕ್ಷ ಜಮಾದಾರ್, ವೃತ್ತಿಯಲ್ಲಿ ಸರ್ಕಾರಿ ಶಿಕ್ಷಕರಾಗಿರುವ ಇವರು ವಂಶಪಾರಂಪರ್ಯವಾಗಿ ಬಂದಿರುವ ಪರಿಸರ ಸ್ನೇಹಿ ಗಣೇಶಮೂರ್ತಿ ತಯಾರಿಸುತ್ತಾ ಬಂದಿದ್ದಾರೆ. ಇವರು ಮಹಾರಾಷ್ಟ್ರದಿಂದ ಜೇಡಿಮಣ್ಣನ್ನು ತಂದು ಪರಿಸರ ಸ್ನೇಹಿ ಗಣಪನ ಸಿದ್ಧಪಡಿಸುತ್ತಾರೆ.

ಪ್ರತಿ ವರ್ಷ ಗಣೇಶ ಹಬ್ಬ ಬಂತೆಂದರೆ ಮಾಂಜರಿವಾಡಿ, ಮಾಂಜರಿ, ಯಡೂರವಾಡಿಯಿಂದ ಜನ ಆಗಮಿಸಿ ಗಣೇಶನ ಮೂರ್ತಿ ತೆಗೆದುಕೊಂಡು ಹೋಗುತ್ತಾರೆ. ಈ ಕುರಿತು ಮಾತನಾಡಿರುವ ಅಲ್ಹಾಭಕ್ಷ ಜಮಾದಾರ್ ‘ನಮ್ಮ ತಾತನ ಕಾಲದಿಂದಲೂ ಈ ಸಂಪ್ರದಾಯ ಮುಂದುವರಿಸಿಕೊಂಡು ಬಂದಿದೆ. ನಮ್ಮ ಕುಟುಂಬ ಸದಸ್ಯರೆಲ್ಲರೂ ಸೇರಿ ಪ್ರತಿ ವರ್ಷ 150ರಿಂದ 200 ಗಣೇಶಮೂರ್ತಿ ತಯಾರು ಮಾಡ್ತೀವಿ ಎನ್ನುತ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಧರ್ಮ ದಂಗಲ್‌‌ಗೆ ಬೇಸರ ವ್ಯಕ್ತಪಡಿಸುವ ಅಲ್ಹಾಭಕ್ಷ ಜಮಾದಾರ್, ‘ವಿವಿಧತೆಯಲ್ಲಿ ಏಕತೆ ಸಂದೇಶ ಸಾರುವ ದೇಶ ನಮ್ಮದು. ನಮ್ಮೂರಲ್ಲಿ ಹಿಂದೂ ಮುಸ್ಲಿಂ ಎಲ್ಲರೂ ಅಣ್ಣ-ತಮ್ಮಂದಿರಂತೆ ಇರ್ತೀವಿ‌. ಹಿಂದೂ ಮುಸ್ಲಿಂ ಅನ್ನೋದಕ್ಕಿಂತ ಮನುಷ್ಯ ಜಾತಿ ಮುಖ್ಯ ಎಂದರು.

ಇದನ್ನೂ ಓದಿ:Ganesha Chaaturthi 2023: ಮಣ್ಣಿನ ಗಣೇಶ ಮೂರ್ತಿಯನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸುವುದು ಹೇಗೇ? ಮಾಹಿತಿ ಇಲ್ಲಿದೆ

ಮೆಚ್ಚುಗೆ ವ್ಯಕ್ತಪಡಿಸಿದ ಊರಿನ ಜನ

ಇನ್ನು ಮಾಂಜರಿವಾಡಿಯ ಜಮಾದಾರ್ ಕುಟುಂಬ ಕಾರ್ಯಕ್ಕೆ ಇಡೀ ಊರಿಗೆ ಊರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ಗಣೇಶ ಮೂರ್ತಿ ಬುಕ್ ಮಾಡಲು ಆಗಮಿಸಿದ ಶಾಹಜೀ ಖೋತ್ ಎಂಬುವರು ಮಾತನಾಡುತ್ತ ‘ಪರಿಸರ ಸ್ನೇಹಿ ಗಣೇಶ ಮೂರ್ತಿ ತಯಾರು ಮಾಡಿ ಪರಿಸರ ಸಂದೇಶ ಸಾರುವುದರ ಜೊತೆಗೆ ಭಾವೈಕ್ಯತೆ ಸಂದೇಶ ಸಹ ಸಾರುತ್ತಿದ್ದಾರೆ. ಗಣೇಶ ಮೂರ್ತಿ ತಯಾರಿಸೋದನ್ನು‌ ಬ್ಯುಸಿನೆಸ್ ಎಂದು ಮಾಡುತ್ತಿಲ್ಲ. ಮುಂಚೆ ಅಲ್ಹಾಭಕ್ಷ ಜಮಾದಾರ್ ಅಜ್ಜ, ತಂದೆ ಗಣೇಶಮೂರ್ತಿ ಮಾಡುತ್ತಿದ್ದರು‌. ಅದೇ ಪರಂಪರೆಯನ್ನು ಇವರು ಮುಂದುವರಿಸಿಕೊಂಡು ಬಂದಿದ್ದಾರೆ.

ನಮ್ಮೂರಲ್ಲಿ ಹಿಂದೂ ಮುಸ್ಲಿಂ ಎಲ್ಲರೂ ಸೇರಿ ಗಣೇಶೋತ್ಸವ, ಈದ್ ಮಿಲಾದ್ ಹಬ್ಬ ಮಾಡುತ್ತವೆ. ನಾವು ಪ್ರತಿ ವರ್ಷ ಅಲ್ಹಾಭಕ್ಷ ಜಮಾದಾರ್ ಕುಟುಂಬದವರು ತಯಾರಿಸಿರುವ ಗಣೇಶನ ಮೂರ್ತಿಯೇ ತಗೆದುಕೊಂಡು ಹೋಗ್ತೀವಿ‌. ಕೆಲವೊಂದಿಷ್ಟು ಕುಟುಂಬಗಳಿಗೆ ಸ್ವತಃ ಅಲ್ಹಾಭಕ್ಷ, ಗಣೇಶ ಮೂರ್ತಿ ಮನೆ ಬಾಗಿಲಿಗೊಯ್ದು ಕೊಡುತ್ತಾರೆ ಎಂದರು. ಒಟ್ಟಿನಲ್ಲಿ ಸರ್ಕಾರಿ ನೌಕರಿ ಇದ್ದರೂ ವಂಶಪಾರಂಪರ್ಯವಾಗಿ ಬಂದ ವೃತ್ತಿ ಮುಂದುವರಿಸಿಕೊಂಡು ಭಾವೈಕ್ಯತೆ ಸಾರುತ್ತಿರುವ ಅಲ್ಹಾಭಕ್ಷರ ಕಾರ್ಯ ಇತರರಿಗೆ ಮಾದರಿ‌.‌

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:40 pm, Sat, 16 September 23

Mahantesh Kurbet
Follow Us