
ಚಿಕ್ಕೋಡಿ, ಅಕ್ಟೋಬರ್ 11: ಪ್ರೀತಿಸಿದ ಯುವಕ ಯುವತಿ ಪೋಷಕರ ವಿರೋಧದ ನಡುವೆಯೂ ಓಡಿ ಹೋಗಿ ಮದುವೆಯಾಗುವುದು, ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆಯಾದವರನ್ನು ಪೋಷಕರು ಕೊಲೆ ಮಾಡಿಸುವುದು, ಇತ್ಯಾದಿ ಪ್ರಕರಣಗಳ ಬಗ್ಗೆ ಆಗಾಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತದೆ. ಆದರೆ, ಬೆಳಗಾವಿ (Belegavi) ಜಿಲ್ಲೆಯ ನಾಗರಾಳ ಗ್ರಾಮದಲ್ಲಿ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ಇಲ್ಲಿ, ತಮ್ಮ ಇಚ್ಛೆಗೆ ವಿರುದ್ಧವಾಗಿ ಓಡಿಹೋದ ಮಗಳ ತಿಥಿ ಮಾಡಿದ ವ್ಯಕ್ತಿಯೊಬ್ಬರು, ಇಡೀ ಊರಿಗೆ ಊಟ ಹಾಕಿಸಿದ ಘಟನೆ ನಡೆದಿದೆ. ಮಗಳು ತಮ್ಮ ಪಾಲಿಗೆ ಸತ್ತು ಹೋದಳೆಂದು ತಂದೆ ಇಡೀ ಊರಿಗೆ ತಿಥಿ ಊಟ ಹಾಕಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ಶಿವಗೌಡ ಎಂಬವರ ಮಗಳು ಅದೇ ಗ್ರಾಮದ ವಿಠ್ಠಲ್ ಬಸ್ತವಾಡೆ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಆದರೆ, ಪೋಷಕರಿಗೆ ಈ ಬಗ್ಗೆ ಸಮ್ಮತಿ ಇರಲಿಲ್ಲ. ಇಂಥ ಸಂದರ್ಭದಲ್ಲೇ ಶಿವಗೌಡ ಮಗಳು ವಿಠ್ಠಲ್ ಬಸ್ತವಾಡೆ ಜತೆ ಪರಾರಿಯಾಗಿದ್ದಾಳೆ. ಮೊದಲಿಗೆ ಶಿವಗೌಡ ಅವರು ರಾಯಬಾಗ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಿದ್ದರು. ನಂತರ, ಮಗಳು ಪ್ರೀತಿಸಿದ ಯುವಕನ ಜತೆ ಓಡಿಹೋಗಿರುವುದು ಗೊತ್ತಾಗಿದೆ. ಇದರಿಂದ ಮನನೊಂದ ಅವರು ಮಗಳು ತಮ್ಮ ಪಾಲಿಗೆ ಸತ್ತು ಹೋಗಿದ್ದಾಳೆ ಎಂದು ತಿಥಿ ಮಾಡಿದ್ದಾರೆ
ಶಿವಗೌಡಗೆ ನಾಲ್ಕು ಜನ ಹೆಣ್ಣುಮಕ್ಕಳಿದ್ದು, ಈ ಪೈಕಿ ಈಗ ಓಡಿಹೋದವಳು ಕೊನೆಯವಳಾಗಿದ್ದಳು. ಮಗಳು ಮನೆತನದ ಸಂಸ್ಕಾರ ಮುರಿದು ಓಡಿಹೋಗಿದ್ದರಿಂದ ಮನನೊಂದಿರುವ ಶಿವಗೌಡ ಪಾಟೀಲ್, ನಾಗರಾಳ ಗ್ರಾಮದಲ್ಲಿ ಹೆತ್ತ ಮಗಳಿಗೆ ಶ್ರಾದ್ಧ ಮಾಡಿ ಕರುಳ ಬಳ್ಳಿ ಸಂಬಂಧ ಕತ್ತರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ತಂದೆ ಮತ್ತು ಗೆಳೆಯನಿಂದ ಪದೇ ಪದೇ ಅತ್ಯಾಚಾರ, 3 ಬಾರಿ ಗರ್ಭಪಾತ
ಬಂಧು-ಬಳಗ ಸೇರಿದಂತೆ ಸಂಬಂಧಿಕರನ್ನು ಕರೆಸಿ ಭೋಜನ ಹಾಕಿಸಿದ್ದಾರೆ. ಅಷ್ಟೇ ಅಲ್ಲದೆ, ಮಗಳ ಫೋಟೊ ಹಾಕಿ ಊರ ತುಂಬ ಶ್ರದ್ಧಾಂಜಲಿ ಬ್ಯಾನರ್ಗಳನ್ನೂ ಹಾಕಿಸಿದ್ದಾರೆ.
Published On - 2:15 pm, Sat, 11 October 25