ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಡಿ.13 ರಂದು ಬೆಳಗಾವಿಯಲ್ಲಿ ಪ್ರತಿಭಟನೆ: ಜಯಮೃತ್ಯುಂಜಯ ಸ್ವಾಮೀಜಿ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂಬ ಆಗ್ರಹ ಮತ್ತೆ ಮುನ್ನಲೆಗೆ ಬಂದಿದ್ದು, ಬೆಳಗಾವಿ ಅಧಿವೇಶನದ ವೇಳೆ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಹಾಗೂ ಸರ್ಕಾರವನ್ನು ಎಚ್ಚರಿಸಲು ಡಿಸೆಂಬರ್ 13 ರಂದು ಪ್ರತಿಭಟನೆ ನಡೆಸಲು ಪ್ಲ್ಯಾನ್ ಮಾಡಲಾಗಿದೆ. ಈ ಬಗ್ಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಡಿ.13 ರಂದು ಬೆಳಗಾವಿಯಲ್ಲಿ ಪ್ರತಿಭಟನೆ: ಜಯಮೃತ್ಯುಂಜಯ ಸ್ವಾಮೀಜಿ
ಬಸವ ಜಯಮೃತ್ಯುಂಜಯ ಸ್ವಾಮೀಜಿ
Follow us
| Updated By: Rakesh Nayak Manchi

Updated on: Dec 09, 2023 | 4:06 PM

ಬೆಳಗಾವಿ, ಡಿ.9: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಡಿ. 13 ರಂದು ಬೆಳಗಾವಿಯಲ್ಲಿ (Belagavi) ಲಿಂಗಾಯತ ಪಂಚಮಸಾಲಿ ಸಮುದಾಯವು ಪ್ರತಿಭಟನೆ ನಡೆಸಲಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 11ಕ್ಕೆ ಬೆಳಗಾವಿಯ ಗಾಂಧಿ ಭವನದಲ್ಲಿ ಜಮಾವಣೆಗೊಳ್ಳುವಂತೆ ಕರೆ ನೀಡಿದರು. ಗಾಂಧಿ ಭವನದಿಂದ ಕಿತ್ತೂರು ರಾಣಿ ಚನ್ನಮ್ಮ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂದರು.

ಪ್ರತಿಭಟನೆ ವೇಳೆ ಜನರು ಸುವರ್ಣಸೌಧಕ್ಕೆ ಹೋಗೋಣ ಅಂದರೆ ಸುವರ್ಣಸೌಧವರೆಗೆ ಪಾದಯಾತ್ರೆ ಮಾಡುತ್ತೇವೆ. ಹಿಂದಿನ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ 2ಡಿ ಮೀಸಲಾತಿ ನೀಡಿತ್ತು. ಆದರೆ ಜಾರಿ ಆಗಿಲ್ಲ. 2ಎ ಮೀಸಲಾತಿ ನೀಡುವ ಬಗ್ಗೆ ಸಿಎಂ ಸಭೆ ಕರೆದು ಚರ್ಚಿಸುವುದಾಗಿ ಹೇಳಿದ್ದರು. ಬಜೆಟ್ ಅಧಿವೇಶನ ವೇಳೆ ಸಿಎಂಗೆ ಸಭೆ ಕರೆಯುವಂತೆ ನಮ್ಮ ಸಮಾಜದ ಮುಖಂಡರು ಮನವಿ ಮಾಡಿದ್ದರು. ಆದರೆ ಸಿದ್ದರಾಮಯ್ಯ ನಮಗೆ ಸ್ಪಂದಿಸಿಲ್ಲ ಎಂದರು.

ಇದನ್ನೂ ಓದಿ: ಬೆಳಗಾವಿ: ಪ್ರತಿಭಟನೆ ನಡೆಸಲು ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಧರಣಿ ನಡೆಸುತ್ತಿರುವ ಶಾಲಾ ಬಾಲಕ

ಬೆಂಗಳೂರಲ್ಲಿ ಸಭೆ ಕರೆಯುವುದಾಗಿ ಹೇಳಿದ್ದಾರೆ. ಉತ್ತರ ಕರ್ನಾಟಕದಲ್ಲಿ ನಮ್ಮ ಸಮಾಜದ ಬಾಂಧವರು ಬಹಳ ಜನ ಇದ್ದಾರೆ. ಅಧಿವೇಶನ ವೇಳೆ ಸಭೆ ಕರೆಯುವಂತೆ ಸಮಾಜದ ಶಾಸಕರು ಮನವಿ ಮಾಡಿದರೂ ಸಿಎಂ ಸ್ಪಂದಿಸಿಲ್ಲ. ಹೀಗಾಗಿ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಬೃಹತ್ ಪ್ರತಿಭಟನೆಗೆ ತೀರ್ಮಾನ ಮಾಡಲಾಗಿದೆ. ಬರಗಾಲ ಇರುವುದರಿಂದ ಜನರಿಗೆ ಪ್ರತಿಭಟನೆಗೆ ಬರುವಂತೆ ಒತ್ತಾಯ ಮಾಡುವುದಿಲ್ಲ. ಮೀಸಲಾತಿ ಹೋರಾಟದಲ್ಲಿ ಆಸಕ್ತಿ ಇರುವವರು ಬನ್ನಿ ಅಂತಾ ವಿನಂತಿ ಮಾಡುತ್ತೇನೆ ಎಂದರು.

ಮೂರು ದಿನಗಳೊಳಗೆ ನಮ್ಮ ಸಮುದಾಯ ಶಾಸಕರು ಅಧಿವೇಶನದಲ್ಲಿ ಧ್ವನಿ ಎತ್ತುವ ಪ್ರಯತ್ನ ಮಾಡಲಿ. ನಮ್ಮ ಸಮುದಾಯದ 20 ಶಾಸಕರು ಪಕ್ಷಾತೀತವಾಗಿ ಹೋರಾಟ ಮಾಡಲಿ. ನಾವು ಹೊರಗೆ ಪ್ರತಿಭಟನೆ ಮಾಡಿದರೆ ನೀವು ಸದನದಲ್ಲಿ ಧ್ವನಿ ಎತ್ತಿ ಎಂದು ಪಂಚಮಸಾಲಿ ಸಮುದಾಯದ ಶಾಸಕರಿಗೆ ಬಸವ ಜಯಮೃತ್ಯುಂಜಯ ಶ್ರೀ ಮನವಿ ಮಾಡಿದರು.

ಸಿಎಂ ಬೆಂಗಳೂರಿನಲ್ಲಿ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಇನ್ನೂ ಕಾಲ ಮಿಂಚಿಲ್ಲ. ಅಧಿವೇಶನ ವೇಳೆ ಸಭೆ ಕರೆದು ಚರ್ಚೆ ಮಾಡಬೇಕು. ನಮ್ಮ ಸಮುದಾಯದ ಇಬ್ಬರು ಸಚಿವರು, ಶಾಸಕರು ತಮಗೆ ಮನವಿ ಮಾಡಿದ್ದಾರೆ. ಡಿ.13ರಂದು ನಮ್ಮ ಸಮುದಾಯದ ಎಲ್ಲ ಬಾಂಧವರು ಬೆಳಗಾವಿಯ ಗಾಂಧಿ ಭವನಕ್ಕೆ ಬನ್ನಿ. ಇಲ್ಲಿಯಿಂದ ಚನ್ನಮ್ಮ ವೃತ್ತದವರೆಗೆ ಮೆರವಣಿಗೆ ಮೂಲಕ ತೆರಳಿ ಪ್ರತಿಭಟನೆ ಮಾಡೋಣ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ