ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ vs ಇತರರು, ಕಾಂಗ್ರೆಸ್ನಲ್ಲಿ ಸತೀಶ್ ಜಾರಕಿಹೊಳಿ vs ಇತರ ನಾಯಕರು
ಸತೀಶ್ ಜಾರಕಿಹೊಳಿ ಅವರನ್ನು ಲೋಕಸಭೆ ಚುನಾವಣೆಗೆ ಕಣಕ್ಕಿಳಿಸಿ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಲು ಡಿಕೆ ಶಿವಕುಮಾರ್ ಪ್ಲಾನ್ ಮಾಡುತ್ತಿದ್ದಾರೆ. ಈ ನಡುವೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಮುಸುಕಿನ ಗುದ್ದಾಟ ನಡೆಸುತ್ತಿರುವ ಸತೀಶ್, ಇದೀಗ ಲಕ್ಷ್ಮಣ ಸವದಿ ಜೊತೆ ವೈಮನಸ್ಸು ಇಟ್ಟುಕೊಂಡಿದ್ದಾರೆ.
![ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ vs ಇತರರು, ಕಾಂಗ್ರೆಸ್ನಲ್ಲಿ ಸತೀಶ್ ಜಾರಕಿಹೊಳಿ vs ಇತರ ನಾಯಕರು](https://images.tv9kannada.com/wp-content/uploads/2023/08/Satish-Jarkiholi.jpg?w=1280)
ಚಿಕ್ಕೋಡಿ, ಆಗಸ್ಟ್ 12: ಜಾರಕಿಹೊಳಿ ಕುಟುಂಬದ ವಿರುದ್ಧ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಇತರೆ ನಾಯಕರು ಮುನಿಸುಗೊಂಡಿದ್ದಾರೆ. ಬಿಜೆಪಿಯಲ್ಲಿ ರಮೇಶ್ ಜಾರಕಿಹೊಳಿ (Ramesh Jarkiholi) ವಿರುದ್ಧ ಬೆಳಗಾವಿಯ ಇತರೆ ನಾಯಕರು ಸಿಡಿದೆದ್ದಿರುವಂತೆ, ಕಾಂಗ್ರೆಸ್ನಲ್ಲೂ ಸತೀಶ್ ಜಾರಕಿಹೊಳಿ (Sathish Jarkiholi) ವಿರುದ್ಧ ಇತರೆ ನಾಯಕರ ಮುನಿಸು ಬಹಿರಂಗವಾಗಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಮುಸುಕಿನ ಗುದ್ದಾಟ ನಡೆಸುತ್ತಿರುವ ಸಚಿವ ಸತೀಶ್ ಅವರು ಇದೀಗ ಲಕ್ಷ್ಮಣ ಸವದಿ ವಿರುದ್ಧ ವೈಮನಸ್ಸು ಹೊಂದಿರುವುದು ನಿಧಾನವಾಗಿ ಬೆಳಕಿಗೆ ಬರುತ್ತಿದೆ. ನಿನ್ನೆ ಅಥಣಿಗೆ ಭೇಟಿ ನೀಡಿದರೂ ಸವದಿ ನಿವಾಸಕ್ಕೆ ಸತೀಶ್ ಭೇಟಿ ನೀಡಿಲ್ಲ.
ಲಕ್ಷ್ಮೀ ಹೆಬ್ಬಾಳ್ಕರ್ ಜೊತೆ ಕೋಲ್ಡ್ವಾರ್ ಇರುವುದು ನಿಜ ಎಂದು ಈ ಹಿಂದೆ ಸ್ವತಃ ಸತೀಶ್ ಜಾರಕಿಹೊಳಿಯೇ ಹೇಳಿದ್ದರು. ಇತ್ತೀಚೆಗೆ ಸಚಿವ ಸತೀಶ್ ಜಾರಕಿಹೊಳಿ ಕರೆದಿದ್ದ ತಾಲೂಕು ಕೆಡಿಪಿ ಸಭೆಗೆ ಶಾಸಕ ಮಹೇಂದ್ರ ತಮ್ಮಣ್ಣವರ್ ಗೈರಾಗಿದ್ದರು.
ಇದನ್ನೂ ಓದಿ: ಲಕ್ಷ್ಮಣ ಸವದಿ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸುತ್ತೇವೆ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಭರವಸೆ
ಲೋಕಸಭೆಗೆ ಸತೀಶ್ ಜಾರಕಿಹೊಳಿ ಸ್ಪರ್ಧಿಸಲಿ ಎಂಬುದು ಬಹುತೇಕ ಕಾಂಗ್ರೆಸ್ ನಾಯಕರ ಅಭಿಪ್ರಾಯವಾಗಿದೆ. ಸತೀಶ್ ಅವರನ್ನು ರಾಷ್ಟ್ರ ರಾಜಕಾರಣಕ್ಕೆ ಕಳಿಸಲು ಡಿಕೆ ಶಿವಕುಮಾರ್ ಕೂಡ ಪ್ಲಾನ್ ಹಾಕಿಕೊಂಡಂತಿದೆ. ಆದರೆ ಚಿಕ್ಕೋಡಿಯಿಂದ ಸವದಿ ಸ್ಪರ್ಧಿಸಿದರೆ ಒಳ್ಳೆಯದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಅದಾಗ್ಯೂ, ರಾಷ್ಟ್ರರಾಜಕಾರಣಕ್ಕೆ ಹೋಗಲ್ಲ ಎಂದು ಲಕ್ಷ್ಮಣ ಸವದಿ ಖಡಾಖಂಡಿತವಾಗಿ ಹೇಳಿದ್ದಾರೆ. ಕಳೆದ ಲೋಕಸಭೆ ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸತೀಶ್, ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದರು. ಹೀಗಾಗಿ ಲೋಕಸಭೆಗೆ ಸತೀಶ್ ಅವರನ್ನು ಬೆಳಗಾವಿಯಿಂದ ಕಣಕ್ಕಿಳಿಸಲು ಡಿಕೆ ಶಿವಕುಮಾರ್ ಪ್ಲ್ಯಾನ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಬೆಳಗಾವಿ ಜಿಲ್ಲೆಗೆ ಹೊಸ ರೂಪ ನೀಡಲು ಫೌಂಡೇಶನ್ ರೆಡಿ ಮಾಡುತ್ತಿದ್ದೇವೆ ಎಂದು ಈ ಹಿಂದೆ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದರು. ಜೊತೆಗೆ ಲಕ್ಷ್ಮಣ ಸವದಿಗೆ ತಾಳ್ಮೆಯಿಂದಿರಿ, ಎಲ್ಲಾ ಸಿಗುತ್ತೆ ಅಂತಾನೂ ಹೇಳಿದ್ದರು. ಈ ಎರಡು ಹೇಳಿಕೆಗಳು ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಕುತೂಹಲ ಕೆರಳಿಸಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ